ಈ ಭಾನುವಾರ ಬೆಂಗಳೂರಿನಲ್ಲಿ ಮದ್ಯಮಾರಾಟ ಬಂದ್
ಹಿಂದೂ ಪರ ಸಂಘಟನೆಗಳ ಮೆರವಣಿಗೆಯ ಹಿನ್ನಲೆಯಲ್ಲಿ ನಗರದ ಪೂರ್ವ ಭಾಗವಾದ ಶಿವಾಜಿನಗರ, ಭಾರತೀನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಲ್ಲಿರುತ್ತದೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ RBNMS ಶಾಲಾ ಮೈದಾನದ ನಾಗದೇವಾಲಯದಿಂದ ಸುಮಾರು 40 ಗಣೇಶನ ವಿಗ್ರಹಗಳ ಭವ್ಯ ವಿಸರ್ಜನಾ ಮೆರವಣಿಗೆಯನ್ನು ಸುಭಾಷ್ ಚಂದ್ರ ಬೋಸ್ ವೆಲ್ ಫೇರ್ ಅಸೋಸಿಯೇಷನ್ ಮುಂದಾಳುತ್ವದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು ಆಯೋಜಿಸಿವೆ.
ಈ ಸಾಮೂಹಿಕ ವಿಸರ್ಜನಾ ಮೆರವಣಿಗೆ ಪೂರ್ವ ಭಾಗದ ವೀರಪಿಳೈ ಸ್ಟ್ರೀಟ್, ಜ್ಯುವೆಲ್ಲರಿ ಸ್ಟ್ರೀಟ್, ಧರ್ಮರಾಜ ದೇವಸ್ಥಾನ ಬೀದಿ, ಕ್ವಾರ್ಡಂಡ್ ಸರ್ಕಲ್, ಸೆಪ್ಟಿಂಗ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಕಾಮರಾಜ ರಸ್ತೆ, ಶಿವನಚೆಟ್ಟಿ ಗಾರ್ಡನ್, ಸೆಂಟ್ ಜಾನ್ಸ್ ರಸ್ತೆ ಮೂಲಕ ಹಾದು ಹಲಸೂರು ಕೆರೆಯವರೆಗೆ ನಡೆಯಲಿದೆ.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10.30 ರವರೆಗೆ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಭಾರತೀನಗರ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಎಲ್ಲಾ ಮದ್ಯದ ಅಂಗಡಿಗಳು ಮುಚ್ಚಬೇಕು ಎಂದು ಪೋಲೀಸ್ ಆಯುಕ್ತ ಮಿರ್ಜಿ ಸೂಚಿಸಿದ್ದಾರೆ.