ಲೋಕಾ ಪೊಲೀಸರ ಕಾಡುತ್ತಿರುವ ಪೇದೆ ಮಂಜುನಾಥ
ಅದಕ್ಕೂ ಮುನ್ನ ವ್ಯಕ್ತಿಯೊಬ್ಬರಿಂದ 5 ಲಕ್ಷ ರೂಪಾಯಿ ಲಂಚವನ್ನು ಅಕ್ಷರಶಃ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದ ಕೊತ್ತನೂರು ಪೊಲೀಸ್ ಠಾಣೆಯ ಪೇದೆ ಪಿಪಿ ಮಂಜುನಾಥನ ಕಥೆ ಏನಾಯಿತು? ಮತ್ತು ಅದೇ ವೇಳೆ (ಆಗಸ್ಟ್ 16ರಂದು) 5 ಲಕ್ಷ ರೂಪಾಯಿ ಲಂಚಕ್ಕೆ ಕೈಯೊಡ್ಡಿದ್ದ ಅದೇ ಠಾಣೆಯ ಇನ್ಸ್ಪೆಕ್ಟರ್ ಎಂ. ಪುರುಷೋತ್ತಮ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಆ ಪ್ರಕರಣ ಎಲ್ಲಿಗೆ ಬಂದು ನಿಂತಿದೆ ಅಂದರೆ...
ಇನ್ನೂ ಪತ್ತೆಯಾಗದ ಪೇದೆ ಮಂಜುನಾಥ: ಸದರಿ ಪೇದೆ ಮಂಜುನಾಥ್ ಇನ್ನೂ ಪತ್ತೆಯಾಗದೆ ಲೋಕಾಯುಕ್ತ ಪೊಲೀಸರನ್ನು ಕಾಡುತ್ತಿದ್ದಾನೆ. ಬೆಂಗಲೂರು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಸಾಹೇಬರಿಗೆ ಯಃಕಶ್ಚಿತ್ ಪೇದೆಯನ್ನು ಸೆರೆಹಿಡಿಯಲು ಇನ್ನೂ ಸಾಧ್ಯವಾಗಿಲ್ಲ.
5 ಲಕ್ಷ ರೂ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿರುವ ಕೊತ್ತನೂರು ಪೊಲೀಸ್ ಠಾಣೆಯ ಪೇದೆ ಮಂಜುನಾಥ ಪತ್ತೆಯಾಗದ ಹೊರತು, ಆತನನ್ನು ವಶಕ್ಕೆ ತೆಗೆದುಕೊಳ್ಳದ ಹೊರತು ಪ್ರಕರಣವನ್ನು ಬೇಧಿಸಿದ್ದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್ಪಿ ಅಬ್ದುಲ್ ಅಹಮದ್ ಅವರಿಗೆ ತನಿಖೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ.
ಹಾಗಾಗಿ, ಲೋಕಾಯುಕ್ತ ಪೊಲೀಸರು ಮೊದಲು ಪೇದೆ ಮಂಜುನಾಥನನ್ನು ಹಿಡಿದುಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಪೇದೆ ಮಂಜುನಾಥ ಹೊತ್ತುಕೊಂಡು ಹೋಗಿರುವ 5 ಲಕ್ಷ ರೂ, ನಗದು ಹಣ ಸಿಗದ ಹೊರತು ಪ್ರಕರಣಕ್ಕೆ ಜೀವ ತುಂಬಲು ಸಾಧ್ಯವಾಗದು. ಏಕೆಂದರೆ 5 ಲಕ್ಷ ರೂ, ನಗದು ಹಣ ಲೋಕಾಯುಕ್ತ ಪೊಲೀಸರಿಗೆ ಸೇರಿದ್ದು. ಅದಕ್ಕೆ ಲೋಕಾ ಪೊಲೀಸರು ಪೊಟ್ಯಾಶಿಯಂ ಪರ್ಮಾಂಗನೇಟ್ ಬಣ್ಣ ಹಚ್ಚಿದ್ದರು.
ಅದು ಕೊತ್ತನೂರು ಠಾಣೆ ಇನ್ಸ್ಪೆಕ್ಟರ್ ಪುರುಷೋತ್ತಮ್ ಮತ್ತು ಪೇದೆ ಮಂಜುನಾಥ ಲಂಚ ತೆಗೆದುಕೊಂಡಿರುವುದನ್ನು ಸಾಬೀತು ಪಡಿಸಲು ಲೋಕಾಯುಕ್ತ ಪೊಲೀಸರ ಕಾರ್ಯತಂತ್ರವಾಗಿತ್ತು. ಈಗ ಆ ಹಣ ಪತ್ತೆಯಾಗದೆ ಕೇಸು ದಾಖಲಿಸುವುದೂ ಕಷ್ಟವಾಗಿದೆ.
ಸಂಪಿಗೆಹಳ್ಳಿ ಇನ್ಸ್ಪೆಕ್ಟರ್ ನಂಜುಂಡೇ ಗೌಡ ಅವರಿಗೆ ಪೇದೆ ಮಂಜುನಾಥನ ಬಂಧನದ ಜವಾಬ್ದಾರಿಯನ್ನು ವಹಿಸಲಾಗಿದೆ. ಆದರೆ ಇನ್ಸ್ಪೆಕ್ಟರ್ ನಂಜುಂಡೇ ಗೌಡರಿಗೆ ಏನು ಒತ್ತಡವೋ ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಒಂದು ವೇಳೆ ನಿಮಗೇನಾದರೂ ಸದರಿ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದರೆ ತಕ್ಷಣ ಪೊಲೀಸರಿಗೆ ತಿಳಿಸಿ. ಇಲ್ಲವಾದಲ್ಲಿ ನಮ್ಮ ಕಣ್ಣೆದುರೇ ಲಂಚ ಪ್ರಕರಣವೊಂದು ಹಳ್ಳ ಹಿಡಿದುಬಿಡುತ್ತದೆ.