ಲೋಕಸಭೆ ಚುನಾವಣೆಗೆ ಸಿದ್ಧರಾಗಿ: ರಾಹುಲ್
ಕಳೆದ ಮೂರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸೋತಿರುವ ಅಭ್ಯರ್ಥಿಗಳು ಸ್ವಯಂ ಪ್ರೇರಿತರಾಗಿ ಹಿಂದೆ ಸರಿದು ಇತರರಿಗೆ ಅವಕಾಶ ನೀಡಬೇಕು ಇದು ದೇಶ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಅನ್ವಯಿಸುತ್ತದೆ ಎಂದು ರಾಹುಲ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಲು ಈಗಿಂದಲೇ ಹೆಚ್ಚಿನ ಶ್ರಮವಹಿಸುತ್ತಿದೆ. ಸೂಕ್ತ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ತಾರತಮ್ಯವಾಗದಂತೆ ಚುನಾವಣೆಗಿಂತ ಏಳೆಂಟು ತಿಂಗಳು ಮೊದಲು ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿಟ್ಟುಕೊಳ್ಳುವಂತೆ ರಾಹುಲ್ ಸೂಚಿಸಿದ್ದಾರೆ.
ಆದರೆ, ಕರ್ನಾಟಕ ಕಾಂಗ್ರೆಸ್ ಸಮಿತಿ ಎರಡು ಅಥವಾ ಮೂರು ತಿಂಗಳ ಮುಂಚೆ ಮಾತ್ರ ಅಭ್ಯರ್ಥಿಗಳ ಪಟ್ಟಿ ತಯಾರಿಸಿಟ್ಟುಕೊಳ್ಳುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿತ್ತು. ರಾಹುಲ್ ಗಾಂಧಿ ಹೊಸ ರೂಲ್ಸ್ ಇನ್ನೂ ದೇಶದ ಎಲ್ಲೆಡೆ ಜಾರಿಗೊಳ್ಳುವ ಮೊದಲೇ ಅಪಸ್ವರಗಳು ಕೇಳಿ ಬಂದಿದೆ.
ಪಕ್ಷದಿಂದ ಟಿಕೆಟ್ ಸಿಗದ ಅಭ್ಯರ್ಥಿಗಳು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಧಿಕೃತ ಅಭ್ಯರ್ಥಿ ಸೋಲುವಂತೆ ಮಾಡಿರುವುದು ಜಾರ್ಖಂಡ್, ಕರ್ನಾಟಕ ಸೇರಿದಂತೆ ಹಲವೆಡೆ ಕಂಡು ಬಂದಿದೆ. ಎಲ್ಲರಲ್ಲೂ ವಿಶ್ವಾಸ ಇಟ್ಟುಕೊಳ್ಳಬೇಕು. ಪಕ್ಷ ಸಂಘಟನೆ ಮೂಲಕ ಎದುರಾಳಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ರಾಹುಲ್ ಹೇಳಿದ್ದಾರೆ.
ಸಂಪುಟಕ್ಕೆ ರಾಹುಲ್ ಇಲ್ಲ: ಟಿಎಂಸಿ ಬೆಂಬಲ ಹಿಂತೆಗೆತದಿಂದ ಖಾಲಿಯಾಗಿರುವ ಕೇಂದ್ರ ಸಚಿವ ಸಂಪುಟ ಸ್ಥಾನಕ್ಕೆ ಕೊನೆ ಗಳಿಗೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಸ್ಥಾನ ನೀಡಲಾಗುತ್ತೆ ಎಂಬ ಸುದ್ದಿ ಹಬ್ಬಿದೆ.
ಆದರೆ, ರಾಹುಲ್ ಗಾಂಧಿ ಮಾತ್ರ ಲೋಕಸಭೆ ಚುನಾವಣೆ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡು ಓಡಾಡುತ್ತಿದ್ದಾರೆ. ಹೊಸಬರ ಸೇರ್ಪಡೆಗೆ ಮನಮೋಹನ್ ಸಿಂಗ್ ಹೆಚ್ಚು ಒತ್ತು ನೀಡುವ ಸಾಧ್ಯತೆ ಇಲ್ಲವಾದರೂ ಹಳಬರು ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಈ ನಡುವೆ ಸಂಪುಟ ವಿಸ್ತರಣೆಯಲ್ಲಿ ಸಂದರ್ಭದಲ್ಲಿ ಡಿಎಂಕೆ ಸಂಸದರಿಗೆ ಉನ್ನತ ಹುದ್ದೆ ನೀಡುವ ಭರವಸೆಯನ್ನು ಮನಮೋಹನ್ ಸಿಂಗ್ ನೀಡಿದ್ದರು. ಆದರೆ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಯುಪಿಎ ಆಫರ್ ತಿರಸ್ಕರಿಸಿದ್ದಾರೆ.
ಯುಪಿಎ 2 ಸರ್ಕಾರ ಅಧಿಕಾರಕ್ಕೆ ಬಂದಾಗ ಡಿಎಂಕೆ 3 ಕ್ಯಾಬಿನೆಟ್ ಹಾಗೂ 4 ರಾಜ್ಯ ಸಚಿವ ಸ್ಥಾನಗಳನ್ನು ಹೊಂದಿತ್ತು. ಆದರೆ, ಎ ರಾಜಾ, ದಯಾನಿಧಿ ಮಾರನ್ ರಾಜೀನಾಮೆ ನಂತರ ಎಂಕೆ ಅಳಗಿರಿ ಮಾತ್ರ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಉಳಿದಿದ್ದಾರೆ. ಉಳಿದಂತೆ ಎಸ್ ಎಸ್ ಪಳನಿಮಾಣಿಕಂ, ಎಸ್ ಗಾಂಧಿಸೆಲ್ವನ್, ಎಸ್ ಜಗತ್ ರಕ್ಷಕನ್ ಹಾಗೂ ಡಿ ನೆಪೊಲಿಯನ್ ರಾಜ್ಯ ಸಚಿವರಾಗಿದ್ದಾರೆ.