'ಕರ್ನಾಟಕದ ವಾಜಪೇಯಿ ಯಡಿಯೂರಪ್ಪ' ಈಗೆಲ್ಲಿದ್ದಾರೆ?
ಎಲ್ಲೂ ಇಲ್ಲ. ಅತ್ತ ಹೈಕಮಾಂಡ್ ತಮ್ಮನ್ನಾಗಲಿ ಅಥವಾ ತಮ್ಮಾಪ್ತರನ್ನಾಗಲಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದಿಲ್ಲ ಎಂಬುದರ ವಾಸನೆ ಬಡಿದಿದ್ದು, ಯಡಿಯೂರಪ್ಪನವರು ಶಾಂತಿ ಮಂತ್ರ ಪಠಿಸುತ್ತಾ ನಗರದ ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮ ಸೇರಿಕೊಂಡಿದ್ದಾರೆ.
ಆರ್ಟ್ ಆಫ್ ಲಿವಿಂಗ್ ನಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ರಾಜಕೀಯ ಆಯಾಸವನ್ನು ಪರಿಹರಿಸಿಕೊಳ್ಳಲು ಯಡಿಯೂರಪ್ಪ ನಿನ್ನೆ ಕನಕಪುರದತ್ತ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಆರೈಕೆ ಮಾಡಿಕೊಳ್ಳುತ್ತಾ, ರವಿಶಂಕರ್ ಗುರೂಜಿಯ ಆಶೀರ್ವಾದ ಪಡೆಯುತ್ತಾ ತಮ್ಮ ವಿರುದ್ಧ ಗರಂ ಆಗಿರುವ ಪಕ್ಷದ ಹೈಕಮಾಂಡ್ ಮಂದಿಯನ್ನು ಸ್ವಲ್ಪ ತಣ್ಣಗೆ ಮಾಡುವುದು ಯಡಿಯೂರಪ್ಪನವರ ದೂರಗಾಮಿ ಆಲೋಚನೆಯಾಗಿದೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರವಿಶಂಕರ್ ಗುರೂಜಿ, ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪ ನಡುವಣ ಕಂದಕವನ್ನು ಕಡಿಮೆ ಮಾಡಲು ಕೈಹಾಕಿದ್ದಾರೆ. ನಿನ್ನೆ Sri Sri College of Ayurvedic Science and Research Hospitalಗೆ ದಾಖಲಾಗುತ್ತಿದ್ದಂತೆ ಸುಮಾರು ಹೊತ್ತು ಇಬ್ಬರೂ ಚರ್ಚೆ ನಡೆಸಿದ್ದಾರೆ ಎಂದು ಕನಕಪುರದಿಂದ ಕೇಳಿಬಂದಿದೆ.
ಕನಕಪುರದ ಮಂದಿ ಏನನ್ನುತ್ತಾರೆ?: ದೈಹಿಕ ದಣಿವಾರಿಸಿಕೊಳ್ಳಲು ಸಾಮಾನ್ಯವಾಗಿ ನೆಲಮಂಗಲ ಅಥವಾ ಆನೇಕಲ್ ನತ್ತ ಹೊರಡುವ ಮಾಜಿ ಸಿಎಂ ಈ ಬಾರಿ ರವಿಶಂಕರ್ ಗುರೂಜಿ ಪಾದತಲ ಸೇರಿಕೊಂಡಿರುವುದನ್ನು ನೋಡಿದರೆ ಯಡಿಯೂರಪ್ಪನವರ ಸ್ಥಿತಿ ಶೋಚನೀಯವಾಗಿದೆ ಎನಿಸುತ್ತದೆ. ಪಕ್ಷ ಈ ಬಾರಿ ಯಡಿಯೂರಪ್ಪ ವಿಷಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಖಚಿತವೆನ್ನಲಾಗಿದೆ. ಹಾಗಾಗಿ, ರವಿಶಂಕರ್ ಗುರೂಜಿ ಅವರ art of politicsಗೆ ಮೊರೆಹೋಗಿದ್ದಾರೆ ಎಂದು ಕನಕಪುರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಇಂದಿನಿಂದ ಮೂರು ದಿನಗಳ ಕಾಲ ಹರಿಯಾಣದ ಸೂರಜ್ ಕುಂಡ್ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ರಾಷ್ಟ್ರೀಯ ಪರಿಷತ್ತಿನ ಸಭೆ ನಡೆಯುತ್ತಿದ್ದು, ಯಾವುದೇ ಕ್ಷಣ ಹೊಸ ಅಧ್ಯಕ್ಷರ ಹೆಸರು ಬಹಿರಂಗವಾಗುವ ಸಾಧ್ಯತೆಗಳು ಹೆಚ್ಚಾಗಿವೆ.