ಬಿಎಸ್ ವೈಗೆ ಮುಖಭಂಗ, ಹೊಸ ಅಧ್ಯಕ್ಷ ಆಯ್ಕೆ ಖಚಿತ
ಬೆಂಗಳೂರು, ಸೆ.25: ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶತಪ್ರಯತ್ನ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಭಾರಿ ಪೆಟ್ಟು ಕೊಡಲು ಬಿಜೆಪಿ ಸಿದ್ಧತೆ ನಡೆಸಿದೆ. ಲಭ್ಯ ಮಾಹಿತಿ ಪ್ರಕಾರ ಬುಧವಾರ ನಡೆಯಲಿರುವ ಪಕ್ಷದ ಕಾರ್ಯಕಾರಿ ಸಭೆಯ ನಂತರ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯದ ಮುನ್ಸೂಚನೆ ಸಿಗಲಿದೆ.
ಸೆ.26 ರಂದು ಹರ್ಯಾಣದಲ್ಲಿ ನಡೆಯಲಿರುವ ಕಾರ್ಯಕಾರಿಣಿ ಮತ್ತು ರಾಷ್ಟ್ರೀಯ ಸಭೆಯ ನಂತರ ಹೊಸ ಅಧ್ಯಕ್ಷರ ಹೆಸರು ಘೋಷಿಸುವ ಸಾಧ್ಯತೆ ನಿಚ್ಚಳವಾಗಿದೆ. ಬಿಎಸ್ ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಬಣ ಎರಡನ್ನೂ ಬಿಟ್ಟು ಎಲ್ಲರಿಗೂ ಒಪ್ಪಿಗೆ ಆಗಬಲ್ಲ ಅಭ್ಯರ್ಥಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಬಿಜೆಪಿ ವರಿಷ್ಠರು ಚಿಂತಿಸಿದ್ದಾರೆ.
ಯಡಿಯೂರಪ್ಪಗೆ ಮುಖಭಂಗ
ಪಕ್ಷದ ವರಿಷ್ಠರ ಇಂಗಿತವನ್ನು ಅರಿತ ಬಿಎಸ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಅವರ ಆಪ್ತರು ಹೇಳಿಕೆ ನೀಡಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ತಮಗೆ ಯಾವುದೇ ಅಧಿಕಾರ ಬೇಡ ಎಂದರೂ ತಮ್ಮ ಬೆಂಬಲಿಗರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿಕೊಂಡು ಮುಂದಿನ ಚುನಾವಣೆ ಎದುರಿಸುವ ಇಚ್ಛೆ ಹೊಂದಿದ್ದರು. ಆದರೆ, ಈಗ ಯಡಿಯೂರಪ್ಪ ಅವರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಯಿದೆ.ಸದಾನಂದ ಗೌಡರು ಯಾವಾಗ ಪಕ್ಷದ ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳಿಕೆ ನೀಡಿದರೋ ತಕ್ಷಣ ಎಚ್ಚೆತ್ತುಕೊಂಡ ಯಡಿಯೂರಪ್ಪ ತಾವು ಕೂಡಾ ಅದೇ ರಾಗ ಹಾಡಿದರು.ನಂತರ ತಮ್ಮ ಆಪ್ತ ಬಳಗದ ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ ಹೆಸರುಗಳನ್ನು ತೇಲಿಬಿಟ್ಟರು. ಜೊತೆಗೆ ಕೆಲ ದಿನಗಳಾದ ಮೇಲೆ ಅವರಿಂದಲೂ ಪಕ್ಷದ ಅಧ್ಯಕ್ಷ ಸ್ಥಾನ ಬೇಡ ಎಂಬ ರಾಗ ಹಾಡಿಸಿದರು.ನಂತರ ನೇರವಾಗಿ ಡಿಸಿಎಂ ಕೆಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿ, ಚುನಾವಣೆ ದೃಷ್ಟಿಯಿಂದ ಪಕ್ಷದ ಸಂಘಟನೆ ಮಾಡಲು ಈಶ್ವರಪ್ಪ ಅಸಮರ್ಥರಾಗಿದ್ದಾರೆ. ಅವರು ಆದಷ್ಟು ಬೇಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸ್ಪರ್ಧೆಯಲ್ಲಿ ಯಾರಿದ್ದಾರೆ?
ಸದಾನಂದ ಗೌಡರನ್ನು ಆದಷ್ಟು ರಾಜ್ಯ ರಾಜಕೀಯದಿಂದ ದೂರ ಇಡಲು ಯತ್ನಿಸುತ್ತಿರುವ ಯಡಿಯೂರಪ್ಪ ಅವರು ತಮಗೂ ಕೂಡಾ ರಾಜ್ಯಾಧ್ಯಕ್ಷ ಬೇಡ ಎಂದಿದ್ದರು.
ನಂತರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಅನಂತಕುಮಾರ್, ನಳಿನ್ ಕುಮಾರ್ ಕಟೀಲು, ಪ್ರಹ್ಲಾದ್ ಜೋಷಿ, ವಿಶ್ವೇಶ್ವರ ಹೆಗ್ಡೆ ಕಾಗೇರಿ ಹಾಗೂ ನಿರ್ಮಲ್ ಕುಮಾರ್ ಸುರಾನಾ ಹೆಸರು ಕೇಳಿ ಬಂದಿತ್ತು. ಅಲ್ಲದೆ ಸಮಾಜ ಕಲ್ಯಾಣ ಸಚಿವ ಎ ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ ಹೆಸರು ಪಟ್ಟಿಯಲ್ಲಿದೆ ಎಂಬ ಸುದ್ದಿ ಇತ್ತು.
ಆದರೆ, ಈಗ ರಾಜ್ಯಾಧ್ಯಕ್ಷ ಸ್ಥಾನ ಅರ್ಧ ಡಜನ್ ಗಟ್ಟಲೆ ಹೆಸರುಗಳ ನಂತರ ಅಂತಿಮ ಹಂತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಮತ್ತು ಪ್ರಹ್ಲಾದ್ ಜೋಷಿ ಹಾಗೂ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರ ಹೆಸರು ಮಾತ್ರ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಈ ಪೈಕಿ ಪ್ರಹ್ಲಾದ್ ಜೋಶಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿದೆ ಬಿಜೆಪಿ ಮೂಲಗಳ ಅಂಬೋಣ.
ಜಾತಿ ಲೆಕ್ಕಾಚಾರದಲ್ಲಿ ಜೋಶಿ ಮುಂದೆ
ಜಾತಿ ಲೆಕ್ಕಾಚಾರದಲ್ಲಿಪ್ರಹ್ಲಾದ್ ಜೋಶಿ ಮುಂದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಹಿಂದೆ ಜಾತಿ ಲೆಕ್ಕಾಚಾರ ಕೂಡಾ ಸೇರಿದೆ. ಲಿಂಗಾಯತ ಮುಖ್ಯಮಂತ್ರಿ, ಕುರುಬ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವುದು ಬಿಜೆಪಿ ವರಿಷ್ಠರ ಉದ್ದೇಶ ಎನ್ನಲಾಗಿದೆ.
ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಬಣಗಳಲ್ಲಿ ಯಾವುದಾದರೂ ಒಂದು ಬಣಕ್ಕೆ ಹೈ ಕಮಾಂಡ್ ಮಣೆ ಹಾಕಿದರೂ ಭಿನ್ನಮತ ಭುಗಿಲೇಳುವುದು ಎಂಬುದು ಖಂಡಿತ. ಹೀಗಾಗಿ ಯುವ ಜನಾಂಗವನ್ನು ಸಂಘಟಿಸಬಲ್ಲ, ಎರಡೂ ಬಣಕ್ಕೂ ಸೇರದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ.
ಆದರೆ, ಈ ಮೂವರು ಅಭ್ಯರ್ಥಿಗಳು ಕೂಡಾ ಬಿಎಸ್ ಯಡಿಯೂರಪ್ಪ ಅವರಿಗೆ ಇಷ್ಟವಾದಂತೆ ಕಾಣುತ್ತಿಲ್ಲ. ಹೀಗಾಗಿ ಅವರು ಕಾರ್ಯಕಾರಿಣಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಹೊಸ ಅಧ್ಯಕ್ಷರ ಆಯ್ಕೆ ನಂತರ ಯಡಿಯೂರಪ್ಪ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲಕಾರಿಯಾಗಿದೆ.
ಅಂತಿಮವಾಗಿ, ಆರ್ ಎಸ್ಎಸ್ ಮೂಲದವರೇ ಆದ ಪ್ರಹ್ಲಾದ ಜೋಶಿಗೆ ಸಾಕ್ಷಾತ್ ಮುಖ್ಯಮಂತ್ರಿಗಳ ಬೆಂಬಲವಿದೆ. ಜತೆಗೆ, ಅನಂತ ಕುಮಾರ್ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತಾರೆ.
ಹಿಂದೊಮ್ಮೆ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಕುರ್ಚಿ ರೇಸಿನಲ್ಲಿ ತಾನಿಲ್ಲ ಎಂದು ಪ್ರಕಟಿಸಿದ್ದರು. ಪ್ರಧಾನವಾಗಿ, ಯಡಿಯೂರಪ್ಪ ಹತ್ತಿರ ಸುಳಿಯದಿರುವ ಪ್ರಹ್ಲಾದ ಜೋಶಿ ರಾಷ್ಟ್ರೀಯ ವರಿಷ್ಠರಿಗೂ ಸಮ್ಮತವಾಗಬಹುದು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.