ಈಶ್ವರಪ್ಪ ರಿವರ್ಸ್ ಗೇರ್; ವೀರಶೈವರ ಪ್ರತಿಭಟನೆ
ನಾನು ಪಕ್ಷದಲ್ಲಿ ಕಿರಿಯ ಮಗನಿದ್ದ ಹಾಗೆ ಹಾಗಾಗಿ ಎಲ್ಲರೂ ನನ್ನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಾರೆ. ನನಗೆ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ದ್ವೇಷವಿಲ್ಲ. ಅವರ ಮೇಲೆ ತುಂಬ ಗೌರವವಿದೆ. ಯಡಿಯೂರಪ್ಪನವರೇ ನಮ್ಮ ನಾಯಕರು, ನಾವೆಲ್ಲ ಅವರ ಬೆಂಬಲಿಗರು ಎಂದು ರಾಜ್ಯಾಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಾವಧಾನದಿಂದ ಮಾತನಾಡಿದ್ದಾರೆ.
ನಮ್ಮಲ್ಲಿ ಏನೇ ಘಟನೆ ನಡೆದರೂ ಅದು ನಮ್ಮ ಮನೆ ನಾವು ಸರಪಡಿಸಿಕೊಳ್ಳುತ್ತೇವೆ. ಈ ಚಿಕ್ಕ ವಿಚಾರವನ್ನು ಮಾದ್ಯಮದವರು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ ಎಂದು ಸಮಧಾನ ವ್ಯಕ್ತಪಡಿಸಿದರು.
ಆಯನೂರು ಮಂಜುನಾಥ್ ಹಾಗೂ ಧನಂಜಯ್ ಕುಮಾರ್ರವರನ್ನು ಹುದ್ದೆಯಿಂದ ವಜಾ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನು 2-3 ದಿನಗಳಲ್ಲಿ ಪಕ್ಷದ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು. ಯಾವುದೇ ದುರುದ್ದೇಶದಿಂದ ಈ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ವೀರಶೈವರ ಪ್ರತಿಭಟನೆ: ಈ ನಡುವೆ ವೀರಶೈವ ಪರಿಷತ್ ಇತ್ತೀಚೆಗೆ ಕರೆ ನೀಡಿದಂತೆ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರ ವಿರುದ್ಧ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಮಂಗಳವಾರ (ಸೆ.25) ಪ್ರತಿಭಟನೆ ನಡೆಸಿದ್ದಾರೆ. ಪ್ರಮಾಣಿಕ ರಾಜಕಾರಣಿ ಅಯನೂರು ಮಂಜುನಾಥ್ ಅವರನ್ನು ವಿನಾಕಾರಣ ವಜಾಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ಶಿವಮೊಗ್ಗದಲ್ಲಿ ಈಶ್ವರಪ್ಪ ಮನೆ ಮುಂದೆ ವೀರಶೈವ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು.
ರಾಜ್ಯಾಧ್ಯಕ್ಷ ಸ್ಥಾನ: ನನಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ಹೆಚ್ಚು ಕಾಲ ಹೊರಲು ಆಗುತ್ತಿಲ್ಲ. ಚುನಾವಣೆ ಹೊತ್ತಿಗೆ ಪಕ್ಷದ ಸಂಘಟನೆ ಮುಖ್ಯವಾಗುತ್ತದೆ ಎಂಬ ಅರಿವು ನನಗೂ ಇದೆ. ಈ ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಹರಿಯಾಣದಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದ್ದು ನೂತನ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎಂದರು.
ಬಿಎಸ್ವೈ ಬೆಂಬಲಿಗರನ್ನು ಕೈ ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆಯನೂರು ಮಂಜುನಾಥ್ ನೀಡಿರುವ ಹೇಳಿಕೆ ಹಾಗೂ ಯಡಿಯೂರಪ್ಪ ಅವರು ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡುವಂತೆ ಈಶ್ವರಪ್ಪ ಅವರಿಗೆ ಒತ್ತಾಯಿಸಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸದ ಈಶ್ವರಪ್ಪ ಇದೆಲ್ಲವೂ ಹೈ ಕಮಾಂಡ್ ನಾಯಕರಿಗೆ ಗೊತ್ತಿದೆ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಷ್ಟೆ ಉತ್ತರಿಸಿದರು.
ಈ ನಡುವೆ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಬಗೆಯ ಸೇವೆಗಳನ್ನು ಒದಗಿಸುವ ನೆಮ್ಮದಿ ಕೇಂದ್ರಗಳಿಗೆ 1400 ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಹಾಗೂ ನಿವೃತ್ತ ಎಂಜಿನಿಯರ್ಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ನಿವೃತ ಇಂಜಿನಿಯರ್ಗಳಿಗೆ 20 ಸಾವಿರ ರೂ. ಸಂಬಳ ನೀಡಲಾಗುವುದು. 5,600 ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಸಂದರ್ಶನ ನಡೆದಿದೆ ಎಂದರು.