ಜನಾ ರೆಡ್ಡಿಗೆ ಇಂದು 4ನೇ ಜೈಲಿನ ದರ್ಶನ
ಜಾಮೀನು ಖರೀದಿ ಪ್ರಕರಣದಲ್ಲಿ ಆಂಧ್ರದ ಎಸಿಬಿ ಪೊಲೀಸರು ಜನಾರ್ದನ ರೆಡ್ಡಿಯನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿ, ಆರೋಪಪಟ್ಟಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಪೊಲೀಸರು ಪ್ರಿಸನರ್ ಆನ್ ಟ್ರಾನ್ಸೀಟ್ ಆದೇಶದ ಮೇರೆಗೆ ಇಂದು ರೆಡ್ಡಿಯನ್ನು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನಿಂದ ಚೆರ್ಲಪಲ್ಲಿ ಜೈಲಿಗೆ ಕರೆದೊಯ್ದರು.
ಜನಾ ರೆಡ್ಡಿಗೆ ಇದು 4ನೇ ಜೈಲಿನ ದರ್ಶನವಾಗಲಿದೆ. ಇದುವರೆಗೆ ಅವರು ಚಂಚಲಗೂಡ ಜೈಲು, ಪರಪ್ಪನ ಅಗ್ರಹಾರ ಜೈಲು, ಬಳ್ಳಾರಿ ಜೈಲು ಇದೀಗ ಚೆರ್ಲಪಲ್ಲಿ ಜೈಲು.
ಆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ 'ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು undeclared emergency (ಅಘೋಷಿತ ತುರ್ತು ಪರಿಸ್ಥಿತಿ) ವಾತಾವರಣ ಸೃಷ್ಟಿಸಿದ್ದಾರೆ. ಇದರಿಂದ ತಮಗೆ ಜೈಲಿನಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ' ಎಂದು ಅಲವತ್ತುಕೊಂಡಿದ್ದಾರೆ.
'ಅಷ್ಟೇ ಅಲ್ಲ ಭಗವಂತ ಮೇಲಿಂದ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾನೆ. ತನಗೆ ಕಷ್ಟ ಕೊಟ್ಟವರನ್ನು ಆ ಭಗವಂತ ಖಂಡಿತಾ ಕ್ಷಮಿಸಲಾರ' ಎಂಬ ಧಾಟಿಯಲ್ಲಿ ಆಕಾಶದತ್ತ ಬೊಟ್ಟು ಮಾಡಿ ತಮ್ಮ ದುಃಖ ಹೊರಹಾಕಿದ್ದಾರೆ.
ಇಲ್ಲಿ ಹೇಳಲೇಬೇಕಾದ ವಿಷಯವೊಂದಿದೆ: ಆಗಿನ್ನೂ ರೆಡ್ಡಿಗಾರು ಜಾಮೀನು ಖರೀದಿ ವ್ಯವಹಾರ ನಡೆಸಿದ್ದಾರೆ ಎಂಬುದು ಬೆಳಕಿಗೆ ಬಂದಿರಲಿಲ್ಲ. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದಂತೆ ನಡೆದುಕೊಂಡಿದ್ದ ರೆಡ್ಡಿಗಾರು ಬೆಂಗಳೂರಿಗೆ ಬಂದಿದ್ದರು. ಹೈದರಾಬಾದಿನಲ್ಲಿ ವ್ಯವಹಾರ ಕುದುರಿಸಿ ಈಗಾಗಲೇ ಜಾಮೀನು ಖರೀದಿಸಲಾಗಿದೆ. ಇಲ್ಲೂ ಅದೇ ವ್ಯವಹಾರ ಮಾಡಿ ಜಾಮೀನು ಪಡೆದುಬಿಟ್ಟರೆ ತಾನು ಸ್ವತಂತ್ರ ಹಕ್ಕಿಯೇ ಎಂಬ ಲೆಕ್ಕಾಚಾರದೊಂದಿಗೆ ಬೆಂಗಳೂರಿಗೆ ಬಂದಿದ್ದರು.
ಹಾಗೆ ಬೆಂಗಳೂರಿಗೆ ಬಂದಿಳಿದ ರೆಡ್ಡಿಗಾರು 'ಈ ದೇಶ ಚೆನ್ನ, ಈ ನಾಡು ಚಿನ್ನ, ಈ ಭಾಷೆ ಚೆನ್ನ' ಎಂದೆಲ್ಲ ಗುನುಗಿದ್ದರು. ಅಂದರೆ ಹೈದರಾಬಾದಿನಲ್ಲಿ ಸಿಬಿಐ ಲಕ್ಷ್ಮಿನಾರಾಯಣ ಮತ್ತು ಚಂಚಲಗೂಡ ಜೈಲು ಅವರನ್ನು ಅಷ್ಟು ಹೈರಾಣಗೊಳಿಸಿತ್ತು. ಹಾಗಾಗಿ, ಇದ್ದರೆ ಕರ್ನಾಟಕದಲ್ಲೇ ಇರುತ್ತೇನೆ ಎಂದು ಎದೆಮುಟ್ಟಿಕೊಂಡು ಹೇಳಿದ್ದರು.
ಕಾಲಾಂತರದಲ್ಲಿ ರೆಡ್ಡಿ ಜಾಮೀನು ಖರೀದಿ ವ್ಯವಹಾರ ಬಯಲಿಗೆ ಬೀಳುತ್ತಿದ್ದಂತೆ ಕೋರ್ಟುಗಳು, ಜೈಲುಗಳು ರೆಡ್ಡಿ ವಿಷಯದಲ್ಲಿ ಮಿಸುಕಾಡುತ್ತಿಲ್ಲ. ಇವಯ್ಯನಿಗೆ ಸದರ ಕೊಟ್ಟರೆ ತಮಗೇ ಎಲ್ಲಿ ಮುಳುಗುನೀರು ತರುತ್ತಾನೋ ಎಂದು 'ಉಹುಃ, ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಮೊನ್ನೆ ಖುದ್ದು ಶ್ರೀರಾಮುಲೂನೇ ಇಡೀ ದಿನ ಪರಪ್ಪನ ಅಗ್ರಹಾರದಲ್ಲಿ ಅಡ್ಡಾಡಿದರೂ ಆತನನ್ನು ಜೈಲಿನೊಳಕ್ಕೆ ಬಿಟ್ಟುಕೊಳ್ಳಲಿಲ್ಲ' ಅದಕ್ಕೇ ರೆಡ್ಡಿಗಾರು ರಾಂಗ್ ಆಗಿರುವುದು. ಅವರಿಗೆ ಈಗ ಪರಪ್ಪನ ಅಗ್ರಹಾರವೂ ಚಂಚಲಗೂಡ ಜೈಲಿನಂತೆ ಭಾಸವಾಗುತ್ತಿದೆ. ಕಾಲಾಯತಸ್ಮೈನಮಃ!