ಗಣೇಶನ ಗಲಾಟೆ: ಚಿಂತಾಮಣಿಯಲ್ಲಿ ಪೇದೆ ಹತ್ಯೆ
ಚಿಕ್ಕಬಳ್ಳಾಪುರ ಜಿಲ್ಲೆ ವಾಣಿಜ್ಯ ನಗರಿ ಚಿಂತಾಮಣಿ ಮೊದಲೇ ಸೂಕ್ಷ್ಮ/ಪ್ರಕ್ಷುಬ್ದ ಪ್ರದೇಶ. ಅಂತಹುದರಲ್ಲಿ ನಿನ್ನೆ ಗಣೇಶನ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಜನ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಆ ವೇಳೆ ಪೊಲೀಸರು ಬಿಗಿ ಭದ್ರತೆ ಹಾಕಿದ್ದರು. ಆದರೆ ಕಿಡಿಗೇಡಿಗಳು ಅದ್ಯಾವುದೋ ಮಾಯದಲ್ಲಿ ತಮ್ಮ ಆಟ ಶುರುವಿಟ್ಟುಕೊಂಡಿದ್ದಾರೆ.
ಅಗ್ರಹಾರದಲ್ಲಿ ಮೆರವಣಿಗೆ ಮೂಲಕ ಗಣೇಶನನ್ನು ಹೊತ್ತೊಯ್ಯುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಕರೆಂಟ್ ಹೋಗಿದೆ. ಕಿಡಿಗೇಡಿಗಳು ಇದೇ ಸುಸಮಯ ಎಂದು ಜನರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಮೊದಲು ಭದ್ರತೆಗೆ ನಿಯೋಜಿತಗೊಂಡಿದ್ದ ಪೊಲೀಸರನ್ನು ಗುರಿಯಾಗಿಸಿಕೊಂಡಿದ್ದಾರೆ. ಗಲಾಟೆ ವೇಳೆ ಬೀಸಿ ಬಂದ ಕಲ್ಲೊಂದು 50 ವರ್ಷದ ಹೆಡ್ ಕಾನ್ಸ್ ಟೇಬಲ್ ಒಬ್ಬರ ಹೆಡ್ ಮೇಲೆ ಬಿದ್ದಿವೆ.
ಸ್ಥಳದಲ್ಲೇ ಕುಸಿದು ಬಿದ್ದ ಪೇದೆ ಸುಧಾಕರ ರೆಡ್ಡಿ ಅವರನ್ನು ತಕ್ಷಣ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆ ವೇಳೆಗೆ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ. ಇತ್ತ ಕಿಡಿಗೇಡಿಗಳು ರಣಕೇಕೆ ಹಾಕಿದ್ದಾರೆ.
ಕೇಂದ್ರ ವಲಯ ಐಜಿಪಿ ಅರುಣ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಗರದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾಮಗೊಂಡನಹಳ್ಳಿಯಲ್ಲೂ ರಣಕೇಕೆ: ಇತ್ತ ಬೆಂಗಳೂರಿನ ಹೊರವಲಯದಲ್ಲಿಯೂ ನಿನ್ನೆ ಗಣೇಶ ವಿಸರ್ಜನೆ ವೇಳೆ ರಾದ್ಧಾಂತ ನಡೆದಿದೆ. ಇಲ್ಲೂ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ರಾಮಗೊಂಡನಹಳ್ಳಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಆದರೆ ಅದೆಲ್ಲಿಂದ ಬಂದರೋ ಆ ಕಿಡಿಗೇಡಿಗಳು... ಬೈಕುಗಳಲ್ಲಿ ಬಂದವರೇ ವಿದ್ಯಾರ್ಥಿ ಸಮೂಹದ ಮೇಲೆ ಕಲ್ಲು ತೂರಿದ್ದಾರೆ. ಅದರಿಂದ ಹತ್ತಾರು ವಿದ್ಯಾರ್ಥಿಗಳಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಧಿಕ್ಕಾರವಿರಲಿ ಇಂತಹ ಸಮಾಜಘಾತುಕ ಶಕ್ತಿಗಳಿಗೆ.
ಈ ಅಹಿತಕರ ಘಟನೆಗಳ ಮಧ್ಯೆ ಕೋಟೆ ನಾಡು ದುರ್ಗದಲ್ಲಿ ಜನ ಗಣೇಶನ ಹಬ್ಬವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಮಹಿಳೆಯರು ಸಖತ್ತಾಗಿ ಸಂಭ್ರಮಿಸಿದ್ದಾರೆ. ಮೊದಲೇ ವೀರನಾರಿ ಒನಕೆ ಓಬವ್ವನ ನಾಡಿನವರು.
ಹಾಗಾಗಿ ಗಣೇಶನ ವಿಸರ್ಜನೆ ವೇಳೆ ತಡ ರಾತ್ರಿ ನಡೆದ ಮೆರವಣಿಗೆಯಲ್ಲಿ ನೂರಾರು ನಾರಿಯರು ಪಾಲ್ಗೊಂಡಿದ್ದಾರೆ. ಬಾಲಕಿಯರು/ಯುವತಿಯರು/ಗೃಹಿಣಿಯರು ಅವರು, ಇವರು ಎನ್ನದೆ ಮೆರವಣಿಗೆಯುದ್ದಕ್ಕೂ ಸಖತ್ ಸ್ಟೆಪ್ಸ್ ಹಾಕಿ ಫುಲ್ ಎಂಜಾಮ್ ಮಾಡಿದ್ದಾರೆ ಎಂಬಲ್ಲಿಗೆ ಗಣೇಶನ ಗಲಾಟೆ ಮುಗಿದಿದೆ. ಮುಂದಿನ ವರ್ಷ ಮತ್ತೆ ಗಣೇಶ ಸಣ್ಣ ಕರೆಯಲ್ಲಿ ಎದ್ದು ಬರುವವರೆಗೂ ಗುಡ್ ಬೈ!