ಟೀಂ ಅಣ್ಣಾ ನಾನು ಒಡೆಯಲಿಲ್ಲ: ಬಾಬಾ
ರಾಜಕೀಯ ಪ್ರೇರಿತರಾಗಿ ಕೆಲವರು ಈ ರೀತಿ ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಅಣ್ಣಾ ಹಜಾರೆ ಹಾಗೂ ನಮ್ಮ ಹೋರಾಟದ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ನಾನು ಯಾರನ್ನು ಎತ್ತಿಕಟ್ಟಿಲ್ಲ. ಯಾರಿಗೂ ಟೀಂ ಅಣ್ಣಾ ಒಡೆಯುವಂತೆ ಪ್ರೇರೇಪಿಸಿಲ್ಲ ಎಂದು ಪತಂಜಲಿ ಯೋಗಪೀಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಾಬಾ ರಾಮದೇವ್ ಹೇಳಿದ್ದಾರೆ.
'ನನ್ನ ಹಾಗೂ ಅಣ್ಣಾ ಹಜಾರೆ ಅವರ ಹೋರಾಟದ ಸ್ವರೂಪ ಮುಂಬರುವ ದಿನಗಳಲ್ಲಿ ಎಲ್ಲರಿಗೂ ಪ್ರಕಟವಾಗಲಿದೆ. ಅಕ್ಟೋಬರ್ 2 ರ ಗಾಂಧಿ ಜಯಂತಿ ದಿನದಂದು ಜಂತರ್ ಮಂತರ್ ಬಳಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಅದರೆ, ಅದೇ ದಿನದಂದು ದೇಶದ ಸುಮಾರು 650 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸ್ವದೇಶಿ ಅಂದೋಲನ ಆರಂಭವಾಗಲಿದೆ' ಎಂದು ಬಾಬಾ ರಾಮದೇಶ್ ಇದೇ ಸಂದರ್ಭದಲ್ಲಿ ಹೇಳಿದರು.
ಗಾಂಧಿವಾದಿ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನವು ಕಳೆದೊಂದು ವರ್ಷದಲ್ಲಿ ದೇಶದಲ್ಲಿ ತೀವ್ರ ಸಂಚನವನ್ನುಂಟುಮಾಡಿತ್ತು. ಇದಕ್ಕೆ ಅರವಿಂದ್ ಕೇಜ್ರಿವಾಲಾ ಅವರು ಸಮರ್ಥವಾಗಿ ಅಣ್ಣಾಗೆ ಹೆಗಲು ಕೊಟ್ಟಿದ್ದರು. ಆದರೆ, ಅರವಿಂದ್ ಕೇಜ್ರಿವಾಲಾ ರಾಜಕೀಯವಾಗಿ ಹೋರಾಡುವುದಕ್ಕೆ ಮುಂದಾಗಿತ್ತಿದ್ದಂತೆ ಅಣ್ಣಾ ಅವರು ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಲ್ಲದೆ ಬಾಬಾ ರಾಮದೇವ್ ಅವರ ಹೋರಾಟದ ವೇದಿಕೆ ಏರಿದ್ದರು.
ಬಾಬಾ ರಾಮದೇವ್ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು ಕಪ್ಪು ಹಣ ವಾಪಸ್ ತರುವ ಚಳವಳಿಗೆ ಅಣ್ಣಾ ಹಜಾರೆ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಣ್ಣಾ ಅವರು ರಾಜಕೀಯದಿಂದ ದೂರ ಇರಬೇಕು ಎಂದು ಬಯಸಿರುವ ಟೀಂ ಅಣ್ಣಾದ ಇತರೆ ಪ್ರಮುಖ ಸದಸ್ಯರಾದ ಕಿರಣ್ ಬೇಡಿ ಹಾಗೂ ನ್ಯಾ ಸಂತೋಷ್ ಹೆಗ್ಡೆ ಅವರು ಸಹ ಬಾಬಾ ರಾಮದೇವ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.