ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕೆಲಸವನ್ನು ಪ್ರಧಾನಿ ಮೊದಲೇ ಮಾಡಬೇಕಿತ್ತು

By Prasad
|
Google Oneindia Kannada News

PM should address Indians more often
ಬೆಂಗಳೂರು, ಸೆ. 22 : ಭಾರತದ ಆರ್ಥಿಕ ಮಟ್ಟ ಯಾವ ಸ್ಥಿತಿಯಲ್ಲಿದೆ? ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ದೇಶ ಸಿದ್ಧವಾಗಿದೆಯಾ? ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೆಲ ಕಠಿಣ ಕ್ರಮಗಳನ್ನು ಯಾಕೆ ತೆಗೆದುಕೊಳ್ಳಬೇಕಾಗಿದೆ? ಡೀಸೆಲ್ ಬೆಲೆಯನ್ನು ಯಾಕೆ ಹೆಚ್ಚಿಸಲಾಗಿದೆ? ಎಫ್‌ಡಿಐಗೆ ಯಾಕೆ ದ್ವಾರ ತೆರೆಯಲಾಗಿದೆ? ಮುಂದಿನ ಕಷ್ಟಕರ ಜೀವನಕ್ಕೆ ದೇಶದ ಶ್ರೀಸಾಮಾನ್ಯನನ್ನು ಏಕೆ ಈಗಿಂದಲೇ ಸಿದ್ಧಗೊಳಿಸಬೇಕು?

ದೇಶದ ಆರ್ಥಿಕ ಸ್ಥಿತಿ ಏರುಪೇರಾಗುತ್ತಿರುವುದು ಹೊಸದೇನಲ್ಲ. ಆದರೆ, ಈಗಿನ ಪರಿಸ್ಥಿತಿ ತೀರ ಕ್ಲಿಷ್ಟಕರವಾಗಿದೆ. 1991ರಲ್ಲಿ ಭಾರದ ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟನ್ನು ದೇಶ ಇಂದು ಎದುರಿಸುತ್ತಿದೆ ಎಂದು ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಶುಕ್ರವಾರ ದೇಶವನ್ನುದ್ದೇಶಿಸಿ ಹೇಳಿದ್ದಾರೆ. ಸಿಂಗ್ ಅವರು ದೇಶದ ಆರ್ಥಿಕತೆಯ ಹರಿಕಾರ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಆದರೆ, ಮೇಲಿನಂಥ ಪ್ರಶ್ನೆಗಳಿಗೆ ಉತ್ತರಗಳನ್ನು ನೇರವಾಗಿ ಶ್ರೀಸಾಮಾನ್ಯನ ಎದಿರು ನೀಡಲು ಪ್ರಧಾನಿ ಯಾವತ್ತಾದರೂ ಯತ್ನಿಸಿದ್ದರಾ?

ಇಲ್ಲವೇ ಇಲ್ಲ. ಆದರೂ, ಕಾಂಗ್ರೆಸ್ ನೇತೃತ್ವದ ಅಂಗಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಕೇಂದ್ರ ಆರ್ಥಿಕ ನೀತಿಯ ವಿರುದ್ಧ ಸಿಡಿದೆದ್ದ ಮೇಲೆ ಅನಿವಾರ್ಯವಾಗಿ ಪ್ರಧಾನಿ, ಭಾರತದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ತಾವು ತೆಗೆದುಕೊಂಡಿರುವ ಕ್ರಮಗಳನ್ನು ಸಮರ್ಥಿಸಿಕೊಂಡು ಭಾಷಣ ಮಾಡಿದ್ದಾರೆ. ಈ ಕೆಲಸವನ್ನು ಪ್ರಧಾನಿ ಬಂದ್‌ಗಿಂತ ಮೊದಲೇ ಮಾಡಿದ್ದರೆ ವಿರೋಧ ಪಕ್ಷದ ಬಾಯನ್ನಾದರೂ ಮುಚ್ಚಿಸಬಹುದಿತ್ತು.

ವಸ್ತುಸ್ಥಿತಿ ಏನೇ ಇರಲಿ, ದೇಶ ಅರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ವಿರೋಧ ಪಕ್ಷಗಳು ಕೂಡ ಅಲ್ಲಗಳೆಯುವುದಿಲ್ಲ. ಆದರೆ, ಒಂದೆಡೆ 2ಜಿ ತರಂಗಗುಚ್ಛ, ಕೋಲ್ ಗೇಟ್, ಕಾಮನ್ವೆಲ್ತ್‌ನಂತಹ ಕೋಟಿ ಕೋಟಿ ಮೌಲ್ಯದ ಹಗರಣಗಳು ನಡೆಯುತ್ತಿರುವಾಗ, ಶ್ರೀಸಾಮಾನ್ಯನ ಮೇಲೆ ಬೆಲೆ ಏರಿಕೆಯ ಹೊರೆ ಹೇರುವುದು ಯಾವ ನ್ಯಾಯ ಎಂದು ವಿರೋಧಪಕ್ಷಗಳು ಕೂಗು ಎಬ್ಬಿಸಿವೆ. ಇವಕ್ಕೆಲ್ಲ ಪ್ರಧಾನಿಯವರು ಶುಕ್ರವಾರ ದೂರದರ್ಶನದ ಮುಖಾಂತರ ಮಾಡಿದ ಭಾಷಣದಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ.

ಪ್ರಧಾನಿಯಾದ ಮೇಲೆ ಇಂಥ ಭಾಷಣ ಮಾಡಿದ್ದು ಎಷ್ಟನೇ ಬಾರಿ? ಸ್ವಾತಂತ್ರ್ಯ ದಿನಾಚರಣೆಯಂದು ದೇಶವನ್ನು ಉದ್ದೇಶಿಸುವುದನ್ನು ಹೊರತುಪಡಿಸಿದರೆ, 2008ರ ನವೆಂಬಲ್ 26ರಂದು ಮುಂಬೈನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ನಂತರ, ಉಗ್ರರ ದಾಳಿಯನ್ನು ಖಂಡಿಸಿ, ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೇಲೆ ಪ್ರಧಾನಿ ಯಾವತ್ತೂ ಇಂಥ ಭಾಷಣ ಮಾಡಿರಲಿಲ್ಲ. ಜನರನ್ನು ಉದ್ದೇಶಿಸಿ ದೇಶದ ಸ್ಥಿತಿಗತಿಯ ಬಗ್ಗೆ ವಿವರಣೆ ನೀಡಲು ಪ್ರಧಾನಿಗೇನು ತೊಂದರೆ?

ಹಾಗೆ ನೋಡಿದರೆ, ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಪ್ರತಿ ಭಾನುವಾರ ಜನರ ಮುಂದೆ ತಮ್ಮ ಮತ್ತು ದೇಶದ ಸುಖ ದುಃಖಗಳನ್ನು ಹೇಳಿಕೊಂಡು ಹಗುರಾಗುತ್ತಾರೆ. ಇದನ್ನು ಯುಟ್ಯೂಬ್, ಶ್ವೇತಭವನದ ವೆಬ್ ಸೈಟ್ ಮುಖಾಂತರ ಅಮೆರಿಕಾದ ಜನರೆಲ್ಲ ಕೇಳುತ್ತಾರೆ. ನಮ್ಮ ಭಾರತದ ಪ್ರಧಾನಿಯ ಬಗೆಗಿನ ಟೀಕೆಯೆಂದರೆ, ಅವರು ಶ್ರೀಸಾಮಾನ್ಯರೊಂದಿಗೆ ಬೆರೆಯುವುದಿಲ್ಲ, ಜನತಾ ದರ್ಶನ ಮಾಡುವುದಿಲ್ಲ, ಇನ್ನು ಗ್ರಾಮ್ಯ ವಾಸವಂತೂ ದೂರವೇ ಉಳಿಯಿತು. ಆದರೆ, ಕನಿಷ್ಠಪಕ್ಷ ಜನರನ್ನು ಆಗಾಗ ಉದ್ದೇಶಿಸಿ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಿಳಿಸಿಕೊಡಲಿ ಎಂಬುದೇ ಜನಸಾಮಾನ್ಯರ ಆಶಯ.

English summary
After a gap of 4 long years PM Dr. Manmohan Singh has addressed the nation, barring Independence Day speech, explaining the people in what state India is. Singh should have done it earlier to shut opposition mouth and should do it regularly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X