ಭವಿಷ್ಯ ಹೇಳೊಲ್ಲ; ಬದಲಿಗೆ ರೂಪಿಸುತ್ತೇನೆ: ಕೋಡಿಶ್ರೀ
ಈ ಬಾರಿ ತಮ್ಮ ವರಸೆ ಬದಲಿಸಿರುವ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರು ನಿನ್ನೆ ಕೊಪ್ಪಳದಲ್ಲಿ ಮಾತನಾಡುತ್ತಾ ನಾನು ಭವಿಷ್ಯ ಹೇಳುವುದಿಲ್ಲ; ಬದಲಿಗೆ ನಾನೇ ಭವಿಷ್ಯ ರೂಪಿಸುತ್ತೇನೆ ಎಂದು ಹೇಳುವ ಮೂಲಕ ನಾಡಿನ ಜನತೆಯಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.
ಆದರೆ ಈ ಹಿಂದೆ ಭವಿಷ್ಯವ ನುಡಿದಂತೆ 'ದಸರಾ ವೇಳೆಗೆ ಆಘಾತಕಾರಿ ಘಟನೆ ಸಂಭವಿಸುವುದು ನಿಶ್ಚಿತ' ಎಂದು ಶಿವಾನಂದ ಶಿವಯೋಗಿಗಳು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಮಟ್ಟಿಗೆ ಈ ಆತಂಕಕಾರಿ ಘಟನೆ ಸಂಭವಿಸಲಿದೆ. ಆದರೆ ಅದು ಯಾವುದು ಎಂದು ಮಾತ್ರ ಹೇಳುವುದಿಲ್ಲ. ಇದರಿಂದ ಜನ ಭಯಭೀತರಾಗುತ್ಥಾರೆ ಎಂದು ನಿಗೂಢವಾಗಿ ಹೇಳಿದ್ದಾರೆ.
ಈ ಹಿಂದೆ ತಾವು ನುಡಿದ ಭವಿಷ್ಯವಾಣಿ ನಿಜವಾಗಿದೆ. 3 ದೊರೆಗಳು ಈ ನಾಡನ್ನು ಆಳಲಿದ್ದಾರೆ ಎಂಬುದಾಗಿ ಹೇಳಿದ್ದೆ. ಅದರಂತೆ ಜಗದೀಶ ಶೆಟ್ಟರ್ ಮೂರನೇ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿ ಸುಮ್ಮನಾಗದ ಸ್ವಾಮೀಜಿಗಳು ಇನ್ನಾರು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ದಸರಾ ಸಂದರ್ಭದಲ್ಲಿ ಸಂಭವಿಸುವ ಘಟನೆಯಿಂದ ರಾಜಕೀಯ ಅಸ್ಥಿರತೆ ಉಂಟಾಗಲಿದೆ ಎಂದು ಸೇರಿಸಿದರು
ಇನ್ನು, ದಿನಕ್ಕೊಂದು ಹೇಳಿಕೆ ನೀಡಿ ರಾಜಕೀಯವಾಗಿ ಗೊಂದಲದ ವಾತಾವರಣ ಹುಟ್ಟುಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭವಿಷ್ಯ ಏನು ಎಂದು ಕೇಳಿದ ಪ್ರಶ್ನೆಗೆ 'ಯಾವುದೇ ವ್ಯಕ್ತಿಯ ವೈಯಕ್ತಿಕ ವಿಷಯ ಕುರಿತು ಇದುವರೆಗೆ ಭವಿಷ್ಯ ಹೇಳಿಲ್ಲ, ಹಾಗೆ ಹೇಳುವುದೂ ಇಲ್ಲ' ಎಂದು ಉತ್ತರಿಸಿದ್ದಾರೆ.
ಜನರಲ್ಲಿ ಪ್ರಳಯದ ಬಗ್ಗೆ ಆತಂಕ ಮೂಡಿದೆ. ಪ್ರಚಲಿತ ಅಭಿಪ್ರಾಯದಂತೆ ಪ್ರಳಯವೂ ಸಂಭವಿಸುವುದಿಲ್ಲ. ಸೂರ್ಯ ಪಥ ಬದಲಿಸುವುದರಿಂದ ವಾತಾವರಣದ ಉಷ್ಣಾಂಶ ಹೆಚ್ಚಾಗುತ್ತದೆ. ಇದರಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ ಅಷ್ಟೇ. ಆದರೆ, ಜನರಲ್ಲಿ ಈಗ ಆತಂಕ ಮೂಡಿಸುವ ರೀತಿಯಲ್ಲಿ ಪ್ರಳಯ ಸಂಭವಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.