ಆಯನೂರು ಮಂಜುನಾಥ್, ಧನಂಜಯ್ ಕುಮಾರ್ ಔಟ್
ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿರುವ ಪಕ್ಷದ ಕಚೇರಿಗೆ ಆದೇಶ ಪತ್ರವನ್ನು ನಿನ್ನೆ ರಾತ್ರಿ (ಸೆ.21) ಕಳಿಸಿಕೊಟ್ಟಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ವಕ್ತಾರ ಸ್ಥಾನದಿಂದ ಮಂಜುನಾಥ್ ಅವರನ್ನು ತೆರವುಗೊಳಿಸಿದ್ದಾರೆ.
ಅದೇ ರೀತಿ, ಮುಖ್ಯಮಂತ್ರಿ ಶೆಟ್ಟರ್ ಅವರು ಧನಂಜಯ್ ಕುಮಾರ್ ಅವರನ್ನು ಸರಕಾರದ ವಿಶೇಷ ಪ್ರತಿನಿಧಿ ಸ್ಥಾನದಿಂದ ತೆರವುಗೊಳಿಸಿ, ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದ ನಾಗೇಶ್ ಅವರನ್ನು ಧನಂಜಯ್ ಕುಮಾರ್ ಅವರ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಬೈಕೆರೆ ನಾಗೇಶ್ ಈಗಾಗಲೇ ಹೆಚ್ಚುವರಿ ಪ್ರತಿನಿಧಿಯಾಗಿ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಆಯನೂರು ಮಂಜುನಾಥ್ ಮತ್ತು ಧನಂಜಯ್ ಕುಮಾರ್ ಅವರನ್ನು ಏಕಪಕ್ಷೀಯವಾಗಿ ಹುದ್ದೆಗಳಿಂದ ತೆರವುಗೊಳಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಆದರೆ ಪಕ್ಷದ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ವಜಾ ಆದೇಶಗಳು ಇನ್ನೂ ಅವರಿಬ್ಬರಿಗೂ ತಲುಪಿಲ್ಲ! ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಯಡಿಯೂರಪ್ಪ ಪಾಳಯಕ್ಕೆ ಚುರುಕುಮುಟ್ಟಿಸುವ ಪ್ರಯುತ್ನ ಇದಾಗಿದೆ ಎನ್ನಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು 'ದಂಡು ಪಾಳ್ಯದ ಸೇನಾಧಿಪತಿ' ಎಂದೂ, ನಟಿ ಪೂಜಾ ಗಾಂಧಿ ಅವರನ್ನು 'ದಂಡುಪಾಳ್ಯದ ಕ್ವೀನ್' ಎಂದು ಆಯನೂರು ಇತ್ತೀಚೆಗೆ ಸಂಭೋದಿಸಿದ್ದರು. ಜತೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಣತಿಯಂತೆ ಸಾರಿಗೆ ಸಚಿವ ಆರ್ ಅಶೋಕ್ ಅವರು ನಡೆದುಕೊಳ್ಳುತ್ತಿದ್ದಾರೆ. ಅಶೋಕ್ ರಾಜೀನಾಮೆ ನೀಡಲಿ ಎಂದೂ ಮಂಜುನಾಥ್, ಅಶೋಕ್ ತಲೆದಂಡ ಬಯಸಿದ್ದರು.
ಆಯನೂರು ಮಂಜುನಾಥ್ ವಿಷಯದಲ್ಲಿ ಈಶ್ವರಪ್ಪನವರ ತಕ್ಷಣದ ನಿರ್ಧಾರಕ್ಕೆ ಮಂಜುನಾಥರ ಈ ಹರಕುಬಾಯಿಯೇ ಕಾರಣವಾಗಿದೆ ಎನ್ನಲಾಗಿದೆ. ಇನ್ನು, ಧನಂಜಯ್ ಕುಮಾರ್ ಅವರು ಈ ಹಿಂದೆ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಸ್ಥಾನ ವಂಚಿತರಾಗುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬಂದಿದ್ದವು.
ಜತೆಗೆ, ಮೊನ್ನೆ ಕಾವೇರಿ ನದಿ ನೀರು ಹಂಚಿಕೆ ವಿಷಯದ ಕುರಿತು ಪ್ರಧಾನಿ ಸಿಂಗ್ ಕರೆದಿದ್ದ ಸಭೆಗೆ ಧನಂಜಯ್ ಕುಮಾರ್ ಗೈರು ಹಾಜರಾಗಿದ್ದರು. ಇದು ಸಿಎಂ ಶೆಟ್ಟರ್ ಅವರನ್ನು ಕೆರಳಿಸಿತ್ತು. ಆದರೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಅಂದು ತಾವು ಸಭೆಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ ಎಂದು ಮುಂಚಿತವಾಗಿಯೇ ಮುಖ್ಯಮಂತ್ರಿಗೆ ತಿಳಿಸಿದ್ದೆ ಎಂದು ಧನಂಜಯ್ ಕುಮಾರ್ ಈಗ ಪ್ರತಿಕ್ರಿಯಿಸಿದ್ದಾರೆ.