ಗಣೇಶ ಹಬ್ಬದಂದು ಸರಕು ಲಾರಿ ಮುಷ್ಕರ
ಬೆಂಗಳೂರು, ಸೆ.19: ನಿರೀಕ್ಷೆಯಂತೆ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಮುಷ್ಕರ ಹೂಡಲು ಲಾರಿ ಮಾಲೀಕರ ಒಕ್ಕೂಟ ನಿರ್ಧರಿಸಿದೆ. ಸೆ.20 ರ ಭಾರತ್ ಬಂದ್ ಗೆ ರಿಹರ್ಸಲ್ ಮಾದರಿಯಲ್ಲಿ ಲಾರಿ ಮುಷ್ಕರ ದೇಶದಾದ್ಯಂತ ಜನರನ್ನು ಸಂಕಷ್ಟಕ್ಕೆ ಈಡು ಮಾಡಲಿದೆ.
ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಾ ಈ ವಿಷಯ ಪ್ರಕಟಿಸಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಆರ್ ಷಣ್ಮುಗಪ್ಪ, ಗಣೇಶ ಹಬ್ಬದ ದಿನ ಸೆ.19 ರಿಂದ ಮುಷ್ಕರ ಆರಂಭವಾಗಿ ಸೆ.20ರ ಸಂಜೆ ತನಕ ನಡೆಯಲಿದೆ ಎಂದರು.
ಸೆ. 18ರಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಮುಂಬೈನಲ್ಲಿ ಸಭೆ ಸೇರಿ ಉದ್ದೇಶಿತ ಮುಷ್ಕರದ ರೂಪುರೇಷೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಸೆ.19 ರ ಮಧ್ಯರಾತ್ರಿಯಿಂದ ಸೆ.20 ರ ಮಧ್ಯರಾತ್ರಿ ತನಕ ಮುಷ್ಕರ ನಡೆಸಲಾಗುತ್ತದೆ ಎಂದು ಷಣ್ಮುಗಪ್ಪ ಹೇಳಿದರು.
ಈಗಾಗಲೇ ಟೋಲ್ ಸಂಗ್ರಹ, ಚಾಲಕರ ಕೊರತೆಯಿಂದಾಗಿ ನಾನಾ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಡೀಸೆಲ್ ಬೆಲೆಯೇರಿಕೆ ನಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ ಹಾಕಲಿವೆ. ಹಾಗಾಗಿ ನಮಗೆ ಮುಷ್ಕರ ನಡೆಸದೆ ಬೇರೆ ದಾರಿ ಇಲ್ಲ ಎಂದು ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರಗಳು ಕೂಡಾ ಹೆಚ್ಚಿನ ಸೆಸ್ ಹೊರೆಯನ್ನು ಇಳಿಸಬೇಕು. ಡೀಸೆಲ್ ದರ ಏರಿಕೆಯಿಂದ ನಿತ್ಯ ಜೀವನದ ಬದುಕು ಅಸ್ತವ್ಯಸ್ತಗೊಳ್ಳಲಿದೆ. [ಗಣೇಶನ ಒಲಿಸಿಕೊಳ್ಳಲು 7 ವಿಧಾನಗಳು]
ಡಿಸೇಲ್ ಮೇಲೆ ರು. 21 ಹೆಚ್ಚುವರಿ ತೆರಿಗೆ ವಿಧಿಸಿರುವುದು ಏಕೆ ಎಂದು ಷಣ್ಮುಗಪ್ಪ ಪ್ರಶ್ನಿಸಿದ್ದಾರೆ. ಲಾರಿ ಮುಷ್ಕರದಿಂದ ಹಬ್ಬದ ಸಂದರ್ಭದಲ್ಲಿ ಅಗತ್ಯವಾದ ತರಕಾರಿ, ಹೂವು, ಹಣ್ಣು, ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಲಿವೆ. ಇದರ ಜೊತೆಗೆ ಎಲ್ ಪಿಜಿ ಸಮಸ್ಯೆ ಕೂಡಾ ಬೃಹತ್ ಆಗಿ ಕಾಡಲಿದೆ.
ಮಂಗಳೂರು ಬಂದರಿನಿಂದ ಅಡುಗೆ ಅನಿಲ ಸರಬರಾಜು ಮಾಡುವ ಸುಮಾರು 3600ಕ್ಕೂ ಹೆಚ್ಚು ಟ್ಯಾಂಕರ್ ಲಾರಿಗಳು ಸಾಗಣೆ ಸ್ಥಗಿತಗೊಳಿಸಲಿದೆ. ಅಲ್ಲದೆ ಶಿರಾಢಿ ಘಾಟ್ ನಲ್ಲಿ ಕಳೆದ ವಾರದಿಂದ ಪ್ರತಿನಿತ್ಯ 8-10 ಗಂಟೆ ಸಂಚಾರ ಸ್ಥಗಿತಗೊಳ್ಳುತ್ತಿರುವುದು ಆತಂಕ ಇನ್ನಷ್ಟು ಹೆಚ್ಚಿಸಿದೆ.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಅಡುಗೆ ಅನಿಲ ಸರಬರಾಜು ವ್ಯತ್ಯಯವಾಗುವ ಲಕ್ಷಣಗಳು ಕಂಡು ಬಂದಿದೆ. ಕರ್ನಾಟಕಕ್ಕೆ ಸರಕು ಲಾರಿಗಳು ಪ್ರತಿದಿನ ಸುಮಾರು 10 ಸಾವಿರ ಟನ್ ಗ್ಯಾಸ್ ಸರಬರಾಜು ಮಾಡುತ್ತಿವೆ.