ಎಚ್ಡಿಕೆ ಮನೆಯಲಿ ಅಶೋಕ್ ಸಾರಿಗೆ ಕಚೇರಿ ತೆರೆಯಲಿ
ಕುಮಾರಸ್ವಾಮಿ ಮನೆಯಲ್ಲಿ ಸಾರಿಗೆ ಕಚೇರಿ ತೆರೆಯುವುದು ಉತ್ತಮ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.
ತಮ್ಮದೇ ಪಕ್ಷದ ಸಚಿವರಿಂದ ಬಿಜೆಪಿ ತೀವ್ರ ಮುಜುಗರಕ್ಕೆ ಒಳಗಾದ ಪ್ರಸಂಗವಿದು. ಶಿವಮೊಗ್ಗದಲ್ಲಿ ಇಂದು (ಸೆ 18) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆಯನೂರು, ಅಶೋಕ್ ಸಾರಿಗೆ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಅಸಮರ್ಥರಾಗಿದ್ದಾರೆ.
ಕುಮಾರಸ್ವಾಮಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅವರು ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ವೇತನ ಪರಿಷ್ಕರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಮತ್ತು ಅವೈಜ್ಞಾನಿಕವಾಗಿದೆ. ಈ ವಿಷಯದಲ್ಲಿ ಅಶೋಕ್ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಅವರಿಗೆ ಕರೆದು ಬುದ್ದಿ ಹೇಳುವಷ್ಟು ಶಕ್ತಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೂ ಇಲ್ಲ.
ಹೀಗಾಗಿ ಇಬ್ಬರೂ ರಾಜೀನಾಮೆ ನೀಡಲಿ ಎಂದು ಆಯನೂರು ಮಂಜುನಾಥ್ ತಮ್ಮದೇ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ನಮ್ಮ ಮಾನ್ಯ ಸಚಿವ ಅಶೋಕ್ ತಲೆಯಾಡಿಸುತ್ತಾರೆ. ಅವರು ಹೇಳಿದನ್ನು ಚಾಚು ತಪ್ಪದೆ ನಿರ್ವಹಿಸುತ್ತಾರೆ. ಅಂಥವರು ಬಿಜೆಪಿಗೆ ಯಾಕೆ ಬೇಕು? ರಾಜೀನಾಮೆ ನೀಡಿ ಹೋಗಲಿ ಎಂದು ಆಯನೂರು ಆರ್ಭಟಿಸಿದ್ದಾರೆ.
ತಮ್ಮದೇ ಸಚಿವರನ್ನು ಕಂಟ್ರೋಲ್ ಮಾಡಲಾಗದ ಸಿಎಂ ಕೂಡಾ ಆ ಸ್ಥಾನದಲ್ಲಿ ಇರಬಾರದೆಂದು ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.