ಹಬ್ಬದ ದಿನ ಲಾಗ್ ಔಟ್, ಬಂದ್ ದಿನ WFH
ಐಟಿ, ಐಟಿಯೇತರ ಸಂಸ್ಥೆಗಳ ಉದ್ಯೋಗಿಗಳ ರಜಾ/ಕೆಲಸ ಸ್ಟೇಟಸ್ ಬಗ್ಗೆ ಒನ್ ಇಂಡಿಯಾ ಒಂದಿಷ್ಟು ಮಾಹಿತಿ ಸಂಗ್ರಹಿಸಿದೆ, ಗಣೇಶ ಹಬ್ಬ, ಭಾರತ್ ಬಂದ್ ದಿನದಂದು ಯಾವ ಕಂಪನಿ ಕಾರ್ಯ ನಿರ್ವಹಿಸಲಿದೆ, ಯಾವ ಕಂಪನಿ ಪೂರ್ಣ ರಜೆ ಘೋಷಿಸಿದೆ ಮತ್ತು ಯಾವ ಕಂಪನಿ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂಬುದರ ಬಗ್ಗೆ ಕಣ್ಣು ಹಾಯಿಸೋಣ.
ಬೆಂಗಳೂರಿನ ಬಹುತೇಕ ಕಂಪನಿಗಳು ಗಣೇಶನ ಮೇಲೆ ಭಯಭಕ್ತಿ ತೋರಿ ಅಂಗಡಿ ಬಾಗಿಲು ಮುಚ್ಚುತ್ತಿವೆ. ಸೆ.19ರಂದು ಸಂಪೂರ್ಣ ರಜೆ ಘೋಷಿಸಲಾಗಿದೆ. ಇನ್ಫೋಸಿಸ್, ಮೈಂಡ್ ಟ್ರೀ, ಐಬಿಎಂ ಬೆಂಗಳೂರು, ಆಕ್ಸೆಂಚರ್ ಸೇರಿದಂತೆ ಹಲವು ಕಂಪನಿಗಳು ರಜೆ ಘೋಷಿಸಿದ್ದರೆ, ವಿಪ್ರೋ, ಟಿಸಿಎಸ್ ಕಂಪನಿಗಳು ಮಾತ್ರ ಹಬ್ಬದ ದಿನದಂದು ಕೆಲಸ ಮಾಡಲು ಬಯಸುವ ಟೆಕ್ಕಿಗಳಿಗೆ ಬಾಗಿಲು ತೆರೆಯಲಿದೆ.
ಇನ್ನು ಎನ್ ಡಿಎ ಕರೆ ನೀಡಿರುವ ಭಾರತ್ ಬಂದ್ (ಸೆ.20) ದಿನದಂದು ಅನಿವಾರ್ಯವಾಗಿ ನಗರ ಎಲ್ಲಾ ಕಂಪನಿಗಳು ಮುಚ್ಚಲಿದೆ. ಆದರೆ, ರಜೆ ತೆಗೆದುಕೊಂಡ ಉದ್ಯೋಗಿಗಳು ಬದಲಿ ದಿನಾಂಕದಂದು ಕಾರ್ಯ ನಿರ್ವಹಿಸುವಂತೆ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಸೂಚಿಸಿದ್ದಾರೆ.
ಭಾರತ್ ಬಂದ್ ದಿನದಂದು ಬೆಂಗಳೂರಿನ ನಮ್ಮ ಸಂಸ್ಥೆ ಉದ್ಯೋಗಿಗಳಿಗೆ ರಜೆ ಘೋಷಿಸಿದ್ದೇವೆ. ಮಂಗಳೂರು ಹಾಗೂ ಮೈಸೂರಿನಲ್ಲಿ ಸಾರಿಗೆ ವ್ಯವಸ್ಥೆ ನೋಡಿಕೊಂಡು ರಜೆ ಬಗ್ಗೆ ತಿಳಿಸಲಾಗುವುದು ಎಂದು ಇನ್ಫೋಸಿಸ್ ವಕ್ತಾರರು ಹೇಳಿದ್ದಾರೆ.
ವಿಪ್ರೋ ಸಂಸ್ಥೆ ಕೂಡಾ ಭಾರತದ ಎಲ್ಲಾ ಶಾಖೆಗಳಿಗೆ ಬಂದ್ ದಿನದಂದು ರಜೆ ಘೋಷಿಸಿದೆ. ಆದರೆ, ಶನಿವಾರದಂದು ಎಲ್ಲಾ ಉದ್ಯೋಗಿಗಳು ಕಡ್ಡಾಯವಾಗಿ ಕೆಲಸಕ್ಕೆ ಹಾಜರಿರತಕ್ಕದ್ದು ಎಂದು ಫರ್ಮಾನು ಹೊರಡಿಸಿದೆ.
ಕೆಲಸ ನಿಲ್ಲಿಸುವಂತಿಲ್ಲ: ಬಹುತೇಕ ವಿಪ್ರೋ ಹಾದಿಯಲ್ಲೇ ಇತರೆ ಪ್ರಮುಖ ಕಂಪನಿಗಳಾದ ಐಬಿಎಂ, ಇಂಟೆಲ್, ಮೈಕ್ರೋಸಾಫ್ಟ್, ಡೆಲ್, ಎಚ್ ಪಿ, ಆಕ್ಸೆಂಚರ್ ಕೂಡಾ ರಜೆ ಘೋಷಿಸಿ ನಂತರ ಮುಂದಿನ ಶನಿವಾರ(ಸೆ.22)ದಂದು ಕಡ್ಡಾಯ ಹಾಜರಾತಿಯನ್ನು ಜಾರಿಗೊಳಿಸಿದೆ.
ಆರೇಕಲ್ ಸೇರಿದಂತೆ ಕೆಲ ಕಂಪನಿಗಳು ಮನೆಯಿಂದ ಕಚೇರಿ ಕೆಲಸ ಮಾಡುವ ಸೌಲಭ್ಯ(Work From Home) ಒದಗಿಸಿದೆ. ಗೌರಿ ಗಣೇಶ ಹಬ್ಬದ ಓಡಾಟದಿಂದ ಬಳಲಿದ ಬಹುತೇಕ ಐಟಿ ಉದ್ಯೋಗಿಗಳು ಹಾಗೂ ಈಗಾಗಲೇ ಊರು ಸೇರಿರುವ ಉದ್ಯೋಗಿಗಳು WFH ಸೌಲಭ್ಯಕ್ಕೆ ಮೊರೆ ಹೋಗಿದ್ದಾರೆ.
ಬಿಪಿಒ ಹಾಗೂ ಐಟಿಯೇತರ ಕಂಪನಿಗಳು ಹಾಗೂ 24X7 ಸೇವೆ ನೀಡುವ ಸಂಸ್ಥೆಗಳಿಗೆ ಅಷ್ಟಾಗಿ ಬಾಧೆ ತಟ್ಟಿದಂತೆ ಇಲ್ಲ. ಬಹುತೇಕ ಸಂಸ್ಥೆಗಳು ಯುಎಸ್ ಅಥವಾ ಪೂರ್ವ ಏಷ್ಯಾ ಟೈಮ್ ಗೆ ಹೊಂದಿಕೊಂಡು ಕಾರ್ಯನಿರ್ವಹಿಸುವುದರಿಂದ ರಜೆ, ಬಂದ್ ಪರಿವಿಲ್ಲದಂತೆ ನಿರಂತರ ಕೆಲಸದಲ್ಲಿ ತೊಡಗಿಕೊಳ್ಳಬೇಕಾಗಿದೆ.
ಬೆಲೆ ಏರಿಕೆ ವಿರುದ್ಧ ಬಿಜೆಪಿ ನೇತೃತ್ವದ ಎನ್ ಡಿಎ ಕರೆ ನೀಡಿರುವ ಬಂದ್ ಆಗಿರುವುದರಿಂದ ಸೆ.20 ರಂದು ಸರ್ಕಾರಿ ಬಸ್ ಗಳು ರಸ್ತೆಗಿಳಿಯುವ ಗ್ಯಾರಂಟಿ ಇಲ್ಲ. ಐಟಿ ಸಂಸ್ಥೆಗಳಿಗೆ ಒಂದೆರಡು ದಿನಕ್ಕೆ ಖಾಸಗಿ ಸಂಸ್ಥೆಗಳು ವಾಹನ ಗುತ್ತಿಗೆ ಆಧಾರದ ಮೇಲೆ ನೀಡಲು ದುಪಟ್ಟು ಹಣ ಕೇಳುತ್ತಿವೆ.
ಇತ್ತೀಚೆಗೆ ಕರ್ನಾಟಕದ ರಾಜ್ಯ ಸಾರಿಗೆ ಸಂಸ್ಥೆ ಮುಷ್ಕರದಿಂದ ಖಾಸಗಿ ಬಸ್, ಕ್ಯಾಬ್ ಗಳಿಗೆ ಬೇಡಿಕೆ ಹುಟ್ಟಿತ್ತು. ಆದರೆ, ಐಟಿ ಕಂಪನಿಗಳ ಜೊತೆ ಸರಿಯಾದ ಡೀಲ್ ಕುದುರಿಲ್ಲದ ಕಾರಣ ಬಂದ್ ದಿನ ಅನಿವಾರ್ಯವಾಗಿ ರಜೆ ಘೋಷಿಸಲೇಬೇಕಾಗಿದೆ. ಆದರೆ, ಈ ಎಲ್ಲಾ ಬದಲಾವಣೆ ಹಾಗೂ ರಜೆ ಘೋಷಣೆಗಳು ಬದಲಾವಣೆಗೆ ಒಳಪಟ್ಟಿದ್ದು, ಆಯಾ ಸಂಸ್ಥೆಯ HR ವ್ಯವಸ್ಥಾಪಕರ ಆದೇಶವೇ ಅಂತಿಮ ಎಂದು ತಿಳಿಯತಕ್ಕದ್ದು.