ತಮಿಳರ ಗ್ರಾನೈಟ್ ಹಗರಣ 50 ಜನರ ಬಂಧನ
ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಮೊಮ್ಮಗ, ಕೇಂದ್ರ ಸಚಿವ ಅಳಗಿರಿ ಪುತ್ರ ದೊರೈ ದಯಾನಿಧಿ ಪ್ರಮುಖ ಆರೋಪಿಯಾಗಿರುವ ಗ್ರಾನೈಟ್ ಹಗರಣ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ.
ಗ್ರಾನೈಟ್ ಹಗರಣಕ್ಕೆ ಸಂಬಂಧಿಸಿದಂತೆ ದೊರೈ ದಯಾನಿಧಿ ಬಿಟ್ಟು ಉಳಿದ 50 ಪ್ರಮುಖ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ (ಸೆ.17) ಹೇಳಿಕೆ ನೀಡಿದ್ದಾರೆ.
ಒಲಂಪಸ್ ಗ್ರಾನೈಟ್ ಕಂಪನಿಯ ಮಾಜಿ ನಿರ್ದೇಶಕ ದಯಾನಿಧಿ ಗ್ರಾನೈಟ್ ಹಗರಣ ಪ್ರಮುಖ ರುವಾರಿಯಾಗಿದ್ದು ತಲೆಮರೆಸಿಕೊಂಡಿದ್ದಾರೆ. ದೊರೈ ಬಂಧಿಸಲು ಸರ್ಚ್ ವಾರೆಂಟ್ ಹೊರಡಿಸಲಾಗಿದ್ದು, ಎಲ್ಲೆಡೆ ಬಲೆ ಬೀಸಲಾಗಿದೆ ಎಂದು ಮದುರೈ ಎಸ್ಪಿ ವಿ ಬಾಲಕೃಷ್ಣನ್ ಹೇಳಿದ್ದಾರೆ.
ಸುಮಾರು 7 ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದೇವೆ. ಯಾರು ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಾಲಕೃಷ್ಣನ್ ಹೇಳಿದ್ದಾರೆ.
ಕೆಲವು ಖಾಸಗಿ ಕ್ವಾರಿಗಳು ಸರ್ಕಾರಿ ಸೌಮ್ಯದ ಕ್ವಾರಿಗಳ ಪಕ್ಕದಲ್ಲೇ ಕೆಲಸ ನಿರ್ವಹಿಸುತ್ತವೆ. ಸರ್ಕಾರದಿಂದ ಅನುಮತಿ ಪಡೆಯದೇ ಗ್ರಾನೈಟ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಪ್ರತಿಯೊಂದು ಗ್ರಾನೈಟ್ ಬ್ಲಾಕ್ 30 ಸಾವಿರದಿಂದ 60 ಸಾವಿರದವರೆಗೆ ನಡೆಯುತ್ತದೆ. ಅದರೆ, ಕೆಲವರು ಈ ಬೆಲೆಯ ಹತ್ತು ಪಟ್ಟು ದುಡ್ಡು ವಸೂಲಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಗರಣದಲ್ಲಿ ಪ್ರಮುಖ ರಾಜಕಾರಣಿಗಳು ಭಾಗಿಯಾಗಿರುವ ಶಂಕೆಯಿದೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ.