ಬೆಲೆ ಏರಿಕೆ- ಬಂದ್ ಹಬ್ಬ: ಸಾಲು ಸಾಲು ರಜಾ ಮಜಾ
ಹೌದು ಈ ವಾರದಲ್ಲಿ ಇಂದು ಕೆಲಸ ಮಾಡಿ ಹಾಗೂಹೀಗೂ ಒಂದೆರಡು ದಿನ ರಜೆ ಗಿಟ್ಟಿಸುವಲ್ಲಿ ಯಶಸ್ವಿಯಾದರೆ ವಾರದ ಮಧ್ಯೆ ಬಂದಿರುವ ಎರಡು ರಜೆಗಳು ನಿಮಗೆ ಮತ್ತಷ್ಟು ಆಪ್ಯಾಯಮಾನವೆನಿಸುತ್ತವೆ.
ಯಾವುದವು ರಜೆಗಳು ಅಂದರೆ ಬುಧವಾರ ವಿನಾಯಕ ಚೌತಿ. ಅದಾದ ಮಾರನೆಯ ದಿನ ಅಂದರೆ ಗುರುವಾರವೂ ರಜೆಯಿದೆ. 'ಮಲ್ಟಿ ಬ್ರಾಂಡ್ ರೀಟೈಲ್ ಕ್ಷೇತ್ರದಲ್ಲಿ ಶೇ. 51 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದಿರುವುದು ಎನ್ ಡಿಎ ಮೈತ್ರಿಕೂಟವನ್ನು ಕೆರಳಿಸಿದೆ. ಜತೆಗೆ ಇಂಧನ ಬೆಲೆ ಏರಿಕೆ ಬಿಸಿಯೇರುತ್ತಿರುವುದನ್ನು ಖಂಡಿಸಿ ಸಮಾಜವಾದಿ ಪಕ್ಷ, ಟಿಡಿಪಿ, ಬಿಜೆಡಿ, ಜೆಡಿಎಸ್ ಹಾಗೂ ಎಡಪಕ್ಷಗಳು ಸೆ. 20ರಂದು ದೇಶವ್ಯಾಪಿ ಬಂದ್ ಗೆ ಕರೆ ನೀಡಿವೆ. ಅಲ್ಲಿಗೆ ಅಂದು ಬಂದು ಯಶಸ್ವಿಯೇ.
ಅದಕ್ಕೇ ಹೇಳಿದ್ದು ಈ ಎರಡೂ ರಜೆಗಳ ಇಂಚುಮುಂಚು ಒಂದಷ್ಟು ರಜೆ ಹಾಕಿಬಿಟ್ಟರೆ...ಮಜ್ವೋ ಮಜ. [2012ರ ರಜಾ ದಿನಗಳ ಪಟ್ಟಿ]
ಮತ್ತೊಂದು ಗಮನಾರ್ಹವಾದ ವಿಚಾರವೆಂದರೆ ಈ ಬಾರಿ ಈ ರಜೆಗಳನ್ನು ಹೊಂದಿಸಿಕೊಂಡು ಇಡೀ ವಾರ ನೀವು ಎಲ್ಲೆಲ್ಲಿ ಓಡಾಡಬೇಕು ಅಂದ್ಕೊಂಡಿದ್ದೀರೋ ಅಲ್ಲಿಗೆಲ್ಲ ಹೋಗಿ ಬಂದುಬಿಡಿ. ಇಲ್ಲಾಂದ್ರೆ ಮುಂದಿನ ಬಾರಿ ನೀವೇ ಹೀಗೆಲ್ಲ ಸುತ್ತಾಡಲು ಹಿಂದೇಟು ಹಾಕುತ್ತೀರಿ. ಏಕೆಂದರೆ ಮೊನ್ನೆ ಕೆಎಸ್ಸಾರ್ಟಿಸಿ ಬಂದ್ ವೇಳೆ ಪೂಸಿ ಹೊಡೆಯಲು ನಮ್ಮ ಸನ್ಮಾನ್ಯ ಸಾರಿಗೆ ಸಚಿವರು ಡೀಸೆಲ್ ಬೆಲೆ ಹೆಚ್ಚಳವಾದರೇನಂತೆ ನಾವಂತೂ ಬಸ್ ಪ್ರಯಾಣ ದರ ಏರಿಸುವುದಿಲ್ಲ ಎಂದಿದ್ದಾರೆ.
ಆದರೆ ವಸ್ತುಸ್ಥಿತಿ ಹಾಗಿಲ್ಲ, ಇದೇ ಸಾರಿಗೆ ಸಚಿವ ಅಶೋಕ್ ಅವರು ಗಣೇಶನ ಹಬ್ಬದ ಸಂದರ್ಭದಲ್ಲಿ ಬೆಲೆ ಹೆಚ್ಚಿಸಿ ಗಣೇಶನ ಕೋಪಕ್ಕೆ ತುತ್ತಾಗುವುದು ಬೇಡ. ಹಬ್ಬ ಮುಗಿಯುತ್ತಿದ್ದಂತೆ ದಢಾರ್ ಅಂತ ಬಸ್ ದರ ಏರಿಕೆ ಮಾಡಿದರಾಯಿತು ಅಂದುಕೊಂಡು ಚೆರ್ಪು ಸವಿಯಲು ಸಿದ್ಧರಾಗಿದ್ದಾರೆ.
ಜತೆಗೆ ಕೆಎಸ್ಸಾರ್ಟಿಸಿ ನೌಕರರ ಅನೇಕ ಬೇಡಿಕೆಗಳಿಗೆ ಕೊನೆಗೂ ಅಸ್ತು ಅಂದಿರುವುದರಿಂದ ಸಂಸ್ಥೆಯ ಮೇಲೆ ಅದರ ಹೊರೆಯೂ ಜೋರಾಗಿದೆ. ಹಾಗಾಗಿ ಸಂಸ್ಥೆಯನ್ನು ಸುಗಮವಾಗಿ ಮುನ್ನಡೆಸಲು ಬೆಲೆಯೇರಿಸದೆ ಬೇರೆ ಮಾರ್ಗವೇ ಇಲ್ಲ ಅಶೋಕ್ ಗೆ.
ಹಾಗಾಗಿ ಖಂಡಿತ ಬಸ್ ಪ್ರಯಾಣ ಇನ್ನು ದುಬಾರಿಯಾಗಲಿದೆ. ಅದಕ್ಕೋಸ್ಕರವೇ ಹೇಳಿದ್ದು ಈ ವಾರ ರಜೆ ಹಾಕಿ, ಫುಲ್ ಸುತ್ತಾಡಿಬಿಡಿ...