ವಿದೇಶ ಪ್ರವಾಸಕ್ಕೆ ಹೋಗಿದ್ದು ಯಾವುದೇ ಅನಾಚಾರಕ್ಕಲ್ಲ
ನಾವು ಸಾರ್ವಜನಿಕ ಜೀವನದಲ್ಲಿ ಬದುಕುತ್ತಿರುವವರು. ಹಾಗಾಗಿ ಸಾರ್ವಜನಿಕರ ಹಣ ಉಪಯೋಗಿಸಿಕೊಳ್ಳಲು ನಮಗೆ ಅಧಿಕಾರವಿದೆ. ನಾನು ಪ್ರವಾಸಕ್ಕೆ ಹೊರಟಾಗ ನನ್ನ ಕ್ಷೇತ್ರದಲ್ಲಿ ಬರಗಾಲವಿರಲಿಲ್ಲ. ಈಗಲೂ ಅಲ್ಲಿ ಅಂತ ಬರಗಾಲವೇನೂ ಇಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ನಮ್ಮ ಪ್ರವಾಸಕ್ಕೆ ಮೂರು ತಿಂಗಳ ಕೆಳಗೆ ಸಿದ್ದತೆ ನಡೆಸಲಾಗಿತ್ತು. ಪ್ರವಾಸ ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಾಸ್ ಬಂದಿದ್ದರೆ ಹಣ ವಾಪಾಸ್ ಬರುತ್ತಿರಲಿಲ್ಲ. ಪ್ರವಾಸದ ಮಧ್ಯೆ ವಾಪಾಸ್ ಬರಲು ಸಿಎಂ ನೀಡಿದ ಆದೇಶದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಎಂದು ಪಾಟೀಲ್ ಟಿವಿ9 ಚಕ್ರವ್ಯೂಹ (ಭಾನುವಾರ ಸೆ 16) ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ನಮ್ಮ ವಿದೇಶ ಪ್ರವಾಸದ ಬಗ್ಗೆ ಯಡಿಯೂರಪ್ಪ ಅವರಿಗೆ ಮಾತನಾಡುವ ನೈತಿಕತೆಯಿಲ್ಲ. ನಮ್ಮ ಕ್ಷೇತ್ರದ ಪಕ್ಕದ ಊರಿನಲ್ಲಿ ಐವತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಪಕ್ಷದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ಬಂತು? ಆ ಕಾರ್ಯಕ್ರಮದ ಉದ್ದಕ್ಕೂ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಬಿ ಸಿ ಪಾಟೀಲ್ ಇದ್ದೀನಿ. ಇಂಥವರನ್ನು ನಾನು ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಕ್ಯಾರೇ ಮಾಡೋಲ್ಲ. ಆ ಸಮಾರಂಭದಲ್ಲಿ ಹಾರ ಹಾಕಲು ಬಂದ ಪಕ್ಷದ ಕಾರ್ಯಕರ್ತನೊಬ್ಬನಿಗೆ ಯಡಿಯೂರಪ್ಪ ಕಪಾಳಮೋಕ್ಷ ಮಾಡಿ ಕಳುಹಿಸಿದ್ದಾರೆ. ಇವರೆಂಥಾ ಜನನಾಯಕರು ಎಂದು ಪಾಟೇಲ್ ಕಿಡಿಕಾರಿದ್ದಾರೆ.
ಮೂರುವರೆ ವರ್ಷ ಮುಖ್ಯಮಂತ್ರಿಯಾದರು, ಈಗ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿ ಬೇರೆ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಕ್ಷೇತ್ರ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಲು ಮಲತಾಯಿ ಧೋರಣೆ ಅನುಸರಿಸುತ್ತಿರುವವರು ಯಡಿಯೂರಪ್ಪನವರು. ನನ್ನ ಬಗ್ಗೆ ಮಾತನಾಡದೆ ಅವರು ಸುಮ್ಮನಿದ್ದರೆ ಒಳಿತು ಎಂದು ಪಾಟೇಲ್ ಎಚ್ಚರಿಸಿದ್ದಾರೆ.
ನಮ್ಮ ಪಕ್ಷದ ಅಧ್ಯಕ್ಷರಾದ ಪರಮೇಶ್ವರ್ ಒಳ್ಳೆಯವರು. ಆದರೆ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇನ್ನೆರಡು ದಿನದೊಳಗಾಗಿ ನಾವು ದೆಹಲಿ ಪ್ರವಾಸ ಕೈಗೊಂಡು ಹೈಕಮಾಂಡ್ ಅವರಿಗೆ ಮತ್ತೆ ಮನವಿ ಸಲ್ಲಿಸಲಿದ್ದೇವೆ ಎಂದು ಬಿ ಸಿ ಪಾಟೀಲ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದ ಬಹುಪಾಲನ್ನು ಯಡಿಯೂರಪ್ಪ ಅವರನ್ನು ತರಾಟೆ ತೆಗೆದುಕೊಳ್ಳಲು ಮೀಸಲಿಟ್ಟ ಪಾಟೀಲರು ವಿದೇಶ ಪ್ರವಾಸದಲ್ಲಿ ಅದೇನು ಅಧ್ಯಯನ ನಡೆಸಿದರೆಂದು ಹೇಳದೆ ಇದ್ದದ್ದು ದುರಂತ.