ಗೃಹ ಸಚಿವ ಶಿಂಧೆ ಆಣಿಮುತ್ತಿಗೆ ಬೆಚ್ಚಿದ ಬಿಜೆಪಿ
ಪುಣೆ, ಸೆ.16: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಆಣಿಮುತ್ತಿಗಳನ್ನು ಕೇಳಿಸಿಕೊಂಡ ವಿಪಕ್ಷ ಬಿಜೆಪಿ ಕ್ಷಣಕಾಲ ಬೆಚ್ಚಿ ನಂತರ ಸಿಡಿದೆದ್ದಿದೆ.
'ಜನರಿಗೆ ನೆನಪಿನ ಶಕ್ತಿ ತೀರಾ ಕಡಿಮೆ. ಈ ಹಿಂದೆ ಬೋಫೋರ್ಸ್ ಹಗರಣವನ್ನು ಮರೆತಂತೆ ಈಗ ಕಲ್ಲಿದ್ದಲು ಹಗರಣವನ್ನು ಮರೆತುಬಿಡುತ್ತಾರೆ' ಎಂದು ಬೇಜವ್ದಾರಿ ಹೇಳಿಕೆ ನೀಡಿರುವ ಶಿಂಧೆ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಬೋಫೋರ್ಸ್ ಹಗರಣ ಬೆಳಕಿಗೆ ಬಂದಾಗ ದೇಶದಲ್ಲಿ ಅಲ್ಲೋಲ-ಕಲ್ಲೋಲವಾಗುತ್ತದೆ. ದೊಡ್ಡ ದೊಡ್ಡ ತಲೆಗಳು ಉದುರಿ ಬೀಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ಜನರ ಮನಸ್ಸಿನಿಂದ ಕಾಲಕ್ರಮೇಣ ಮಾಸಿ ಹೋಗಿದೆ.
ಈಗ ಅದೇ ರೀತಿ ಕಲ್ಲಿದ್ದಲು ಹಗರಣ ಕೂಡಾ ಜನರ ನೆನಪಿಗೆ ಬರುವುದಿಲ್ಲ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಚಿವ ಶಿಂಧೆ ಹೇಳಿದ್ದಾರೆ.
ಒಂದು ಕೈನಿಂದ ಕಲ್ಲಿದ್ದಲು ತೊಳೆದುಕೊಂಡರೆ ಇನ್ನೊಂದು ಕೈ ತನ್ನಿಂದ ತಾನೇ ಶುದ್ಧವಾಗುತ್ತೆ ಅಲ್ವಾ ಎಂದು ಮಾರ್ಮಿಕವಾಗಿ ನುಡಿದಿರುವ ಶಿಂಧೆ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಗೃಹ ಸಚಿವ ಶಿಂಧೆ ಅವರು ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ತೆಗೆದುಕೊಂಡು ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಅದರೆ, ಇನ್ನೂ ತಮ್ಮ ಮಾತು ಮುಂದುವರೆಸಿದ ಶಿಂಧೆ, ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆದ ಪೆಟ್ರೋಲ್ ಬಂಕ್ ಹಗರಣ ಈಗ ಏನಾಗಿದೆ ಎಂದು ಶಿಂಧೆ ಪ್ರಶ್ನಿಸಿದ್ದಾರೆ.
ಕಲ್ಲಿದ್ದಲು ಹಗರಣ, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರೀಟೈಲ್ ಕ್ಷೇತ್ರದಲ್ಲಿ ಎಫ್ ಡಿಐ, ಯುಪಿಎ ಆರ್ಥಿಕ ನೀತಿ ದೇಶಕ್ಕೆ ಪೂರಕವಾಗಿದೆ ಎಂದು ಶಿಂಧೆ ಸಮರ್ಥಿಸಿಕೊಂಡರು.
ಮಧ್ಯಂತರ ಚುನಾವಣೆ ಹಾಗೂ ಮನಮೋಹನ್ ಸಿಂಗ್ ಸಚಿವ ಸಂಪುಟ ವಿಸ್ತರಣೆ, ರಾಹುಲ್ ಗಾಂಧಿ ಸಂಪುಟ ಪ್ರವೇಶದ ಬಗ್ಗೆ ಶಿಂಧೆ ಯಾವುದೇ ಉತ್ತರ ನೀಡದೆ ನುಣಚಿಕೊಂಡರು.ಸಿಎಜಿ ವರದಿಯಂತೆ ಕಲ್ಲಿದ್ದಲು ಹಗರಣದ ಮೊತ್ತ 185,591 ಕೋಟಿ ರು ದಾಟುತ್ತದೆ.