ಯಡಿಯೂರಪ್ಪ ಮುಂದಿನ ಸಿಎಂ, ರೈತರದ್ದೇ ಸರ್ಕಾರ
'ಬಿಜೆಪಿ, ಜೆಡಿಎಸ್, ಕಾಂಗ್ರೆಸ್ಸೇತರ ಸರ್ಕಾರಕ್ಕಾಗಿ ಜನತೆ ಹಾತೊರೆಯುತ್ತಿದ್ದಾರೆ. ರೈತರ ಸರ್ಕಾರ ಇನ್ಮುಂದೆ ಅಧಿಕಾರ ನಡೆಸಲಿದೆ. ರೈತರ ಅಭಿವೃದ್ಧಿಗೆ ಮುಖ್ಯವೇ ಹೊರತು ಪಕ್ಷದ ಅಭಿವೃದ್ಧಿಯಲ್ಲ, ರೈತ ಪರ ಕೆಲಸ ಮಾಡುವ ಸರ್ಕಾರ ಮಾತ್ರ ಉತ್ತಮ ಸರ್ಕಾರ' ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, 'ನನ್ನ ಪಕ್ಷದ ಕೆಲವರು ನಡೆಸಿದ ಪಿತೂರಿಯಿಂದಾಗಿ ನಾನು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಬೇಕಾಯಿತು. ನಾನು ಬಿಜೆಪಿ ಮುಖಂಡರ ಮಾತು ಕೇಳಬೇಕಾಗಿಲ್ಲ. ನಾನು ನಿಮ್ಮ ಮಾತು ಕೇಳಬೇಕು. ನೀವಿದ್ದರೆ ಮಾತ್ರ ನಾನು' ಎಂದು ಜನತೆಯತ್ತ ಬೆರಳು ತೋರಿಸಿ ಚಪ್ಪಾಳೆಗಿಟ್ಟಿಸಿಕೊಂಡರು.
ಅಧಿಕಾರ ಶಾಶ್ವತವಲ್ಲ ನಿಜ. ಅದರೆ, ಇದ್ದಷ್ಟು ಕಾಲ ಜನಹಿತ, ರೈತ ಪರ ನಿಲುವು ತಾಳುವುದು ಮುಖ್ಯ. ಜನರ ಹಿತವನ್ನು ಬಲಿಕೊಟ್ಟು ಏನು ಗಳಿಸಿದರೂ ಅದು ಹೆಚ್ಚುಕಾಲ ಉಳಿಯುವುದಿಲ್ಲ ಎಂದರು. ಬರದಿಂದ ರಾಜ್ಯ ತತ್ತರಿಸಿರುವ ಸಂದರ್ಭದಲ್ಲಿ ವಿದೇಶಕ್ಕೆ ಪ್ರವಾಸ ಹೋಗಿ ಬಂದ ಶಾಸಕರ ವಿರುದ್ಧ ಯಡಿಯೂರಪ್ಪ ಮತ್ತೊಮ್ಮೆ ಕಿಡಿಕಾರಿದರು.
ಸಮೀಕ್ಷೆಯ ಫಲವೇ?: ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೇಕೇ ಬೇಕು. ಪ್ರಸಕ್ತ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಆಂತರಿಕ ಬಿಕ್ಕಟ್ಟುಗಳ ಸರಮಾಲೆಯನ್ನೇ ಎದುರಿಸಿದ್ದರೂ ಪಕ್ಷಕ್ಕೆ ಯಡಿಯೂರಪ್ಪ ಅನಿವಾರ್ಯ ಎಂಬುದು ಆಂಗ್ಲ ಸುದ್ದಿವಾಹಿನಿ NDTV ನಡೆಸಿದ ಇತ್ತೀಚಿನ ಸಮೀಕ್ಷೆಯಿಂದ ತಿಳಿದುಬಂದಿತ್ತು.
ಜನಮತ ಸಮೀಕ್ಷೆಯ ಪ್ರಕಾರ ಯಡಿಯೂರಪ್ಪ ಅವರೇನಾದರೂ ಪಕ್ಷ ತೊರೆದರೆ ಬಿಜೆಪಿಗೆ ಶೇ. 80ಕ್ಕೂ ಹೆಚ್ಚು ಹಾನಿಯಾಗಲಿದೆ. ಅದಕ್ಕಿಂತ ಗಮನಾರ್ಹ ಸಂಗತಿಯೆಂದರೆ ಬಿಜೆಪಿ ಮತದಾರರಲ್ಲಿ ಶೇ. 1/3 ಮಂದಿ ಯಡಿಯೂರಪ್ಪನವರು ಹೊಸ ಪಕ್ಷ ಸ್ಥಾಪಿಸುವುದು ಒಳಿತು ಎಂದಿದ್ದರು. ಇನ್ನು ಯಡಿಯೂರಪ್ಪನವರನ್ನು ಪಕ್ಷದಲ್ಲಿ ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಶೇ. 50ರಷ್ಟು ಮಂದಿ ನೊಂದುಕೊಂಡು ಹೇಳಿದ್ದರು.
ಖಾಸಗಿ ಸುದ್ದಿವಾಹಿನಿ ನಡೆಸಿದ ಸಮೀಕ್ಷೆ ತಮ್ಮ ಪರವಾಗಿರುವುದನ್ನು ಮುಂದಿಟ್ಟುಕೊಂಡಿರುವ ಯಡಿಯೂರಪ್ಪ, ತಮಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕು, ಇಲ್ಲದಿದ್ದರೆ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವರಿಷ್ಠರ ಮುಂದೆ ಪ್ರತಿಪಾದಿಸಲು ದೆಹಲಿಗೆ ತೆರಳಿದ್ದಾರೆ ಎಂಬ ಸುದ್ದಿ ಕೂಡಾ ಹಬ್ಬಿತ್ತು.
ಆದರೆ, ಎಲ್ಲವನ್ನೂ ಬದಿಗೊತ್ತಿದ್ದ ಯಡಿಯೂರಪ್ಪ, ಬರ ಅಧ್ಯಯನ ಪ್ರವಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದರೆ, ಹಿರೇಕೆರೂರಿನಲ್ಲಿ ತುಂಬಿದ ಸಮಾರಂಭದಲ್ಲಿ ನೀಡಿರುವ ಹೇಳಿಕೆ ದೆಹಲಿ ದೊರೆಗಳ ಕಿವಿಗೂ ಮುಟ್ಟದೆ ಮಾಯವಂತೂ ಆಗುವುದಿಲ್ಲ.