ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲೀಯರು ಶರಣಾಗಲು ಸರಕಾರದ ಡೆಡ್‌ಲೈನ್

By Prasad
|
Google Oneindia Kannada News

Karnataka to stop combing operation against naxals
ಬೆಂಗಳೂರು, ಸೆ. 15 : ಮಲೆನಾಡು ಪ್ರದೇಶದಲ್ಲಿ ನಕ್ಸಲೀಯರ ವಿರುದ್ಧ ನಕ್ಸಲ್ ನಿಗ್ರಹ ಪಡೆ ನಡೆಸುತ್ತಿರುವ ಕೂಂಬಿಂಗ್ ಕಾರ್ಯಾಚರಣೆಯನ್ನು ಒಂದು ವಾರಗಳ ಕಾಲ ನಿಲ್ಲಿಸಲು ನಿರ್ಧರಿಸಲಾಗಿದ್ದು, ಯಾವುದೇ ಷರತ್ತಿಲ್ಲದೆ ಶರಣಾಗಲು ಇಚ್ಛಿಸುವ ನಕ್ಸಲೀಯರಿಗೆ ಒಂದು ಕಡೆಯ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಶನಿವಾರ, ಸೆ.15ರಂದು ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ವಿಷಯವನ್ನು ತಿಳಿಸಿದ ಶೆಟ್ಟರ್ ಅವರು, ಸೆಪ್ಟೆಂಬರ್ 17ರಿಂದ 23ರವರೆಗೆ ನಕ್ಸಲೀಯ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲಾಗುವುದು ಮತ್ತು ಸರಕಾರದ ಶರಣಾಗತಿ ನೀತಿಯಡಿ, ಸಮಾಜದಲ್ಲಿ ನೆಮ್ಮದಿಯಿಂದ ಬಾಳಲು ಹಿಂಸಾತ್ಮಕ ಚಟುವಟಿಕೆಗಳಲ್ಲಿ ನಿರತರಾಗಿರುವ ನಕ್ಸಲೀಯರಿಗೆ ಶರಣಾಗಲು ಒಂದು ವಾರಗಳ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಕುಕ್ಕೆ ಸುಬ್ರಮಣ್ಯ, ಕೈಕಂಬ ಮತ್ತು ಚೆರು ಅರಣ್ಯ ಪ್ರದೇಶಗಳಲ್ಲಿ ನಕ್ಸಲೀಯರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಸೆ.4ರಂದು ನಕ್ಸಲೀಯರು ಮತ್ತು ನಕ್ಸಲೀಯ ನಿಗ್ರಹ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಹತ್ಯೆಯಾಗಿ ಹಲವಾರು ಜನರು ಗಾಯಗೊಂಡಿದ್ದರು. ಅವರಲ್ಲಿ ಒಬ್ಬ ನಕ್ಸಲೀಯನ ದೇಹ ಸೆ.13ರಂದು ಚೆರು ಪ್ರದೇಶದಲ್ಲಿ ಸಿಕ್ಕಿದೆ. ಉಳಿದವರಿಗಾಗಿ ಹುಡುಕಾಟ ನಡೆದಿತ್ತು.

ತ.ನಾಡಿಗೆ ನೀರು ಬಿಡದಿರಲು ನಿರ್ಧಾರ : ಮಡಿಕೇರಿ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ತಗ್ಗಿರುವ ಕಾರಣ ಮತ್ತು ಕೃಷ್ಣರಾಜಸಾಗರ ಅಣೆಕಟ್ಟೆ ಸಂಪೂರ್ಣವಾಗಿ ತುಂಬುವ ಸಾಧ್ಯತೆ ಕ್ಷೀಣಿಸಿರುವ ಕಾರಣ, ಒಪ್ಪಂದದಂತೆ ಪ್ರತಿದಿನ 10 ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಬಿಡದಿರಲು ಸರ್ವಪಕ್ಷಗಳ ಸಭೆ ನಿರ್ಧರಿಸಿದೆ.

ಸೆ.19ರಂದು ನವದೆಹಲಿಯಲ್ಲಿ, ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಅಧ್ಯಕ್ಷತೆಯ ಕಾವೇರಿ ನೀರು ಪ್ರಾಧಿಕಾರದ ಜೊತೆ ನಡೆಯಲಿರುವ ಸಭೆಯಲ್ಲಿ, ನಿರೀಕ್ಷಿಸಿದಷ್ಟು ನೀರನ್ನು ಕೆಆರ್ಎಸ್‌ನಿಂದ ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಡಲು ರಾಜ್ಯ ಸರಕಾರ ಒತ್ತಾಯಿಸಿದೆ.

ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ರಾಜ್ಯ ಈಗಾಗಲೆ ಬರಗಾಲದಿಂದ ತತ್ತರಿಸಿದೆ, ಈಗ ಬಿಟ್ಟಂತೆ ಅಗಾಧ ಪ್ರಮಾಣದಲ್ಲಿ ನೀರು ಬಿಟ್ಟರೆ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ 45 ದಿನಗಳಲ್ಲಿಯೇ ನೀರು ಖಾಲಿಯಾಗಲಿದೆ. ಆದ್ದರಿಂದ ತಮಿಳುನಾಡಿಗೆ ನೀರು ಬಿಡದಿರಲು ಪಕ್ಷಭೇದ ಮರೆತು ರಾಜ್ಯ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಸರಕಾರಕ್ಕೆ ಮನವಿ ಮಾಡಿದರು.

ಇದಕ್ಕೆ ಸಮ್ಮತಿಸಿದ ಜಗದೀಶ್ ಶೆಟ್ಟರ್ ಅವರು, ಇಡೀ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಆಗಬೇಕಿದೆ. ಈಗಾಗಲೆ ರಾಜ್ಯದಲ್ಲಿ ಅನೇಕ ತಾಲೂಕುಗಳು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿಯಾಗಿದೆ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಸಾಧ್ಯವಿಲ್ಲ ಎಂದು ಹೇಳಿದರು. ಈ ಕುರಿತಂತೆ ಪ್ರಧಾನಿಗೆ ಮನವರಿಕೆ ಮಾಡಿಕೊಡಲು ಯತ್ನಿಸುವುದಾಗಿ ತಿಳಿಸಿದರು.

English summary
Karnataka govt has set a deadline of 1 week for the naxals to surrender before govt. Jagadish Shettar has said, the coming operation by Anti Naxal Force will be stopped from Sept 17 to 23. It is also decided not to release water to TN in all party meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X