ಬಂಗಾರಪ್ಪ ಅವರ ಪಾದಧೂಳಿಗೂ ಆಯನೂರು ಸಮರಲ್ಲ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, ಆಯನೂರು ಮಂಜುನಾಥ್ ಅವರು ಇತ್ತೀಚೆಗೆ ಎಸ್ . ಬಂಗಾರಪ್ಪ ಅವರ ಕುರಿತು ಅತ್ಯಂತ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ.
ಬಂಗಾರಪ್ಪ ಅವರ ಭ್ರಷ್ಟಾಚಾರ ಸಾಬೀತು ಪಡಿಸಲಿ. ಬಂಗಾರಪ್ಪ ಅವರ ವಿರುದ್ಧ ಬಂದ ಆರೋಪಗಳ ಮೇಲೆ ಸಿಬಿಐ ತನಿಖೆ ನಡೆಸಿ ನಂತರ ಆರೋಪ ಮುಕ್ತ ಮಾಡಲಾಗಿದೆ. ಕ್ಲಾಸಿಕ್ ಕಂಪ್ಯೂಟರ್ ಹಗರಣ ಸೇರಿದಂತೆ ಯಾವುದೇ ಹಗರಣವೂ ಸಾಬೀತಾಗಿಲ್ಲ.
ಬಂಗಾರಪ್ಪ ಅವರನ್ನು ಒಮ್ಮೆ ಹೊಗುಳುವ ಮಂಜುನಾಥ್ ಮತ್ತೊಮ್ಮೆ ತೆಗಳುತ್ತಾರೆ. ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಅವರೇನು ಎಂಬುದು ನನಗೆ ಚೆನ್ನಾಗಿ ಗೊತ್ತು. ನೀವು ಯಾರನ್ನು ಮೆಚ್ಚಿಸಲು ಹೊರಟ್ಟಿದ್ದೀರೋ ಆ ನಿಮ್ಮ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು.
ಮಧು ಬಂಗಾರಪ್ಪ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯ ಎಂಸಿ ನಾಣಯ್ಯ ಮಾತನಾಡಿ, ಬಂಗಾರಪ್ಪ ಅವರಿಗೆ ಯಾರು ಪ್ರಮಾಣ ಪತ್ರ ಕೊಡಬೇಕಾಗಿಲ್ಲ. ಅವರು ದಲಿತರ ಉದ್ಧಾರಕ್ಕೆ ಶ್ರಮಿಸಿದವರು ಎಂದು ಹೇಳಿದರು.
ಆಯನೂರು ಮಂಜುನಾಥ್ ಏನು ಹೇಳಿದ್ದರು: 'ಬಂಗಾರಪ್ಪ ರಾಜ್ಯ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಹೇಳಿದ್ದಲ್ಲದೆ, ಜೆಡಿಎಸ್ ಕುರಿತು ದಂಡುಪಾಳ್ಯಕ್ಕೆ ಹೋಲಿಸಿ, ಪೂಜಾ ಗಾಂಧಿ ಅವರನ್ನು ದಂಡುಪಾಳ್ಯ ಕ್ವೀನ್' ಎಂದು ಕರೆದಿದ್ದರು. ಪೂಜಾಗಾಂಧಿ ಅವರನ್ನು ನಿಲ್ಲಿಸಿಕೊಂಡು ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದರು.
ಇದಾದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠ ಕರೆದು, ನಾನು ಪೂಜಾರನ್ನು ರಾಜಕೀಯಕ್ಕೆ ಆಹ್ವಾನಿಸಿಲ್ಲ. ನಮ್ಮ ಪಕ್ಷದ ಜ್ಯೋತಿರೆಡ್ಡಿ ಹಾಗೂ ನಾರಾಯಣಸ್ವಾಮಿ ಕರೆ ತಂದಿದ್ದು, ಅವರಿಗೆ ರಾಜಕೀಯ ಬಿಟ್ಟು ಸಿನಿಮಾ ವೃತ್ತಿಯಲ್ಲೇ ಮುಂದುವರೆಯಲಿ ಎಂದು ಸಲಹೆ ನೀಡಿದ್ದೇನೆ.
ಆಯನೂರು ಹೇಳಿದಂತೆ ನಾವು ಚಿತ್ರನಟಿಯನ್ನು ಇಟ್ಟುಕೊಂಡು ಪಕ್ಷ ಕಟ್ಟುತ್ತಿಲ್ಲ. ಮಣ್ಣಿನ ಧೂಳು ಕುಡಿದು ಪಕ್ಷ ಕಟ್ಟುತ್ತಿದ್ದೇನೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲೂ ಕೆಲವು ವಿಕೃತ ಮನಸ್ಸಿನವರು ಕೀಳು ಅಭಿರುಚಿ ಚಿತ್ರಗಳನ್ನು ಹಾಕಿ, ಲಘುವಾಗಿ ಬರೆಯುವುದನ್ನು ಕಂಡಿದ್ದೇನೆ. ಕೊಳಕು ಮನಸ್ಸಿಗೆ ನಾನು ಉತ್ತರಿಸಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.
ಜೆಡಿಎಸ್ ಮುಖಂಡ ಬಸವರಾಜ್ ಯತ್ನಾಳ್ ಅವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ, 'ಯಡಿಯೂರಪ್ಪ ಅವರಿಗೆ ಕರೆಂಟ್ ಕೊಡುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ' ಎಂದು ಪದ ಪ್ರಯೋಗ ಮಾಡಿ ಈ ವಾಕ್ಸಮರದಲ್ಲಿ ತಮ್ಮ ವಾಗ್ಬಾಣಗಳನ್ನು ಬಿಟ್ಟು ಯುದ್ಧವನ್ನು ಇನ್ನಷ್ಟು ರೋಚಕಗೊಳಿಸಿದರು.
ಅದರೆ, ಬಿಜೆಪಿ vs ಜೆಡಿಎಸ್ ಕೆಸರೆರೆಚಾಟ ಇಲ್ಲಿಗೆ ನಿಲ್ಲದೆ ಖಾಸಗಿ ಸುದ್ದಿ ವಾಹಿನಿಯ ಅರಳಿ ಕಟ್ಟೆಯನ್ನು ಏರಿ ಚರ್ಚೆಯ ಬಿಸಿ ಏರಿದ್ದು ಸದ್ಯಕ್ಕೆ ತಗ್ಗುವ ಲಕ್ಷಣಗಳು ಕಂಡು ಬಂದಿಲ್ಲ,