ಬೆಂಗಳೂರಿನಲ್ಲಿ ಎಲ್ನೋಡಿ ಟ್ರಾಫಿಕ್ ಜಾಮ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಶುಕ್ರವಾರ ಮಧ್ನಾಹ್ನ ಆಗಮಿಸಿ ಪ್ರಯಾಣಿಕರ ಕಷ್ಟ ಸುಖ ವಿಚಾರಿಸಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ಮಧ್ನಾಹ್ನದ ವಾರ್ತೆಯಲ್ಲಿ ಪ್ರಸಾರ ಮಾಡಿದೆ. ಸಂಜೆಯೊಳಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆಯಿದೆ. ಸಾರಿಗೆ ಸಚಿವರೊಡನೆ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಬೆಂಗಳೂರಿನ ರಿಚ್ಮಂಡ್ ರಸ್ತೆ, ಕೋರಮಂಗಲ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಆಡುಗೋಡಿ, ಹೆಬ್ಬಾಳ, ಇಂದಿರಾನಗರ, ಸದಾಶಿವ ನಗರ, ಮೇಕ್ರಿ ರಸ್ತೆ, ಕಾರ್ಪೋರೇಷನ್, ಓಕಳಿಪುರಂ, ನವರಂಗ್ ವೃತ್ತ, ಮಾಗಡಿ ರಸ್ತೆ, ಬಿಟಿಎಂ ಲೇಔಟ್, ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ದಿಢೀರ್ ಸಂಚಾರ ದಟ್ಟಣೆಯಿಂದ ಸಂಚಾರಿ ಪೊಲೀಸರು ಕೂಡಾ ಕೆಲ ಕಾಲ ಕಂಗಾಲಾಗಿದ್ದು ಹಲವೆಡೆ ಕಂಡು ಬಂದಿತು.
ಪ್ರತಿದಿನಕ್ಕಿಂತ ಶೇ 25 ರಷ್ಟು ಅಧಿಕ ವಾಹನಗಳು ರಸ್ತೆಗಿಳಿದಿದೆ. ಬೆಳಗ್ಗೆ 5.30 ರಿಂದಲೇ ನಮ್ಮ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಸಂಜೆ ವೇಳೆಗೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.ಎಸ್ ಎಂಎಸ್ ಹಾಗೂ ಫೇಸ್ ಬುಕ್ ಮೂಲಕ ಲೈವ್ ಟ್ರಾಫಿಕ್ ಜಾಮ್ ಮಾಹಿತಿ ನೀಡುತ್ತಿದ್ದೇವೆ.
ಹಲವೆಡೆ ಆಟೋಮ್ಯಾಟಿಕ್ ಬದಲು ಮ್ಯಾನುಯಲ್ ಆಗಿ ಸಿಗ್ನಲ್ ಬಳಸಲಾಗುತ್ತಿದೆ.ನಗರದ ಇಕ್ಕಟ್ಟಾದ ರಸ್ತೆ ಬದಲು ಹೊರ ವರ್ತುಲ ರಸ್ತೆ ಬಳಸಲು ಸೂಚಿಸಲಾಗಿದೆ ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಸಲೀಂ ಅವರು ಹೇಳಿದ್ದಾರೆ ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಸಲೀಂ ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಲಾಠಿ ಚಾರ್ಚ್: ಮಂಗಳೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ಮಧ್ಯೆ ಎಣ್ಣೆ ಸಿಗೇಕಾಯಿ ಸಂಬಂಧ ಇರುವುದು ಗೊತ್ತಿದ್ದರೂ ಖಾಸಗಿ ಬಸ್ ಚಾಲಕರು ಹಾಗೂ ಬಸ್ ಗಳನ್ನು ಸರ್ಕಾರಿ ನಿಲ್ದಾಣಕ್ಕೆ ಕರೆಸಿಕೊಂಡು ಬಸ್ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಾರಿಗೆ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆ ಯತ್ನಿಸಿತ್ತು.
ಈ ಕ್ರಮವನ್ನು ವಿರೋಧಿಸಿದ ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗಳಿಗೆ ಪೊಲೀಸರು ಸರಿಯಾಗೇ ಲಾಠಿ ರುಚಿ ತೋರಿಸಿದ್ದಾರೆ.
ಸಿಬ್ಬಂದಿ ನೇಮಕ: ಇನ್ನೆರಡು ದಿನಗಳಲ್ಲಿ ಹೊಸದಾಗಿ 4000 ಸಿಬ್ಬಂದಿಗಳನ್ನು ನೇಮಕ ಮಾಡಿ, ಕಾರ್ಯ ನಿರ್ವಹಣೆ ಮಾಡಲಾಗುವುದು. 15 ಸಾವಿರ ಮ್ಯಾಕ್ಸ್ ಕ್ಯಾಬ್ ಗಳಿಗೆ ಅನುಮತಿ ನೀಡಲಾಗಿದೆ.
ಎಸ್ಮಾ ಇನ್ನೂ ನಿರ್ಧಾರವಾಗಿಲ್ಲ: ಮುಷ್ಕರ ನಿರತ ನೌಕರರ ಮೇಲೆ ಕಠಿಣ ಕ್ರಮ ಜರುಗಿಸುವುದು ಹಾಗು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ 1968 ಎಸ್ಮಾ ಜಾರಿಗೊಳಿಸುವಂತೆ ಸಾರಿಗೆ ಸಚಿವ ಆರ್ ಅಶೋಕ್ ಮೇಲೆ ಸಚಿವ ಸಂಪುಟದ ಸಹದ್ಯೋಗಿಗಳಿಂದ ಒತ್ತಡ ಹೆಚ್ಚಾಗುತ್ತಿದೆ. ಅದರೆ, ಈ ಬಗ್ಗೆ ಇನ್ನೂ ಸಚಿವ ಸಂಪುಟ ನಿರ್ಧಾರ ಕೈಗೊಂಡಿಲ್ಲ.