ಜೇಡರಹಳ್ಳಿ ಕೃಷ್ಣಪ್ಪಗೆ ಸಿಕ್ತು ಗೌರವ ಡಾಕ್ಟರೇಟ್
'ಸುಧಾರಣೆಗೊಂಡ ಡಾನ್' ಜೇಡರಹಳ್ಳಿ ಕೃಷ್ಣಪ್ಪಗೆ ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯ ಈ ಗೌರವ ಡಾಕ್ಟರೇಟ್ ಕೊಡಮಾಡಿದೆ. ಯಾಕಪ್ಪಾ ಅಂದರೆ ಬಡ ರೈತರಿಗೆ ಜೇಡರಹಳ್ಳಿ ಕೃಷ್ಣಪ್ಪ ಸಾಕಷ್ಟು ನೆರವಾಗಿದ್ದಾರೆ ಎಂದು ಅವರಿಗೆ ಗೌ.ಡಾ. ಕೊಡಮಾಡಲಾಗಿದೆಯಂತೆ.
ಒಂದು ಕಡೆ 90ರ ದಶಕದಲ್ಲಿ ಮಾಗಡಿ, ಬೆಂಗಳೂರನ್ನು ನಡುಗಿಸಿದ್ದ ಕುಖ್ಯಾತಿ, ಮತ್ತೊಂದು ಕಡೆ ಅಷ್ಟೇನೂ ಖ್ಯಾತಿಯಲ್ಲಿಲ್ಲದ ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯ. ಇವುಗಳ ಮಧ್ಯೆ ಸಂಪರ್ಕ ಸೇತು ಯಾರಾದರೋ ಆದರೆ ಜೇಡರಹಳ್ಳಿ ಕೃಷ್ಣಪ್ಪ ಅಂತೂ 'ಖಂಡಿತಾ ನಾನು ದುಡ್ಡುಕೊಟ್ಟು ಗೌರವ ಡಾಕ್ಟರೇಟ್ ಖರೀದಿಸಿಲ್ಲ. ಅವರೇ ದಯಪಾಲಿಸಿದ್ದಾರೆ. ನಾನು ಮಚ್ಚನ್ನು ಯಾವಾಗಲೋ ಕೆಳಗೆ ಮಡಗಿಬಿಟ್ಟೆ. past is past. ಇನ್ನು ಅದರ ಭಯ ನಿಮಗ್ಯಾರಿಗೂ ಬೇಡ' ಎಂದು ಎದೆಯುಬ್ಬಿಸಿ ಹೇಳಿದ್ದಾರೆ.
'ಮಾಗಡಿ ಮತ್ತು ಬೆಂಗಳೂರು ಸುತ್ತಮುತ್ತಲ ಕೃಷಿಕರಿಗೆ ಜೇಡರಹಳ್ಳಿ ಕೃಷ್ಣಪ್ಪ ಸಹಾಯ ಮಾಡಿದ್ದಾರೆ. ಆದ್ದರಿಂದ ಅವರಲ್ಲಿರುವ ಇಂತಹ ಸಾಮಾಜಿಕ ಕಳಕಳಿಯನ್ನು ಗಣನೆಗೆ ತೆಗೆದುಕೊಂಡಿದ್ದೇವೆ' ಎಂದು Florida Einstein International University ತಿಳಿಸಿದೆ.
'ಸರಿ, ಎಲ್ಲಿ Floridaಗೇ ಹೋಗಿ ಗೌ.ಡಾ. ಧರಿಸಿ ಬಂದಿರಾ?' ಎಂದು Bangalore Mirror ಕೇಳಿದ್ದಕ್ಕೆ... 'ಇಲ್ಲ ಹಂಗೇನೂ ಇಲ್ಲ. ಇಲ್ಲೇ ದಿಲ್ಲಿಗೆ ಹೋಗಿ ಗೌರವ ಡಾಕ್ಟರೇಟ್ ಸ್ವೀಕರಿಸಿದೆ. ಅಲ್ಲಿಗೆಲ್ಲ ಹೋಗಲು ನನಗೆ ಟೈಮೇ ಇಲ್ಲ. ರೈತರು ನನಗಾಗಿ ಕಾಯುತ್ತಿರುತ್ತಾರೆ' ಎಂದು ಜೇಡರಹಳ್ಳಿ ಹೇಳಿದ್ದಾರೆ.
ಮೊನ್ನೆ ಸೋಮವಾರ ಕೇಂದ್ರ ಸಹಾಯಕ ಕೃಷಿ ಸಚಿವ ಹರೀಶ್ ರಾವತ್ ಅವರ ಅಮೃತ ಹಸ್ತದಿಂದ ಜೇಡ್ರಳ್ಳಿಗೆ ಗೌರವ ಡಾಕ್ಟರೇಟ್ ಸಂದಾಯವಾಗಿದೆ. ಅಂದಹಾಗೆ ಗೌರವ ಡಾಕ್ಟರೇಟ್ ಗೌರವದಿಂದ ಉತ್ತೇಜಿತರಾಗಿರುವ ಜೇಡ್ರಳ್ಳಿ ಕೃಷ್ಣಪ್ಪ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತವಕದಲ್ಲಿದ್ದಾರೆ.