ಆಟೋಚಾಲಕರು,ಯಾರಿಗೇಳೋಣಾ ನಮ್ಮ ಈ ಪ್ರಾಬ್ಲಂ
ಬಸ್ ಇಲ್ಲದಿದ್ದರೆ ಆಟೋ ಚಾಲಕರಿಗೆ ಸುಗ್ಗಿಯೋ ಸುಗ್ಗಿ ಎನ್ನುವುದು ಜನಜನಿತ ಭಾವನೆ. ಆದರೆ ಇಂದು (ಗುರುವಾರ ಸೆ 13) ಆರಂಭವಾದ ಬಂದ್ ನಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದರೂ ಗಮನಿಸಬೇಕಾದ ಅಂಶವೆಂದರೆ ಆಟೊರಿಕ್ಷಾಗಳಿಗೆ ಅಂಥ ಬೇಡಿಕೆ ಇರಲಿಲ್ಲ.
ಯಾಕೆಂದರೆ ಇಂದು ಆಟೋದಲ್ಲಿ ಪ್ರಯಾಣ ಮಾಡಿದರೆ ದುಪ್ಪಟ್ಟು ಪಾವತಿಸಬೇಕಾಗುತ್ತದೆ ಅನ್ನೋದು ಎಲ್ಲರ ಅಭಿಪ್ರಾಯ. ಹೀಗಾಗಿ ನಿಯತ್ತಿನಿಂದ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಆಟೋದವರಿಗೆ ಇಂದು ಮಾಮೂಲಿಗಿಂತ ಅರ್ಧದಷ್ಟೂ ಗಳಿಕೆಯಾಗುತ್ತಿಲ್ಲ. ನಮ್ಮ ವರದಿಗಾರರು ನೀಡಿದ ವರದಿಯನ್ವಯ ಸ್ಟ್ಯಾಂಡ್ ಗಳಲ್ಲಿ ಹತ್ತಾರು ಆಟೋಗಳು ನೊಣ ಹೊಡೆಯುತ್ತಿವೆ.
ಕೆಲ ಆಟೋಚಾಲಕರ ಅಭಿಪ್ರಾಯ ನಿಮ್ಮ ಗಮನಕ್ಕೆ:
ಹನುಮಂತನಗರದಿಂದ ಆಟೋಚಾಲಕ ಲಕ್ಷ್ಮಣ್ ಬಿ: ನಮ್ಮ ಆಟೋದವರೇ ಸರಿಯಿಲ್ಲ ಸಾರ್. ಬೇಕಾಬಿಟ್ಟಿ ದುಡ್ಡು ಕೇಳೋದು. ಯಾರೋ ಮಾಡೋ ತಪ್ಪಿನಿಂದ ನಿಯತ್ತಿನಿಂದ ದುಡಿಯೋರ ಹೊಟ್ಟೆಗೂ ಮಣ್ಣು ಹಾಕ್ತಾರೆ. ಬೆಳಗ್ಗೆಯಿಂದ ಒಂದು ಬೋಣಿನೂ ಆಗಿಲ್ಲಾ ಸ್ವಾಮಿ.
ಬೊಮ್ಮನಹಳ್ಳಿಯಿಂದ ಆಟೋಚಾಲಕ ಸೇದು ಅಯ್ಯಂ ಆಲಿಯಾಸ್ ಪೆರುಮಾಳ್: ಬಂದ್ ನಿಂದ ನಮಗೇನೂ ತೊಂದರೆಯಾಗಿಲ್ಲ. ನಮಗೆ ಡೈಲಿ ಕಸ್ಟಮರ್ ಇದ್ದಾರೆ. ಹೊಸೂರು ಕಡೆಯಿಂದ ಬರುವ ಬಸ್ ಗಳು ಇಲ್ಲಿ ಸ್ಟಾಪ್ ಮಾಡ್ತಾವೆ. ಮುರುಗನ್ ಎಷ್ಟು ಕೊಡ್ತಾನೋ ಅಷ್ಟರಲ್ಲೇ ಸಂತೋಷವಾಗಿರ್ತೀವಿ.
ಕಾಕ್ಸ್ ಟೌನ್ ನಿಂದ ಆಟೋಚಾಲಕ ಅಯ್ಯಪ್ಪ ರೆಡ್ಡಿ: ಮೀಟರ್ ಹಾಕೊಂಡೆ ಆಟೋ ಓಡಿಸಿದ್ದೀವಿ. ಏನೋ ಕಸ್ಟಮರ್ ಕೆಲವರು ಪ್ರೀತಿಯಿಂದ ಹತ್ತೋ ಇಪ್ಪತ್ತೋ ಎಕ್ಷ್ತ್ರಾ ಕೊಟ್ಟವ್ರೆ.
ಎಂ ಜಿ ರಸ್ತೆಯಿಂದ ಆಟೋಚಾಲಕ ಲೋಕೇಶ್ : ನಮಗೆ ಇವತ್ತು ಬಾಡೂಟ ಸ್ವಾಮಿ. ಮೀಟರ್ ಲೆಕ್ಕಾನೆ ಇಲ್ಲ ಇವತ್ತು. ಮೀಟರ್ ಹಾಕ್ತಾನೆ ಇಲ್ಲ. ಫಿಕ್ಸ್ ರೇಟ್.
ಚಾಮರಾಜಪೇಟೆಯಿಂದ ಆಟೋಚಾಲಕ ಅಲಿಂ ಜಾವೇದ್: ಜನಾನೇ ಇಲ್ಲಾ ಗುರು. ವ್ಯಾಪಾರನೇ ಇಲ್ಲ. ಆಟೋದವರು ಒನ್ ಟು ಡಬಲ್ ಕೇಳ್ತಾರೆ ಅನ್ಬಿಟ್ಟು ಜನಗಳ ಮನಸಿಗೆ ಬಂದ್ ಬಿಟ್ಟೈತೆ ನೋಡಿ. ಬೀಡಿ ಖಾಲಿ ಆಗ್ತಾ ಇದೆ ಅಷ್ಟೇ.
ಕಲಾಸಿಪಾಳ್ಯದಿಂದ ಆಟೋಚಾಲಕ ಪೆರುಮಾಳ್: ಜಾಸ್ತಿ ಕೊಡ್ತೀವಿ, ಡಬಲ್ ಮೀಟರ್ ಕೊಡ್ತೀವೀಂತಾ ಜನಾನೇ ಬಂದಾಗ ಬೇಡಾಂತ ಹೇಳೋಕೆ ನಾವೇನು ದುಡ್ಡು ಇರುವವರಾ?
ದೊಮ್ಮಲೂರುನಿಂದ ಆಟೋಚಾಲಕ ಮುನಿರಾಜ್ ತ್ಯಾಮಗೊಂಡ್ಲು: ಏನೋ ಬೆಳಗ್ಗೆ ಚೆನ್ನಾಗಿ ವ್ಯಾಪಾರ ಆಯ್ತು. ನಾಲ್ಕು ಕಾಸ್ ಮಾಡ್ಕೊಂಡು ಬಿಡೋಣಾಂತ ರೋಡಿಗೆ ಇಳ್ದೆ.ಈಗ ಫುಲ್ ಡಲ್.
ಮೆಜಿಸ್ಟಿಕ್ ನಿಂದ ಆಟೋಚಾಲಕ ನಾಗರಾಜ್: ಒಳ್ಳೆ ವ್ಯಾಪಾರ ಸ್ವಾಮಿ. ಎಷ್ಟು ಕೇಳಿದ್ರು ಇಲ್ಲಾ ಅಂತಿಲ್ಲಾ. ಮೀಟರ್ ಮೇಲೆ ಡಬಲ್ ಕೇಳಿದರೂ ಕೊಡ್ತಾವ್ರೆ.
ಕುರುಬರಹಳ್ಳಿಯಿಂದ ಆಟೋಚಾಲಕ ವಿನ್ಸೆಂಟ್: ನಾವು ಜಾಸ್ತಿ ಇಲ್ಲಿಂದ ಜಾಲಹಳ್ಳಿ ಕ್ರಾಸ್ ಗೆ ಆಟೋ ಹೊಡೆಯೋದು. ನಾವು ಮೀಟರ್ ಹಾಕೋದೆ ಇಲ್ಲ. ನಮ್ಮದು ಏನಿದ್ರೂ ತಲೆ ಲೆಕ್ಕ..