ಎಚ್ಡಿಕೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾ ಸುಧೀಂದ್ರರಾವ್
ಥಣಿಸಂದ್ರದಲ್ಲಿ ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಲೋಕಾಯುಕ್ತ ಕೋರ್ಟಿಗೆ ಎಚ್ ಡಿ ಕುಮಾರಸ್ವಾಮಿ ಹಾಜರಾಗಿ ವಿಚಾರಣೆ ಎದುರಿಸಬೇಕಾಗಿತ್ತು. ಆದರೆ ಅನಾರೋಗ್ಯದ ನೆಪವೊಡ್ಡಿ ಅವರು ಕೋರ್ಟಿಗೆ ಗೈರು ಹಾಜರಾದರು. ಪ್ರಕರಣದ ವಿಚಾರಣೆಯನ್ನು ಸೆ. 20ಕ್ಕೆ ಮುಂದೂಡಲಾಗಿದೆ.
ಆದರೆ ಅವರಿಗೆ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟ ವೈದ್ಯರನ್ನು ನ್ಯಾ ಸುಧೀಂದ್ರರಾವ್ ಅವರು ತರಾಟೆಗೆ ತೆಗೆದುಕೊಂಡರು. ಗಮನಾರ್ಹವೆಂದರೆ ಕಳೆದ ಬಾರಿಯ ವಿಚಾರಣೆಯ ವೇಳೆಯೂ ಎಚ್ ಡಿ ಕುಮಾರಸ್ವಾಮಿ ಅವರು ಅನಾರೋಗ್ಯದಿಂದಾಗಿ ಕೋರ್ಟಿಗೆ ಬಂದಿರಲಿಲ್ಲ.
ಆಗ, ನ್ಯಾಯಾಧೀಶರು ಹೀಗೆ ಸುಳ್ಳು ಕಾರಣ ಕೊಟ್ಟು ಗೈರು ಹಾಜರಾದರೆ ಜಾಮೀನುರಹಿತ ವಾರಂಟ್ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಮಂಗಳವಾರವೂ ಅದು ಪುನರಾವರ್ತನೆಯಾಯಿತು.
ಕುಮಾರಸ್ವಾಮಿ ಪರ ವಕೀಲರು ಎಂದಿನಂತೆ 'ಅನಾರೋಗ್ಯದಿಂದಾಗಿ ತಮ್ಮ ಕಕ್ಷಿದಾರರು ಜಾಹರಾಘಲು ಸಾಧ್ಯವಾಗಿಲ್ಲ' ಎಂದು ರಾಗವೆಳೆದರು. ಜತೆಗೆ, ವೈದ್ಯ ಮಹಾಶಯರು ನೀಡಿದ್ದ ಮೆಡಿಕಲ್ ಸರ್ಟಿಫಿಕೇಟನ್ನೂ ಸಬ್ಮಿಟ್ ಮಾಡಿದರು.
ಮೆಡಿಕಲ್ ಸರ್ಟಿಫಿಕೇಟನ್ನು ನೋಡಿದ ನ್ಯಾ ಎನ್ ಕೆ ಸುಧೀಂದ್ರರಾವ್ ಅವರಿಗೆ ಅದೆಲ್ಲಿತ್ತೋ ಸಿಟ್ಟು ಕಿಡಿಕಿಡಿಯಾದರು. ಅಸಲಿಗೆ ಕುಮಾರಸ್ವಾಮಿ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಚಿಕಿತ್ಸೆ ಪಡೆದಿದ್ದರು ಎಂಬುದನ್ನೇ ವೈದ್ಯ ಮಹಾಶಯರು ನಮೂದಿಸಿರಲಿಲ್ಲ.
ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ನ್ಯಾ ಸುಧೀಂದ್ರರಾವ್ ಅವರು 'ಯಾರ್ರೀ ಡಾಕ್ಟರು, ಆರೋಗ್ಯ ಸರಿಯಿಲ್ಲ ಎಂದು ವರದಿ ಕೊಟ್ಟಿದ್ದಾರೆ. ಆದರೆ ಯಾವ ದಿನ ಆಸ್ಪತ್ರೆಗೆ ದಾಖಲಾಗಿದ್ದರು ಎಂಬುದನ್ನೇ ಬರೆದಿಲ್ಲ' ಎಂದು ತರಾಟೆಗೆ ತೆಗೆದುಕೊಂಡು ನೋಟಿಸ್ ಜಾರಿ ಮಾಡಲೂ ಮುಂದಾದರು.
ಎಲ್ಲೋ ಕಣ್ತಪ್ಪಿನಿಂದ ಪ್ರಮಾದವಾಗಿದೆ ಎಂದು ಕುಮಾರಸ್ವಾಮಿ ಪರ ವಕೀಲರು ಸ್ಪಷ್ಟನೆ ನೀಡಿದರು. ಆಗ ವಕೀಲರ ಮೇಲೂ ಗರಂ ಆದ ನ್ಯಾ ಸುಧೀಂದ್ರರಾವ್ ಅವರು 'ವೈದ್ಯರ ಪರ ವಕಾಲತ್ತು ವಹಿಸಬೇಕಿದ್ದರೆ ಇನ್ನೊಂದು ಅರ್ಜಿ ಹಾಕಿಕೊಳ್ಳಿ' ಎಂದು ತರಾಟೆಗೆ ತೆಗೆದುಕೊಂಡಾಗ ವಕೀಲರು ಸುಸ್ತೋ ಸುಸ್ತು!