ಬೆಂವಿವಿ ಕುಲಪತಿ ಡಾ.ಪ್ರಭುದೇವ ಕೊನೆಗೂ ಎತ್ತಂಗಡಿ
ಹೌದು ವಿಶ್ವಸನೀಯ ಮೂಲಗಳ ಪ್ರಕಾರ ಬೆಂಗಳೂರು ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಡಾ. ಎನ್ ಪ್ರಭುದೇವ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲು ರಾಜ್ಯ ಸರಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಡಾ. ಎನ್ ಪ್ರಭುದೇವ ಅವರನ್ನು ಗ್ರಾಮೀಣ ಆರೋಗ್ಯದ ಆಯೋಗಕ್ಕೆ ಮುಖ್ಯಸ್ಥರನ್ನಾಗಿ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ.
ವೃತ್ತಿಯಿಂದ ವೈದ್ಯರಾಗಿರುವ ಪ್ರಭುದೇವ ಅವರ ಕೈಗೆ ಇಂದು ಮಂಗಳವಾರ ಸರಕಾರದ ಅಧಿಕೃತ ಆದೇಶ ತಲುಪುವ ನಿರೀಕ್ಷೆಯಿದೆ. ಅವರು ಹೊಸದಾಗಿ ರಚನೆಯಾಗಿರುವ ಗ್ರಾಮೀಣ ಆರೋಗ್ಯದ ಆಯೋಗದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಸಂಬಂಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆದೇಶಕ್ಕೆ ಅಂಕಿತ ಹಾಕಿದ್ದಾರೆ.
ಇನ್ನು ಪ್ರಭುದೇವ ಅವರ ಸ್ಥಾನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಅತ್ಯಂತ ಹಿರಿಯ ಪ್ರೊಫೆಸರ್ (ಹಾಲಿ ಹಣಕಾಸು ಅಧಿಕಾರಿ) ರಂಗಸ್ವಾಮಿ ಅವರು ವೈಸ್ ಚಾನ್ಸಲರ್ ಆಗಲಿದ್ದಾರೆ. ಏಕೆಂದರೆ ಅವರಿಗಿಂತ ಹಿರಿಯರಾದ ಸೈಕಾಲಜಿ ಪ್ರೊಫೆಸರ್ ಮೋಹನ್ ಕುಮಾರ್ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಅವರು ವಾಪಸಾಗುವವರೆಗೂ ಪ್ರೊ. ರಂಗಸ್ವಾಮಿ ಅವರೇ ತಾತ್ಕಾಲಿಕವಾಗಿ ವೈಸ್ ಚಾನ್ಸಲರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಸಚಿವ ಉಮೇಶ್ ಕತ್ತಿ ಕಸರತ್ತು ವಿಫಲ: ಈ ಮಧ್ಯೆ, ಬೆಂವಿವಿಯನ್ನು ಅಂಧಪತನಕ್ಕೆ ತಳ್ಳಿದ್ದ ಕುಖ್ಯಾತಿ ಗಳಿಸಿರುವ ಡಾ. ಪ್ರಭುದೇವ ಮತ್ತು ರಿಜಿಸ್ಟ್ರಾರ್ ಮೇಲೂರು ಮೈಲಾರಪ್ಪ ಅವರ ಪೈಕಿ ಮೈಲಾರಪ್ಪ ಸ್ಥಾನ ಸುಭದ್ರವಾಗಿದೆ ಎನ್ನಲಾಗಿದೆ.
ಕೃಷಿ ಸಚಿವ ಉಮೇಶ್ ಕತ್ತಿ ಅವರು ಹಾವು-ಮುಂಗುಸಿಯಂತಾಡುತ್ತಿದ್ದ ಪ್ರಭುದೇವ ಮತ್ತು ಮೈಲಾರಪ್ಪ ಜೋಡಿಯ ನಡುವೆ ಹೊಂದಾಣಿಕೆ ತರಲು ತಮ್ಮ ಸರ್ವಶಕ್ತಿಯನ್ನೂ ಧಾರೆಯೆರೆದಿದ್ದರು ಎನ್ನಲಾಗಿದೆ. ಅಂದಹಾಗೆ ಸಚಿವ ಉಮೇಶ್ ಕತ್ತಿ ಅವರ ಪುತ್ರಿಯ ವಿವಾಹವು ಪ್ರಭುದೇವ ಅವರ ಪುತ್ರನ ಜತೆ ನೆರವೇರಿದೆ. ಗಮನಾರ್ಹವೆಂದರೆ ಪ್ರಭುದೇವ ಅವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸಲೆಂದೇ ಗ್ರಾಮೀಣ ಆರೋಗ್ಯ ಆಯೋಗವನ್ನು ಹೊಸದಾಗಿ ಸ್ಥಾಪಿಸಲಾಗಿದೆ.