ರೇಣುಕಾಚಾರ್ಯರೇ ಸಿಟಿ ರವಿಗೆ ಎಣ್ಣೆಗಾಸು ಬೇಡ್ವಂತೆ
ಅಬಕಾರಿ ಆದಾಯವೇ ಅನೈತಿಕ: ಅಷ್ಟೇ ಅಲ್ಲ ಅಂತಹ ಆದಾಯ ಬಳಸದಿರಲು ಸರಕಾರ ಕಠಿಣ ನಿರ್ಧೃಆ ತೆಗೆದುಕೊಳ್ಳಬೇಕು ಎಂದು ರವಿ ಅಭಿಪ್ರಾಯಪಟ್ಟಿದ್ದಾರೆ. ಮಂಡಳಿ ಆಯೋಜಿಸಿದ್ದ 'ಗಾಂಧಿ ಮೌಲ್ಯಗಳ ಮನನ ಮತ್ತು ಮದ್ಯಪಾನ ಹಾಗೂ ಮಾದಕ ವಸ್ತುಗಳ ವಿರುದ್ಧ ಕುಲಪತಿ- ಶಿಕ್ಷಣತಜ್ಞರ ದುಂಡುಮೇಜಿನ ಪರಿಷತ್ತು' ಸಭೆಯಲ್ಲಿ ಅವರು ಈ ವಿಚಾರಧಾರೆಯನ್ನು ಹರಿಯಬಿಟ್ಟರು.
ಒಂದೆಡೆ ಮದ್ಯಪಾನದ ದುಷ್ಪರಿಣಾಮಗಳ ವಿರುದ್ಧ ಸರಕಾರದ ಒಂದು ಇಲಾಖೆ ಜಾಗೃತಿ ಮೂಡಿಸುತ್ತದೆ. ಮತ್ತೊಂದೆಡೆ ಮದ್ಯದಿಂದ ಬರುವ ಆದಾಯ ಹೆಚ್ಚಿಸುವಂತೆ ಅಬಕಾರಿ ಇಲಾಖೆಗೆ ಗುರಿ ನಿಗದಿಪಡಿಸುತ್ತದೆ. ಇಂತ ಎಡಬಿಡಂಗಿ ನೀತಿಗಳ ಮಧ್ಯೆ ಇದೆಂತಹಾ ಪೀಕಲಾಟ. ಹಾಗಾಗಿ ಸರಕಾರ ಅನೈತಿಕ ಮೂಲದ ಆದಾಯ ಬಳಸದಿರಲು ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ವ್ಯಾಖ್ಯಾನಿಸಿದರು.
ಕವಿ ಕಾಣದ್ದು ರವಿ ಕಂಡ: ಆದರೆ ಅನಾದಿಕಾಲದಿಂದಲೂ ರಾಜ್ಯದಲ್ಲಿ ಆಡಳಿತ ನಡೆಸಿದ ಸರಕಾರಗಳು ಘಟಾನುಘಟಿ ಮದ್ಯದ ದೊರೆಗಳ ಕೈಗೊಂಬೆಯಾಗಿತ್ತು ಎಂಬ ಕಟುವಾಸ್ತವದ ಬಗ್ಗೆ ರವಿಗೆ ಜಾಣಮರೆವು ಅನಿಸುತ್ತದೆ. ಈ ಮಧ್ಯೆ 'ನೈಂಟಿ ಹೊಡಿರಿ, ಇನ್ ಕಂ ಜಾಸ್ತಿ ಮಾಡ್ರಿ' ಎನ್ನುವ ಅಬಕಾರಿ ಸಚಿವ 'ಅಣ್ಣಮ್ಮ ಡ್ಯಾನ್ಸ್ ವೀರ' ರೇಣುಕಾಚಾರ್ಯ ಅವರು ಇದರ ಬಗ್ಗೆ ಏನನ್ನುತ್ತಾರೋ ಇನ್ನೂ ಗೊತ್ತಾಗಿಲ್ಲ.
ನಾನು ಕುಡಿತ ಬಿಟ್ಟಿದ್ದೇನೆ: 'ವಕೀಲನಾಗಿದ್ದಾಗ ಅನೇಕ ಕ್ಲಬ್ ಗಳ ಸದಸ್ಯನಾಗಿದ್ದ ನಾನೂ ಮದ್ಯಪಾನ ಮಾಡುತ್ತಿದ್ದೆ. ಸಾರ್ವಜನಿಕ ಜೀವನ ಪ್ರವೇಶಿಸಿದ ಮೇಲೆ ಕಡಿಮೆ ಮಾಡಿದೆ. ಪತ್ನಿ-ಮಗ ವಿರೋಧಿಸಿದ್ದರಿಂದ ಮದ್ಯ ಸೇವಿಸುವುದನ್ನು ಸಂಪೂರ್ಣ ಬಿಟ್ಟಿದ್ದೇನೆ. ಮದ್ಯ ಒಳ್ಳೆಯದಲ್ಲ' ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಹೇಳಿದರು.