ಉಡುಪಿ ಶ್ರೀಕೃಷ್ಣನ 800 ವರ್ಷಗಳ ಇತಿಹಾಸಕ್ಕೆ ಕಪ್ಪುಚುಕ್ಕೆ
ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಶ್ರೀಲಕ್ಷ್ಮೀವರ ತೀರ್ಥರು ಪ್ರತ್ಯೇಕ ರಥೋತ್ಸವ ನಡೆಸಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
ನನಗೆ ಪ್ರತ್ಯೇಕ ರಥೋತ್ಸವ ನಡೆಸುವಂತೆ ಕನಸಲಿ ಬಂದು ಪ್ರೇರಣೆಯಾದ ಹಿನ್ನಲೆಯಲ್ಲಿ ಉತ್ಸವ ನಡೆಸಿದ್ದೇನೆ. ಮಠದ ಸಂಪ್ರದಾಯ ಮುರಿಯುವುದು ನನ್ನ ಉದ್ದೇಶವಲ್ಲ. ನಮಗೂ ಮತ್ತು ಪರ್ಯಾಯ ಸೋದೆ ಶ್ರೀಗಳಿಗೂ ಅಸಮಾಧಾನವಿರುವುದು ಸತ್ಯ. ಅದನ್ನು ಮಾಧ್ಯಮದ ಮೂಲಕ ಹೇಳಿಕೆ ನೀಡಲಾಗುವುದಿಲ್ಲ ಎಂದು ಶಿರೂರು ಶ್ರೀಗಳು ಹೇಳಿಕೆ ನೀಡಿದ್ದಾರೆ.
ವಿಟ್ಲಪಿಂಡಿ (ಮೊಸರುಕುಡಿಕೆ) ಉತ್ಸವಕ್ಕೆ ಗರ್ಭಗುಡಿಯಿಂದ ಶ್ರೀಕೃಷ್ಣನ ಉತ್ಸವ ಮೂರ್ತಿ ಹೊರಗೆ ಬರುವ ಸ್ವಲ್ಪ ಹೊತ್ತಿಗೆ ಮುನ್ನ ರಥಬೀದಿಯಲ್ಲಿರುವ ರಾಘವೇಂದ್ರ ಮಠದ ಬೆಳ್ಳಿ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಶಿರೂರು ಶ್ರೀಗಳು ರಥಾರೋಹಣ ಮಾಡಿಸಿದ್ದಾರೆ.
ಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಶ್ರೀಗಳಿಗೆ ಮಾತ್ರ ವಿಟ್ಲಪಿಂಡಿ ಉತ್ಸವದ ರಥೋತ್ಸವ ಮತ್ತು ಇತರ ಸಂಪ್ರದಾಯ ನಡೆಸುವ ಅಧಿಕಾರವಿರುತ್ತದೆ.
ಅಲ್ಲದೆ ಬೆಳ್ಳಿಯ ರಥದ ಮುಂದೆ ಖುದ್ದು ತಾನೇ ನಿಂತು ಶಿರೂರು ಶ್ರೀಗಳು ಭಕ್ತರಿಗೆ ಲಡ್ಡು, ಚಕ್ಕುಲಿ ಪ್ರಸಾದ ವಿತರಿಸಿದರು. ಇನ್ನೂ ಮುಂದುವರಿದು ಗೊಲ್ಲರಿಂದ ಮೊಸರು ಕುಡಿಕೆಗಳನ್ನು ಒಡೆಸುವ ಆಟ ವಾಡಿಸಿದರು.
ಶಿರೂರು ಶ್ರೀಗಳ ಈ ರಥೋತ್ಸವದಿಂದ ಚಿನ್ನದ ರಥದಲ್ಲಿ ಸಾಗುತ್ತಿದ್ದ ಮೂಲ ಕೃಷ್ಣನ ಉತ್ಸವ ಮೂರ್ತಿ ರಥೋತ್ಸವಕ್ಕೆ ಸ್ವಲ್ಪ ಮಟ್ಟಿನ ಕಿರಿಕಿರಿ, ವಿಳಂಬ ಉಂಟಾಯಿತು.
ಪ್ರತ್ಯೇಕ ರಥೋತ್ಸವದ ಯಾವುದೇ ಮುನ್ಸೂಚನೆ ನೀಡದ ಶಿರೂರು ಶ್ರೀಗಳ ಈ ನಡೆಯಿಂದ ಭಕ್ತರು ಮತ್ತು ಪೊಲೀಸರು ಗಲಿಬಿಲಿಗೊಂಡರು.
ಕೊನೆಗೆ ಶಿರೂರು ಶ್ರೀಗಳು ತಮ್ಮ ರಥವನ್ನು ಕೃಷ್ಣ ಮಠದ ಹಿಂಭಾಗದಲ್ಲಿರುವ ಬೃಹತ್ ಪಾರ್ಕಿಂಗ್ ಪ್ರದೇಶಕ್ಕೆ ಭಾರೀ ಮೆರವಣಿಗೆಯಲ್ಲಿ ಕೊಂಡೊಯ್ದು ಹುಲಿವೇಷ ಸ್ಪರ್ಧೆ ನಡೆಸಿ ವಿಟ್ಲಪಿಂಡಿ ಉತ್ಸವದ ವೈಭವ ಹೆಚ್ಚಿಸಿದರು.
ಉಡುಪಿಯಲ್ಲಿ ಅಷ್ಟಮಠಗಳ ನಡುವಣ ಭಿನ್ನಾಭಿಪ್ರಾಯ ಹೊಸತೇನಲ್ಲ. ಎರಡೆರಡು ಏಕಾದಶಿ ಆಚರಣೆ, ಕೃಷ್ಣನ ಹುಟ್ಟುಹಬ್ಬದ ಗೊಂದಲ ಇತ್ಯಾದಿಗಳಿಂದಾಗಿ ಭಕ್ತರು ಬಹಳಷ್ಟು ಬಾರಿ ಗೊಂದಲಕ್ಕೆ ಈಡಾಗಿದ್ದರು.
ಶ್ರೀಕೃಷ್ಣ ಜನ್ಮಾಸ್ಟಮಿಯ ದಿನವಾದ ಶನಿವಾರ (ಸೆ 8) ಮಧ್ಯರಾತ್ರಿ ನಡೆದ ಅರ್ಘ್ಯಪ್ರಧಾನಕ್ಕೆ ಶಿರೂರು ಶ್ರೀಗಳಿಗೆ ಪರ್ಯಾಯ ಮಠದಿಂದ ಆಹ್ವಾನ ಬಂದಿರಲಿಲ್ಲ ಎನ್ನಲಾಗಿದೆ.
ನಂಜನಗೂಡಿನ ನಂಜುಂಡೇಶ್ವರನನ್ನು ನಂಜುಂಡೇಶ್ವರ ಅನ್ನಬೇಕೋ ಶ್ರೀಕಂಠೇಶ್ವರ ಅನ್ನಬೇಕೋ ಎಂಬ ಎರಡು ಹೆಸರುಗಳ ನಡುವೆ ವಿವಾದ ಹುಟ್ಟಿಕೊಂಡಿತ್ತು. ಈಗ ಉಡುಪಿ ಶ್ರೀಕೃಷ್ಣ ಮಠದ ಸರದಿ.