ಸ್ವಂತ ಮಗುವನ್ನು ಪಾಲಕರಿಗೆ ನೀಡಲು ಅಮೆರಿಕ ನಕಾರ
ಸದ್ಯಕ್ಕೆ 11 ತಿಂಗಳ ಮಗನನ್ನು ಪಾಲಕರಿಗೆ ನೀಡಲು ನ್ಯೂ ಜೆರ್ಸಿಯ ಅಮೆರಿಕನ್ ಮಕ್ಕಳ ಸೇವಾ ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಗುವನ್ನು ಮರಳಿ ಪಡೆಯಲು ವಿಫಲರಾಗಿರುವ ದೇಬಶಿಶ್ ದಂಪತಿಗಳು ಅಮೆರಿಕದಲ್ಲಿರುವ ಭಾರತೀಯ ದೂತಾವಾಸದ ಕದ ತಟ್ಟುತ್ತಿದ್ದಾರೆ.
ದೇಬಶಿಶ್ ದಂಪತಿಗಳ ಮನವಿಗೆ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಸ್ಪಂದಿಸಿದ್ದು, ಈ ಪ್ರಕರಣದ ವಿವರ ಕೋರಿದ್ದಾರೆ. ಭಾರತೀಯ ಮೂಲದ ದಂಪತಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಭಯ ನೀಡಿದ್ದಾರೆ.
ಮಗು ಇಂದ್ರಶಿಶ್ ನ್ಯೂಜೆರ್ಸಿಯಲ್ಲಿನ ದೇಬಶಿಶ್ ಮನೆಯಲ್ಲಿನ ಹಾಸಿಗೆಯ ಮೇಲಿಂದ ಬಿದ್ದಿದ್ದರಿಂದ ತಲೆಗೆ ಪೆಟ್ಟು ಬಿದ್ದಿತ್ತು. ಆ ಸಂದರ್ಭದಲ್ಲಿ ತಾಯಿ ಪಮೇಲಾ ಸಹಾ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಪ್ಪ ದೇಬಶಿಶ್ ಕಚೇರಿಯಲ್ಲಿದ್ದರು ಎಂದು ಮಗುವಿನ ಅಜ್ಜ ಅಜ್ಜಿಯರಾದ ನಿರ್ಮಲ್ ಮತ್ತು ಸೋನಾರಾಣಿ ಸಹಾ ತಿಳಿಸಿದ್ದಾರೆ.
ಮಗುವನ್ನು ಕೂಡಲೆ ಆಸ್ಪತ್ರೆಗೆ ಸೇರಿಸಿ, ಶಸ್ತ್ರಚಿಕಿತ್ಸೆ ಮಾಡಲಾಯಿತು. ಚಿಕಿತ್ಸೆ ನೀಡಿದ ನಂತರ ಇಂದ್ರಶಿಶ್ ಗುಣವಾದರೂ ಅವನನ್ನು ಪಾಲಕರಿಗೆ ವಾಪಸ್ ನೀಡಲಿಲ್ಲ. ಮಗುವನ್ನು ನೋಡಿಕೊಳ್ಳಲು ಪಾಲಕರು ವಿಫಲರಾಗಿದ್ದಾರೆ ಎಂದು ಮಕ್ಕಳ ಸೇವಾ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಆಸ್ಪತ್ರೆಯ ಅಧಿಕಾರಿಗಳು ಮಗುವನ್ನು ಪಾಲಕರಿಗೆ ನೀಡಲು ನಿರಾಕರಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರ ವಿರುದ್ಧವೇ ಕೇಸು ಹಾಕಲಾಗಿದ್ದು ಬರುವ ಶುಕ್ರವಾರ, ಸೆ.14ರಂದು ಮಗುವಿನ ತಂದೆ ಪಶ್ಚಿಮ ಬಂಗಾಲದ ದೇಬಶಿಶ್ ಅವರು ಅಮೆರಿಕದ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿದೆ. ನ್ಯಾಯಾಲಯದ ಆದೇಶದಂತೆ ಮಗುವನ್ನು ಪಾಲಕರಿಗೆ ಮರಳಿ ನೀಡಬೇಕಾ ಅಥವಾ ಬೇಡವಾ ಎಂಬುದು ನಿರ್ಧಾರವಾಗಲಿದೆ.
"ಮಗು ಹಾಸಿಗೆಯ ಮೇಲಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿತ್ತು. ಚಿಕಿತ್ಸೆಯ ಬಳಿಕ ಮಗು ಗುಣವಾಗಿದ್ದು, ಮರಳಿ ಪಡೆಯಬರುದಾಗಿದೆ. ಆದರೆ, ಆಸ್ಪತ್ರೆಯವರು ಒಪ್ಪುತ್ತಿಲ್ಲ. ಪಾಲಕರಿಗೆ ಬಿಟ್ಟು ಇತರೆಯವರಿಗೆ ಮಗುವನ್ನು ನೀಡಲು ನಾನು ಸುತಾರಾಂ ಒಪ್ಪುವುದಿಲ್ಲ. ಭಾರತೀಯ ದೂತಾವಾಸ ಸಹಾಯ ಮಾಡುತ್ತದೆಂದು ನಂಬಿದ್ದೇನೆ" ಎಂದು ದೇಬಶಿಶ್ ಹೇಳಿದ್ದಾರೆ.
ತಂದೆ ತಾಯಿಯರ ಆರೈಕೆಯಿಲ್ಲದೆ ಆಸ್ಪತ್ರೆಯ ದಾದಿಯರ ಬಳಿಯಲ್ಲಿ ಹನ್ನೊಂದು ತಿಂಗಳ ಮಗು ಹೇಗೆ ಇರಲು ಸಾಧ್ಯ ಎಂದು ಮಗುವಿನ ಅಜ್ಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನಾರ್ವೆಯಲ್ಲಿ ಇಂಥದೇ ಘಟನೆ ಸಂಭವಿಸಿತ್ತು. ಮಗುವಿಗೆ ಕೈಯಿಂದ ಆಹಾರ ತಿನ್ನಿಸಿದ ಆರೋಪದ ಮೇಲೆ ಮಗುವನ್ನು ಪಾಲಕರ ವಶದಿಂದ ನಾರ್ವೆ ಮಕ್ಕಳ ರಕ್ಷಣಾ ಸೇವಾ ಸಂಸ್ಥೆ ತೆಗೆದುಕೊಂಡು ಹೋಗಿತ್ತು. ಆ ಮಗು ಸದ್ಯಕ್ಕೆ ಅಜ್ಜ ಅಜ್ಜಿಯರ ಬಳಿಯಿದೆ.