ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ ಮರುಎಣಿಕೆ ಫಿವರ್: ಬಾಜಿ ಜೋರು

By Srinath
|
Google Oneindia Kannada News

bellary-j-shanta-mp-recounting-sept-15-betting
ಬಳ್ಳಾರಿ, ಸೆ. 10: ಜೋಳದರಾಶಿ ಶಾಂತಾ ಅವರು ಬಳ್ಳಾರಿಯ ಸಂಸದರಾಗಿ ಮುಂದುವರಿಯುತ್ತಾರೋ, ಇಲ್ಲವೋ ಎಂಬುದು ಈ ವಾರ ಇತ್ಯರ್ಥವಾಗಲಿದೆ. ಇದೇ ಶನಿವಾರ (ಸೆ. 15) ಮತಗಳ ಮರು ಎಣಿಕೆ ಕಾರ್ಯ ನೆರವೇರಲಿದೆ. ಅಂದೇ ಕೋರ್ಟ್ ಸಮ್ಮತಿಯೊಂದಿಗೆ ಫಲಿತಾಂಶವೂ ಹೊರಬೀಳುವ ಅಂದಾಜಿದೆ.

ಆದರೆ ಚುನಾವಣೆಯ ಮರು ಫಲಿತಾಂಶಕ್ಕೆ ಇನ್ನೂ ಒಂದು ವಾರವಿರುವಾಗಲೇ ಬಳ್ಳಾರಿಯಾದ್ಯಂತ ಮರುಎಣಿಕೆ ಜ್ವರ ಜೋರಾಗಿಯೇ ಕಾಣಿಸಿಕೊಂಡಿದೆ. ಶಾಂತಾ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೋ ಅಥವಾ ಅವರ ಪ್ರತಿಸ್ಪರ್ಧಿಯಾಗಿ ಸೋತಿದ್ದ ಕಾಂಗ್ರೆಸ್ಸಿನ ಎನ್.ವೈ. ಹನುಮಂತಪ್ಪ ಅವರು ಗೆಲುವಿನ ನಗೆ ಬೀರುತ್ತಾರೋ ಎಂಬುದರ ಬಗ್ಗೆ ಬಾಜಿ ಆಟ ಜೋರಾಗಿಯೇ ನಡೆಯುತ್ತಿದೆ.

ಗೋವಾ ಪ್ರವಾಸವೂ ಉಂಟು : ಶಾಂತಾ ಪರ ಬಿಎಸ್ಆರ್ ಕಾಂಗ್ರೆಸ್ ಮತ್ತು ಎನ್.ವೈ. ಹನುಮಂತಪ್ಪ ಅವರ ಪರ ಕಾಂಗ್ರೆಸ್ ಕಾರ್ಯಕರ್ತರು ಕಳೆದ ವಾರದಿಂದಲೇ ಭರ್ಜರಿ ಬಾಜಿ ಆಟಕ್ಕೆ ಇಳಿದಿದ್ದಾರೆ. ಕೆಲವರು ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಹಣ ಗಳಿಸುವ ಉದ್ದೇಶದಿಂದ ಹಣ ಹೂಡುತ್ತಿದ್ದಾರೆ. ಕೆಲವರು ಬಡ್ಡಿಗೆ ಹಣ ತಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಬೆಟ್ಟಿಂಗ್ ಗೆ ಹಣವಷ್ಟೇ ಮಾನದಂಡವಾಗಿಲ್ಲ. ಸೋತರೆ ಇಂತಿಷ್ಟು ಗ್ರಾಂ ಬಂಗಾರ, ಗುಂಡು ಪಾರ್ಟಿ, ಗೋವಾ ಪ್ರವಾಸ ಅಂತೆಲ್ಲ ಬೇಡಿಕೆಗಳ ಆಧಾರದಲ್ಲಿ ಬೆಟ್ಟಿಂಗ್ ಶುರುವಾಗಿದೆ. ಬಳ್ಳಾರಿ ಸುತ್ತಮುತ್ತಲ ಹಳ್ಳಿ ಜನರೂ ಬೆಟ್ಟಿಂಗ್ ನಿಂದ ದೂರುಳಿದಿಲ್ಲ.

ಹದಿನಾರೇ ಸುತ್ತು ಬಾಕಿ: ಕಾಂಗ್ರೆಸ್ ಕಾರ್ಯಕರ್ತರ ಪ್ರಕಾರ ತಮ್ಮ ಅಭ್ಯರ್ಥಿ ಹನುಮಂತಪ್ಪ ಅವರು 16ನೇ ಸುತ್ತಿನ ಮತ ಎಣಿಕೆವರೆಗೂ ಭಾರಿ ಅಂತರದೊಂದಿಗೆ ಮುನ್ನಡೆಯಲ್ಲಿದ್ದರು. ಹಾಗಾಗಿ ಈ ಬಾರಿಯೂ ಮರು ಎಣಿಕೆ ವೇಳೆಯಲ್ಲಿ 16 ನೇ ಸುತ್ತಿನಲ್ಲಿ ಹನುಮಂತಪ್ಪ ಅವರೇ ಲೀಡ್ ಕಾಯ್ದುಕೊಂಡರೆ ಜಯ ಅವರದೇ ಎಂದು ಖಚಿತ ದನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.

ವಿಶೇಷ ವ್ಯವಸ್ಥೆ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ 2009ರಲ್ಲಿ ನಡೆದಿದ್ದ ಚುನಾವಣಾ ಮತಗಳನ್ನು ನಾನಾ ಕೋರ್ಟುಗಳ ಆದೇಶದ ಹಿನ್ನೆಲೆಯಲ್ಲಿ ಸೆ. 15ರಂದು ನಗರದ ಮಹಾಬಲೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮರು ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮತ್ರತು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಮತಗಳ ಮರು ಎಣಿಕೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ, ಸೆ. 12ರಿಂದ 16ರವರೆಗೆ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಸೆ. 15ರಂದು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್‌ಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಶನಿವಾರ 10.30ಕ್ಕೆ ಮರು ಮತ ಎಣಿಕೆ ಕಾರ್ಯ ಆರಂಭಗೊಂಡು ಮಧ್ಯಾಹ್ನ 2ರ ಒಳಗೆ ಮುಗಿಯಲಿದೆ. ಎಣಿಕೆಗಾಗಿ 98 ಟೇಬಲ್‌ ಇರಿಸಿದ್ದು, 330 ಸಿಬ್ಬಂದಿ ನೆರತವಾಗಲಿದ್ದಾರೆ. ಇಬ್ಬರು ಹಿರಿಯ ಐಎಎಸ್‌ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ಚುನಾವಣಾ ಆಯೋಗ ನೇಮಿಸಿದೆ. ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಮಿಸಲಿದ್ದಾರೆ.

ಏನಿದು ತಕರಾರು: 2009ರ ಎಪ್ರಿಲ್ 23ರಂದು ಬಳ್ಳಾರಿ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು, 2009ರ ಮೇ 16ರಂದು ಮತ ಎಣಿಕೆ ಕಾರ್ಯ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಜಯಗಳಿಸಿದ್ದಾರೆಂದು ಪ್ರಕಟಿಸಲಾಗಿತ್ತು. ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಚಂದ್ರೇಗೌಡ ಮತ್ತಿತರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಗೆ ನಡೆಸಿದ ನ್ಯಾಯಾಲಯ ಸಂಸದೆ ಜೆ.ಶಾಂತಾ ಅವರನ್ನು ಅನರ್ಹಗೊಳಿಸಿ ಮತಗಳ ಮರು ಎಣಿಕೆಗೆ ಆದೇಶ ಮಾಡಿತ್ತು. ಈ ಮಧ್ಯೆ ಸಂಸದೆ ಜೆ. ಶಾಂತಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜೆ.ಶಾಂತಾ ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೆ. 15ರಂದು ಮರು ಎಣಿಕೆ ನಡೆಸಲು ಬಳ್ಳಾರಿ ಜಿಲ್ಲಾಡಳಿತಕ್ಕೆ ಸೂಚಿಸಿತ್ತು.

English summary
The Bellary district Election officer will conduct re-counting of votes Bellary Loksabha ecelction which was held on April 23, 2009. Its recounting will be on Sept 15 as such betting fever is high in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X