ಕ್ಷೀರಕ್ರಾಂತಿ ಹರಿಕಾರ ಕುರಿಯನ್ ಯುಗಾಂತ್ಯ
ಕ್ಷೀರಕ್ರಾಂತಿ ಕೇಂದ್ರ ಗುಜರಾತ್ ನ ಆನಂದ್ ನಲ್ಲಿ ಕುರಿಯನ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ. ಸಹಜವಾದ ಸಾವು ಕಂಡ ದೇಶದ ಹೆಮ್ಮೆಯ ವ್ಯಕ್ತಿ ಕುರಿಯನ್ ಅವರ ಅಂತಿಮ ಕ್ರಿಯೆಯನ್ನು ಭಾನುವಾರ ಮಧ್ಯಾಹ್ನನ ನಂತರ ನಡೆಸಲಾಗುವುದು ಎಂದು ಗುಜರಾತ್ ಹಾಲು ಒಕ್ಕೂಟ(GCMMF) ದ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ದೇಶದ ಅತಿದೊಡ್ಡ ಹಾಲು ಉತ್ಪಾದನೆ ಹಾಗೂ ಶೇಖರಣಾ ಘಟಕವನ್ನು ಸ್ಥಾಪಿಸಿ, ದೇಶಕ್ಕೆ ಮಾದರಿ ಹಾಕಿಕೊಟ್ಟ ಕೀರ್ತಿ ಕುರಿಯನ್ ಅವರಿಗೆ ಸಲ್ಲುತ್ತದೆ. ಹಾಲು ಉತ್ಪಾದನೆಯಲ್ಲಿ ವಿಶ್ವದಾಖಲೆ ಮಾಡಿದ ಆನಂದ್ ನ ಸಹಕಾರಿ ಹಾಲು ಉತ್ಪಾದನೆ ತಂತ್ರ ದೇಶದ 10 ಲಕ್ಷಕ್ಕೂ ಅಧಿಕ ರೈತರ ಬದುಕನ್ನು ಹಸನುಮಾಡಿತು. ಸುಮಾರು 200 ಡೇರಿಗಳಿಂದ ಸುಮಾರು 20 ಮಿಲಿಯನ್ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.
1970 ಇಸ್ವಿಯಲ್ಲಿ ಆರಂಭಗೊಂಡ 'ಆಪರೇಷನ್ ಫ್ಲಡ್' ಕಾರ್ಯಕ್ರಮದಡಿ ದೇಶಾದ್ಯಾಂತ ನೂರಾರು ಹಾಲಿನ ಒಕ್ಕೂಟಗಳು ಸ್ಥಾಪಿತಗೊಂಡವು.
ಬಹುಶ: ದೇಶದಲ್ಲೇ ರೈತರ ಮತ್ತು ಗ್ರಾಹಕರ ನಡುವಿನ ನೇರ ವಹಿವಾಟನ್ನು ಇಷ್ಟೊಂದು ಸಮರ್ಪಕವಾಗಿ ಬೇರೆ ಯಾವುದೇ ಸಂಘಟನೆಗಳು ನಿಭಾಯಿಸಿದ ಅಥವ ನಿಭಾಯಿಸುತ್ತಿರುವ ಜೀವಂತ ಉದಾಹರಣೆ ಮತ್ತೊಂದು ಸಿಗಲಾರದು.
ಈ 'ಆಪರೇಷನ್ ಫ್ಲಡ್' ಕಾರ್ಯಕ್ರಮದಡಿಯಲ್ಲಿಯೇ ರಾಜ್ಯಗಳಲ್ಲಿ ಆಯಾ ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಸ್ಥೆಗಳು ಹುಟ್ಟಿಕೊಂಡವು. ಗುಜರಾತ್ ನ ಅಮುಲ್ ಮಾದರಿಯಲ್ಲಿಯೇ ದೇಶದ ಇತರೆ ರಾಜ್ಯಗಳಲ್ಲೂ ಸಹ ಶ್ವೇತ ಕ್ರಾಂತಿಯ ಅಂಗವಾಗಿ ವಿವಿಧ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದವು.
ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಡಾ.ವರ್ಗೀಸ್ ಕುರಿಯನ್ ಭಾರತದ ಶ್ವೇತ ಕ್ರಾಂತಿಯ ರೂವಾರಿಯಾಗಿದ್ದು, ಭಾರತವು ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ನೆರವಾಯಿತು.