ಮೈಸೂರು ರಸ್ತೆ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ಅದರೆ, ಮೂರು ವರ್ಷಗಳ ಕಾಲದಿಂದಲೂ ನಡೆಯುತ್ತಿರುವ ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಮಾರ್ಚ್ 2012ರಲ್ಲಿ ಮುಗಿಯಬೇಕಿದ್ದ ಈ ಮೇಲ್ಸೇತುವೆ ಕಾಮಗಾರಿ ಜನರ ಪುಣ್ಯಕ್ಕೆ ಕೆಲ ತಿಂಗಳುಗಳ ಕಾಲವಷ್ಟೇ ಮುಂದೂಡಲ್ಪಟ್ಟಿದೆ.
ಕದಿರೇನಹಳ್ಳಿ ಅಂಡರ್ ಪಾಸ್ ಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಈ ಮೇಲ್ಸೇತುವೆ ಆದಷ್ಟು ಬೇಗ ಪೂರ್ಣಗೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಿಗ್ನಲ್ ಫ್ರೀ ಆಗಿರುವುದು ಈ ಮೇಲ್ಸೇತುವೆ ವಿಶೇಷತೆ ಎನ್ನಬಹುದು.
ಈ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದರೆ, ಬನಶಂಕರಿ ಕಡೆಯಿಂದ ನಾಗರಬಾವಿ ತನಕ ಚಲಿಸುವ ವಾಹನಗಳು ಸಂತೋಷದಿಂದ ಯಾವುದೇ ಅಡೆ ತಡೆ ಇಲ್ಲದೆ ಸಂಚರಿಸಬಹುದು. ನಾಯಂಡನ ಹಳ್ಳಿ ಸಿಗ್ನಲ್ ನಲ್ಲಿ ಗಂಟೆಗಟ್ಟಲೇ ನಿಲ್ಲುವ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಇನ್ನೊಂದು ಮೇಲ್ಸೇತುವೆ ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಡಿಎ ಇಂಜಿನಿಯರ್ ಟಿಎನ್ ಚಿಕ್ಕರಾಯಪ್ಪ ಹೇಳಿದ್ದಾರೆ.
ಅದರೆ, ಹದಗೆಟ್ಟಿರುವ ಮೈಸೂರು ರಸ್ತೆಗೆ ಮಾತ್ರ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣಗಳಿಲ್ಲ. ಕನಿಷ್ಠ ಇನ್ನೊಂದು ವರ್ಷವಾದರೂ ಮೈಸೂರು ರಸ್ತೆ ರಿಪೇರಿ ಕಾರ್ಯ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಎರಡು ವರ್ಷದಿಂದ ರಸ್ತೆ ಅಗಲೀಕರಣ ಕಾಮಗಾರಿ ಜಾರಿಯಲ್ಲಿದೆ. 5 ಕೋಟಿ ಅಂದಾಜು ವೆಚ್ಚದಲ್ಲಿ ಆರಂಭವಾದ ಈ ಯೋಜನೆ ವೆಚ್ಚ ಈಗ 9.5 ಕೋಟಿ ರು ದಾಟಿದೆ.
ಮೈಸೂರು ರಸ್ತೆಯಲ್ಲಿ ಸಂಚರಿಸುವ ನರಕಯಾತನೆ ಸದ್ಯಕ್ಕಂತೂ ಮುಂದುವರೆಯಲಿದೆ. ಮಾಜಿ ಮೇಯರ್ ಶಾರದಮ್ಮ ಹಾಗೂ ಉಪ ಮೇಯರ್ ಎಸ್ ಹರೀಶ್ ಅವರು ಹಲವು ಬಾರಿ ಕಾಮಗಾರಿ ಪರೀಶೀಲನೆ ಮಾಡಿ ತೆರಳಿದ್ದರು. ಈಗ ಇತ್ತೀಚೆಗೆ ಹಾಲಿ ಮೇಯರ್ ಡಿ ವೆಂಕಟೇಶ್ ಮೂರ್ತಿ ಕೂಡಾ ಒಂದು ಸುತ್ತಿನ ಭೇಟಿ ನೀಡಿದ್ದಾರೆ.
ಮೈಸೂರು ರಸ್ತೆ ಅಗಲೀಕರಣ ಯೋಜನೆ ಕೈಗೆತ್ತಿಕೊಂಡಿರುವ ಸಂಸ್ಥೆ ಕಪ್ಪುಪಟ್ಟಿ ಸೇರಿಸಲಾಗಿದ್ದು, 22 ಲಕ್ಷ ದಂಡ ಕಟ್ಟಿದ್ದಾರೆ. ಆದರೆ, ಇದರಿಂದ ಜನರ ಸಮಸ್ಯೆಗೇನೂ ಪರಿಹಾರ ಸಿಕ್ಕಿಲ್ಲ.
ನಗರದಲ್ಲಿ ಸುಮಾರು 216 ರಸ್ತೆಗಳ ಅಗಲೀಕರಣಕ್ಕೆ ಪಟ್ಟಿ ಸಿದ್ದಪಡಿಸಲಾಗಿದ್ದು ಈ ಪೈಕಿ ಕೆಲವು ರಸ್ತೆಗಳು ಅನಗತ್ಯ ಎಂಬುದು ಗೊತ್ತಾಗಿದೆ. ಅವುಗಳ ಬಗ್ಗೆ ವರದಿಯನ್ನು ನೀಡುವಂತೆ ಸಮಿತಿಯನ್ನು ರಚಿಸಲಾಗಿದೆ.
ಎರಡು ತಿಂಗಳಲ್ಲಿ ವರದಿಯನ್ನು ತರಿಸಿಕೊಂಡು ಅನಗತ್ಯ ರಸ್ತೆಗಳನ್ನು ಪಟ್ಟಿಯಿಂದ ಕೈಬಿಡುವ ತೀರ್ಮಾನ ಕೈಗೊಳ್ಳಲಾಗುವುದು. ಮತ್ತು ರಸ್ತೆ ಅಗಲೀಕರಣಕ್ಕೆಂದು ಮನೆಗಳು ಮತ್ತು ಜಾಗಗಳನ್ನು ಕಳೆದುಕೊಂಡವರಿಗೆ ಸದ್ಯದ ಮಾರುಕಟ್ಟೆ ದರಗಳನ್ನು ನೀಡುವ ಕುರಿತು ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೇಯರ್ ವೆಂಕಟೇಶ್ ಮೂರ್ತಿ ಇತ್ತೀಚೆಗೆ ಭರವಸೆ ನೀಡಿದ್ದರು.