ನನಗೂ ರಾಜ್ಯಾಧ್ಯಕ್ಷ ಪಟ್ಟ ಬೇಡ, ಈ ಬಾರಿ ನಿರಾಣಿ ಸರದಿ
ಭಾರಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಬಹುತೇಕ ಖಚಿತ ಎಂದು ಖಾಸಗಿ ಟಿವಿ ಮಾಧ್ಯಮಗಳು ವರದಿ ಮಾಡಿರುವುದನ್ನು ಸ್ವತಃ ಸಚಿವ ನಿರಾಣಿ ಅವರೇ ತಳ್ಳಿ ಹಾಕಿದ್ದಾರೆ.
ನಾನು ಆರೆಸ್ಸೆಸ್ ಹಾಗೂ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕೆಂದು ಮನವಿ ಸಲ್ಲಿಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಂಘ ಮತ್ತು ಪಕ್ಷ ವಹಿಸುವ ಜವಾಬ್ದಾರಿಯನ್ನು ವಹಿಸಲು ನಾನು ಸಿದ್ಧ ಎಂದಿದ್ದೇನೆ ಹೊರತೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರುತ್ತೇನೆ ಎಂದಿಲ್ಲ. ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು. ಅವರೇ ಪಕ್ಷದ ರಾಜ್ಯಾಧ್ಯಕ್ಷರಾದರೆ ಉತ್ತಮ ಎಂದು ನಿರಾಣಿ ಹೇಳಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ಅವರನ್ನು ಶುಕ್ರವಾರ ರಾತ್ರಿ ನವದದೆಹಲಿಗೆ ಕರೆಸಿಕೊಂಡ ಹೈಕಮಾಂಡ್, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದೆ. ಬಿಎಸ್ ಯಡಿಯೂರಪ್ಪ ಅವರು ಒಂದು ವೇಳೆ ಅಧ್ಯಕ್ಷ ಸ್ಥಾನ ಬೇಡ ಎಂದರೆ ನಾನು ಆ ಸ್ಥಾನಕ್ಕೇರಲು ಸಿದ್ಧ ಎಂದು ನಿರಾಣಿ ಭರವಸೆ ನೀಡಿದ್ದಾರೆ.
ಉತ್ತರ ಕರ್ನಾಟಕ ಹಾಗೂ ಪ್ರಭಾವಿ ಜನಾಂಗದ ಪ್ರಾತಿನಿಧ್ಯದ ರೂಪವಾಗಿ ನಿರಾಣಿ ಅವರಿಗೆ ಪಟ್ಟ ಒಲಿವುದು ಬಹುತೇಕ ಖಾತ್ರಿಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಯಡಿಯೂರಪ್ಪ ಅವರು ಒಪ್ಪದಿದ್ದರೆ ನಾನು ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತೇನೆ ಎಂದು ನಿರಾಣಿ ಅವರು ಪ್ರತಿಕ್ರಿಯಿಸಿದ್ದರು. ಆದರೆ, ನಂತರದ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರಂತೆ 'ನನಗೂ ರಾಜ್ಯಾಧ್ಯಕ್ಷ ಪಟ್ಟ ಬೇಡ' ಎಂದಿದ್ದಾರೆ.
ಸಚಿವರೊಬ್ಬರಿಗೆ ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಹಾಲಿ ರಾಜ್ಯಾಧ್ಯಕ್ಷ ಕಮ್ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಸುಳಿವು ನೀಡಿದ್ದರು. ಅದರಂತೆ ಮುರುಗೇಶ್ ನಿರಾಣಿ ಅವರನ್ನು ಆಯ್ಕೆ ಮಾಡಲಾಗಿದ್ದು ಇದಕ್ಕೆ ಸಂಘ ಪರಿವಾರ ಕೂಡಾ ಬೆಂಬಲ ಸೂಚಿಸಿದೆ ಎಂಬ ಸುದ್ದಿ ಹಬ್ಬಿತ್ತು..
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ, ಸದಾನಂದ ಗೌಡರ ನಂತರ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರೆ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಂಸದ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ ಜೋಶಿ, ಶಾಸಕ ರಘುನಾಥರಾವ್ ಮಲ್ಹಾಪುರೆ ಹೆಸರು ಕೇಳಿಬಂದಿತ್ತು.
ಆದರೆ, ಕಳೆದ ಎರಡು ದಿನಗಳಲ್ಲಿ ನಿರಾಣಿ ಹೆಸರು ಬಹುತೇಕ ಪಕ್ಕಾ ಆಗಿತ್ತು ಎನ್ನಲಾಗಿದೆ. ಸದ್ಯಕ್ಕಂತೂ ಮಾಜಿ ಸಿಎಂಗಳಾದ ಯಡಿಯೂರಪ್ಪ, ಸದಾನಂದ ಗೌಡರ ನಿರಾಸಕ್ತಿಯಿಂದ ಉಳಿದವರು ರಾಜ್ಯಾಧ್ಯಕ್ಷ ಪಟ್ಟಕ್ಕೇರುವ ಮುನ್ಸೂಚನೆ ಸಿಕ್ಕಿದೆ.