ಮಾನಸಿಕ ಖಿನ್ನತೆ: ಐಬಿಎಂ ಉದ್ಯೋಗಿ ಆತ್ಮಹತ್ಯೆ
24 ವರ್ಷದ ಐಬಿಎಂ ವೈಟ್ ಫೀಲ್ಡ್ ಸಂಸ್ಥೆ ಉದ್ಯೋಗಿ ಭರತ್ ತನ್ನ ಆಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಲಹಂಕದ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಲಾಳಸಂದ್ರದ ಜನಪ್ರಿಯ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಭರತ್ ಶನಿವಾರ ಮಧ್ಯಾಹ್ನ ತನ್ನ ಒತ್ತಡದ ಬದುಕಿಗೆ ಕೊನೆ ಹಾಡಿದ್ದಾನೆ. ಕೊಡಗು ಮೂಲದ ಭರತ್ ತನ್ನ ತಾಯಿಯೊಂದಿಗೆ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ.
ತೀವ್ರವಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಭರತ್ ಮೃತದೇಹದ ಶವ ಪರೀಕ್ಷೆ ಭಾನುವಾರ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಡೆಯಲಿದೆ. ಬಿಎಸ್ ಸಿ ಓದಿದ್ದ ಭರತ್ ಒಳ್ಳೆ ಉದ್ಯೋಗಿ ಎಂಬ ಹೆಸರು ಪಡೆದಿದ್ದ. ಮೊದಲಿಗೆ ದೊಮ್ಮಲೂರಿನ ಬಳಿ ಉದ್ಯೋಗಕ್ಕೆ ಹೋಗುತ್ತಿದ್ದ ನಂತರ ವೈಟ್ ಫೀಲ್ಡ್ ಗೆ ಶಿಫ್ಟ್ ಆಗಿದ್ದ.
ಆದರೆ, ಕಳೆದ ಎರಡು ತಿಂಗಳಿನಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕಂಪನಿ ಅವರು ಇವನನ್ನು ಕೆಲಸದಿಂದ ತೆಗೆದುಹಾಕಿದರೋ ಅಥವಾ ಇವನೇ ಕೆಲಸ ಬಿಟ್ಟನೋ ಗೊತ್ತಿಲ್ಲ. ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಎಂದು ಭರತ್ ಸಂಬಂಧಿಕರು ಹೇಳಿದ್ದಾರೆ.
ಅಪಾರ್ಟ್ಮೆಂಟ್ ನ ತನ್ನ ರೂಮ್ ನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭರತ್ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಹಲಸೂರಿನ ಕೆರೆಗೆ ಹಾರಿದ ವ್ಯಕ್ತಿ: ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ಎಚ್ ಎ ಎಲ್ ಅನ್ನಸಂದ್ರಪಾಳ್ಯದ ನಿವಾಸಿ 44 ವರ್ಷದ ಜಿ ಕುಮಾರ್ ಅವರು ಸಾಲಬಾಧೆ, ಮಾನಸಿಕ ಹಿಂಸೆ ತಾಳಲಾರದೆ ಹಲಸೂರು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಕುಮಾರ್ ಹಾಗೂ ಅವರ ಪತ್ನಿ ಉಷಾರಾಣಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಆದರೆ, ತುಂಬಾ ದಿನಗಳಿಂದ ನಷ್ಟದಲ್ಲೇ ಓಡುತ್ತಿದ್ದ ಚೀಟಿ ವ್ಯವಹಾರವನ್ನು ನಿಲ್ಲಿಸುವ ಬಗ್ಗೆ ಸೂಚನೆ ನೀಡಿದ್ದರು. ಈ ಬಗ್ಗೆ ತಿಳಿದ ಚೀಟಿ ಗ್ರಾಹಕರು, ತಮ್ಮ ದುಡ್ಡು ವಾಪಾಸ್ ಮಾಡುವಂತೆ ಪ್ರತಿದಿನ ಪೀಡಿಸತೊಡಗಿದರು.
ಇದರಿಂದ ಬೇಸತ್ತ ಕುಮಾರ್, ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಡೆತ್ ನೋಟ್ ಮನೆಯಲ್ಲಿ ಬರೆದಿಟ್ಟು ಹಲಸೂರು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ.