ಬನ್ನಿ ಉಡುಪಿಗೆ ಇಂದು (ಸೆ 8) ಕೃಷ್ಣ ಜನ್ಮಾಷ್ಟಮಿಗೆ
ದೇಶದ ಇತರೆಡೆ ಕಳೆದ ತಿಂಗಳು ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಈಗಾಗಲೇ ಆಚರಿಸಲಾಗಿದೆ. ದ್ವಾರಕೆಯಿಂದ ಬಂದೆನ್ನಲಾದ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಈ ಹಬ್ಬವನ್ನು ಇಂದು ಮತ್ತು ನಾಳೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಈ ಎರಡೂ ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪರ್ಯಾಯ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ಸ್ವಾಮೀಜಿಗಳು ಇಂದು ಬೆಳಗ್ಗೆ ಲಕ್ಷ ತುಳಸೀ ಅರ್ಚನೆ ನಡೆಸುತ್ತಾರೆ. ಮಹಾಪೂಜೆಯ ನಂತರ ಪೊರೆದೊಡೆಯ ಶ್ರೀಕೃಷ್ಣನನ್ನು ವಿಶೇಷ ಹೂವಿನಿಂದ ಅಲಂಕರಿಸಲಾಗುತ್ತದೆ.
ಮಠದ ಆವರಣದಲ್ಲಿರುವ ವಸಂತ ಮಹಲ್ ಮತ್ತು ರಾಜಾಂಗಣದಲ್ಲಿ ಚಿಣ್ಣರಿಗೆ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ. ರಾತ್ರಿ ಪೂಜೆಯ ಬಳಿಕ ಮಧ್ಯರಾತ್ರಿ 12.10ಕ್ಕೆ ರೋಹಿಣಿ ನಕ್ಷತ್ರದಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರಧಾನ ನಡೆಸಲಾಗುತ್ತದೆ.
ಮರುದಿನ ಅಂದರೆ ಭಾನುವಾರ (ಸೆ 9) ದ್ವಾದಶಿ ಪೂಜೆಯ ನಂತರ ಭೋಜನಶಾಲೆ, ಮೃಷ್ಟಾನ್ನ ಸಭಾಗೃಹ ಮತ್ತು ರಾಜಾಂಗಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಮೂರು ಗಂಟೆಯ ನಂತರ ವೈಭವದ ವಿಟ್ಲಪಿಂಡಿ (ಮೊಸರು ಕುಡಿಕೆ) ಉತ್ಸವ ಆರಂಭವಾಗಲಿದೆ.
ಈ ಬಾರಿಯ ಮೊಸುಕುಡಿಕೆಗೆ ಮುಂಬೈನಿಂದ 200ಜನರ ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿದೆ. ರಥಬೀದಿಯ 8ಕಡೆ 10 ರಿಂದ 15 ಅಡಿ ಎತ್ತರದಲ್ಲಿ ಕಟ್ಟಲಾಗುವ ಮೊಸರು, ಅವಲಕ್ಕಿ, ಚಕ್ಕುಲಿ, ನಾಣ್ಯ ತುಂಬಿರುವ ಮಣ್ಣಿನ ಗಡಿಗೆಗಳನ್ನು ಗೊಲ್ಲ ವೇಷಧಾರಿಗಳು ಕೋಲಿನಿಂದ ಒಡೆಯುತ್ತಾರೆ.
ಉಡುಪಿ ಜಿಲ್ಲಾ ಪೋಲೀಸ್ ಭಾರೀ ಭದ್ರತೆ ಒದಗಿಸಿದೆ. ಬೆಂಗಳೂರಿನ ಕತ್ತರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ವಿದ್ಯಾಪೀಠದಲ್ಲೂ ಇಂದು ಮತ್ತು ನಾಳೆ ಕೃಷ್ಣ ಜನ್ಮಾಷ್ಟಮಿ, ಲೀಲೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಲಿದೆ.
ಈಟಿವಿ ಕನ್ನಡ ಉಡುಪಿಯಲ್ಲಿ ಇಂದಿನ ಎಲ್ಲಾ ಕಾರ್ಯಕ್ರಮದ ನೇರಪ್ರಸಾರ ಒದಗಿಸಲಿದೆ. ನಾಡಿನ ಸಮಸ್ತ ಕುಲಕೋಟಿಗೆ ಶ್ರೀಕೃಷ್ಣ ಸನ್ಮಂಗಳವನ್ನು ಉಂಟುಮಾಡಲಿ.