ಸೇನೆ ಕೊಟ್ರೆ ದೇಶ ಉದ್ಧಾರ ಮಾಡ್ತಾರಂತೆ ಠಾಕ್ರೆ!
ಶಿವಸೇನೆಯ ಮುಖವಾಣಿ 'ದೋಪಹರಕಾ ಸಾಮ್ನಾ' ಪತ್ರಿಕೆಯಲ್ಲಿ ಶನಿವಾರ ಪ್ರಕಟವಾಗಿರುವ ಸಂದರ್ಶನದಲ್ಲಿ, "ದೇಶದಲ್ಲಿ ಭಯೋತ್ಪಾದನೆಯ ಬೀಜ ಬಿತ್ತುತ್ತಿರುವ ಮುಸ್ಲಿಂ ಮೂಲಭೂತವಾದಿಗಳನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇನೆಯನ್ನು ನನ್ನ ನಿಯಂತ್ರಣಕ್ಕೆ ಕೊಡಿ ಸಾಕು. ಒಂದೇ ತಿಂಗಳಲ್ಲಿ ಪವಾಡಸದೃಶ ರೀತಿಯಲ್ಲಿ ದೇಶವನ್ನು ಬದಲಾವಣೆ ಮಾಡಿ ತೋರಿಸುತ್ತೇನೆ ಎಂದು ಇದೀಗ ತಾನೆ ಈ ಐಡಿಯಾ ಹೊಳೆದವರ ಹಾಗೆ ಹೇಳಿದ್ದಾರೆ. ಅಲ್ಲ ಸಾರ್, ನಿಮ್ಮ ಶಿವಸೇನೆಯಲ್ಲಿಯೇ ಸೇನೆ ಇದೆಯಲ್ಲ, ಮತ್ತೆ ಭಾರತದ ಸೇನೆ ಯಾಕೆ ಬೇಕು ಎಂದು ಕೆಣಕಿದಾಗ, ನಮ್ಮ ಸೇನೆಯಲ್ಲಿನ ಸೈನಿಕರು ನಿರಾಯುಧರಾಗಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಆಗಸ್ಟ್ 11ರಂದು ಆಜಾದ್ ಮೈದಾನದಲ್ಲಿ, ಅಸ್ಸಾಂನಲ್ಲಿನ ಮುಸ್ಲಿಂರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಮಾಡಿದ ಮೆರವಣಿಗೆ ಮತ್ತು ಆ ಸಮಯದಲ್ಲಿ ನಡೆದ ಹಿಂಸಾಚಾರ ಪೂರ್ವನಿರ್ಧಾರಿತವಾದದ್ದು ಎಂದು ಬಾಳಾ ಠಾಕ್ರೆ ಬಣ್ಣಿಸಿದ್ದಾರೆ. ಆಜಾದ್ ಮೈದಾನದಲ್ಲಿ ನಡೆದ ಹಿಂಸಾಚಾರದ ಹಿಂದೆ ಭೂಗತ ದೊರೆ ದಾವೂದ್ ಇಬ್ರಾಹಿಂ ಕೈವಾಡವಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಈ ರೀತಿಯಲ್ಲಿ ಪೂರ್ವನಿರ್ಧಾರಿತವಾಗಿ ಹಿಂಸಾಚಾರ ನಡೆಸುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದಿಂದ ಬಂದಿರುವ ಮುಸ್ಲಿಂ ಮೂಲಭೂತವಾದಿಗಳನ್ನು ಮಟ್ಟು ಹಾಕುತ್ತೇನೆ ಎಂದು ಎಚ್ಚರಿಸಿರುವ ಅವರು, ಕನಿಷ್ಠಪಕ್ಷ ಮಹಾರಾಷ್ಟ್ರದಲ್ಲಿ ಅವರ ಆಟ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ನಂತರ ಮುಂಬೈನಲ್ಲಿ ನಡೆದ ಹಿಂಸಾಚಾರ, ಗೋಧ್ರಾ ಹತ್ಯಾಕಾಂಡ ನಂತರ ಗುಜರಾತ್ನಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದ ಅಮಾಯಕರ ಹತ್ಯೆ, ನಂತರ ಆಗಸ್ಟ್ 2012ರಲ್ಲಿ ಮುಂಬೈನಲ್ಲಿ ನಡೆದ ಹಿಂಸಾಚಾರದ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಕೈವಾಡವಿರುವುದು ಸ್ಪಷ್ಟ ಎಂದು ಠಾಕ್ರೆ ನುಡಿದಿದ್ದಾರೆ.
ಕೆಲ ದಿನಗಳ ಹಿಂದೆ, ದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡಬೇಕಿದ್ದರೆ ಸೇನೆಯನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿರುವ ಕೆ.ಜಿ. ಬೋಪಯ್ಯ ಅವರು ಹೇಳಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಅವರು ರಾಜೀನಾಮೆ ನೀಡಬೇಕೆಂಬ ಆಗ್ರಹ ಬಂದಿದೆ. ಇದೇ ಆಗ್ರಹವನ್ನು ಬಾಳಾ ಠಾಕ್ರೆ ಅವರ ವಿರುದ್ಧವೂ ಮಾಡುವ ಧೈರ್ಯ ಯಾರಿಗಾದರೂ ಇದೆಯಾ?