ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ ಎಂದ ಜಸ್ಟೀಸ್ ಕಿತ್ತಾಕಿ
ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ 'Remove Justice Bhaktavatsala' ಎಂಬ ಪುಟ ನಿರ್ಮಿಸಲಾಗಿದ್ದು, ಆನ್ ಲೈನ್ ಪಿಟಿಷನ್ ಮೂಲಕ ಸಾವಿರ ಜನರ ಸಹಿ ಸಂಗ್ರಹಿಸಿ ನ್ಯಾ ಭಕ್ತವತ್ಸಲ ಅವರನ್ನು ಕೆಳಗಿಳಿಸಲು ಕೆಲ ಸಂಘಟನೆಗಳು ಮುಂದಾಗಿದೆ.
ನ್ಯಾ. ಭಕ್ತವತ್ಸಲ ಮಾಡಿದ ತಪ್ಪೇನು?: ಪತ್ನಿ ಪೀಡಿಕನ ವಿರುದ್ಧ ವಿಚ್ಛೇದನ ಪಡೆಯಲು ಇಚ್ಛಿಸಿದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಕೆ. ಭಕ್ತವತ್ಸಲ ಅವರು ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರಿಸಿತ್ತು. ಮದುವೆಯನ್ನು ಉಳಿಸಿಕೊಳ್ಳಲು ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಂಡನ ಹಿಂಸೆಗೆ ಹೊಂದಿಕೊಳ್ಳಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.
ಎಲ್ಲಾ ಮದುವೆಗಳಲ್ಲಿ ಮಹಿಳೆಗೆ ತೊಂದರೆಯಾಗುತ್ತದೆ. ನಿಮಗೆ ಈಗ ಇಬ್ಬರು ಮಕ್ಕಳಿದ್ದಾರೆ ಮತ್ತು ಮಹಿಳೆ ಯಾವ ರೀತಿ ತೊಂದರೆಯನ್ನು ಅನುಭವಿಸುತ್ತಾಳೆಂದು ನಿಮಗೆ ಈಗಾಗಲೇ ತಿಳಿದಿರಬಹುದು. ಇಂತಹದ್ದೇ ಪ್ರಕರಣದಲ್ಲಿ ಟೆಕ್ಕಿಗಳಿಬ್ಬರು ಮಕ್ಕಳ ದೃಷ್ಟಿಯಿಂದ ಪರಿಸ್ಪರ ಒಂದಾಗಿದ್ದಾರೆ. ನಿಮ್ಮ ಗಂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಮತ್ತು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಲ್ಲರು. ಗಂಡ ಹೊಡೆಯುತ್ತಾನೆಂದು ಮಾತ್ರ ನೀವ್ಯಾಕೆ ಹೇಳುತ್ತಿದ್ದೀರಿ ಎಂದು ಜಸ್ಟಿಸ್ ಭಕ್ತವತ್ಸಲ ಪ್ರಶ್ನಿಸಿದ್ದರು.
ನ್ಯಾಯಾಧೀಶರ ಈ ಹೇಳಿಕೆಯಿಂದ ಕೆರಳಿದ ಸಂಘಟನೆಯೊಂದು ಸಾಮಾಜಿಕ ತಾಣದಲ್ಲಿ ಆರಂಭಿಸಿರುವ ಅಭಿಯಾನಕ್ಕೆ 500ಕ್ಕೂ ಹೆಚ್ಚು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.ಮುಖ್ಯ ನ್ಯಾಯಾಧೀಶರಾದ ಎಸ್. ಎಚ್ ಕಪಾಡಿಯಾ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ಭಕ್ತವಸ್ತಲ ಅವರನ್ನು ವಜಾ ಮಾಡಬೇಕೆಂದು ಮನವಿ ಮಾಡಲಾಗಿದೆ. ಕೆಲವು ಸೂಕ್ಷ್ಮ ವಿಷಯಗಳಲ್ಲಿ ಹೇಗೆ ವ್ಯವಹರಿಸಬೇಕೆಂಬ ಬಗ್ಗೆ ಎಲ್ಲಾ ನ್ಯಾಯಾಧೀಶರಿಗೆ ಮಾರ್ಗಸೂಚಿ ಜಾರಿಗೊಳಿಸಬೇಕು ಎಂದು ಮಹಿಳಾ ವಕೀಲರು ಕಪಾಡಿಯಾ ಅವರಿಗೆ ಲಿಖಿತವಾಗಿ ಮನವಿ ಮಾಡಿಕೊಂಡಿದ್ದಾರೆ.
ಭಕ್ತವತ್ಸಲ ಅವರು ವಿವಾದ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೆ ಮೊದಲು ಮಹಿಳಾ ವಕೀಲರೊಬ್ಬರು ಡೈವೋರ್ಸ್ ಅರ್ಜಿಯ ಬಗ್ಗೆ ವಾದಿಸುತ್ತಿದ್ದರು. ಆದರೆ ಈ ವೇಳೆ ವಕೀಲರಿಗೆ ಮದುವೆಯಾಗದಿರುವ ಕಾರಣ ಅವರು ವಿಚ್ಛೇದನ ಪ್ರಕರಣದಲ್ಲಿ ವಾದಿಸಲು ಅರ್ಹರಲ್ಲ ಎಂದು ಹೇಳಿದ್ದ ಭಕ್ತವಸ್ತಲ ಅವರು ವಿವಾದವನ್ನು ಉಂಟು ಮಾಡಿದ್ದರು.
ಇದೇ ನ್ಯಾಯಾಧೀಶರು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರ ಮೇಲಿನ ದಾಳಿಯನ್ನು ಖಂಡಿಸಿದ್ದು ವಿಪರ್ಯಾಸ. ಭಕ್ತವತ್ಸಲ ಅವರು ಹಲವಾರು ದಂಪತಿಗಳ ಮನವೊಲಿಸಿ ಡೈವೋರ್ಸ್ ನೀಡದಂತೆ ಮಾಡಿದ್ದಾರೆ ಎನ್ನುವುದು ಕೂಡಾ ನಂಬಬೇಕಾದ ನಿಜ.