ಎಸ್ ಸಿ/ ಎಸ್ ಟಿ ಹುದ್ದೆ ಬಡ್ತಿ ಮೀಸಲಾತಿಗೆ ಅಸ್ತು
ರಾಜ್ಯಸಭೆಯಲ್ಲೂ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ಸಂಸದರು ಬಾವಿಗಿಳಿದು ಯುದ್ಧಕ್ಕೆ ನಿಂತ ಘಟನೆ ಬುಧವಾರ(ಸೆ.5) ನಡೆದಿದೆ.. ವಿವರ ಮುಂದೆ ಓದಿ[...]
ಪರಿಶಿಷ್ಟ ಜಾತಿ-ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿಗೆ ನೀಡಲು ಉತ್ತರಪ್ರದೇಶದ ಸಮಾಜವಾದಿ ಪಕ್ಷ ಒಪ್ಪಿದರೂ, ಬಡ್ತಿಯಲ್ಲಿ ಮೀಸಲಾತಿ ನೀಡುವುದು ಸರಿಯಲ್ಲ ಎಂದು ಯುಪಿಎ ಸರ್ಕಾರಕ್ಕೆ ಹೇಳಿತ್ತು.
ಒಬಿಸಿಗಳಿಗೂ ಇದೇ ರೀತಿಯ ಬಡ್ತಿ ಮೀಸಲಾತಿಯ ಪ್ರಸ್ತಾಪವನ್ನು ಎಸ್ಪಿ ನಾಯಕ ರಾಮಗೋಪಾಲ್ ಯಾದವ್ ಮುಂದಿಟ್ಟಿದ್ದರು. ತಮ್ಮ ಪಕ್ಷ ಈಗಲೂ ಯುಪಿಎ ಮಂಡಿಸಿದ ಮಸೂದೆಯನ್ನು ವಿರೋಧಿಸುತ್ತದೆ ಎಂದಿದ್ದರು.
ಸಂಪುಟದ ನಿರ್ಧಾರವು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದುದು. ತಾವು ಈ ತಿದ್ದುಪಡಿ ಮಸೂದೆಗೆ ವಿರೋಧವನ್ನು ಮುಂದು ವರಿಸಲಿದ್ದೇವೆ. ಇದು ಪ್ರಸ್ತುತ ಕೋಲಾಹಲವೆಬ್ಬಿಸಿರುವ ಕಲ್ಲಿದ್ದಲು ಗಣಿ ಹಗರಣದಿಂದ ಜನರ ಗಮನವನ್ನು ದೂರ ಸೆಳೆಯುವ ಸರಕಾರದ ತಂತ್ರವಾಗಿದೆ ಎಂದು ರಾಮಗೋಪಾಲ್ ಯಾದವ್ ಆರೋಪಿಸಿದ್ದರು.
ಇದೇ ವೇಳೆ, ಮುಂದಿನ ದಿನಗಳಲ್ಲಿ ಒಬಿಸಿಗಳಿಗೂ ಈ ಸೌಲಭ್ಯ ವಿಸ್ತರಿಸಲಾಗುವುದೆಂಬ ಭರವಸೆಯನ್ನು ತಾವು ಎಸ್ಪಿ ನಾಯಕರಿಗೆ ನೀಡಿದ್ದೇವೆ. ಕಾಂಗ್ರೆಸ್ ಮಸೂದೆಗೆ ಅವರ ಬೆಂಬಲ ಗಳಿಸಲು ಯತ್ನಿಸುವುದು. ಎಸ್ಪಿ ಇದಕ್ಕೆ ಒಪ್ಪುವುದೆಂಬ ಆಶಾಭಾವ ತಮಗಿದೆ. ಇದೊಂದು ಸರ್ವಾನುಮತಿಯ ನಿರ್ಧಾರವಾಗಿದೆ. ಇದು ರಾಜಕೀಯ ತಂತ್ರವಲ್ಲ. ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಕೇಂದ್ರ ಸಚಿವ ಸಲ್ಮಾನ್ ಖುರ್ಶಿದ್ ಹೇಳಿದ್ದಾರೆ.
ಮಾಯಾವತಿ ಸ್ವಾಗತ: ಸರ್ಕಾರದ ಈ ನಿರ್ಧಾರವನ್ನುಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಸ್ವಾಗತಿಸಿದ್ದಾರೆ. 'ತಾವು ಮಸೂದೆಯನ್ನು ಸ್ವಾಗತಿಸುತ್ತೇವೆ. ಅದಕ್ಕಾಗಿ ತಾವು ಬಹಳಷ್ಟು ಹೋರಾಡಿದ್ದೇವೆ. ಬಿಎಸ್ಪಿಯೇ ಈ ವಿಷಯವನ್ನು ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಎತ್ತಿತ್ತು. ಅದನ್ನನುಸರಿಸಿ ಸರಕಾರವು ಸರ್ವಪಕ್ಷ ಸಭೆಯೊಂದನ್ನು ನಡೆಸಲು ಒಪ್ಪಿತ್ತು' ಎಂದು ಮಾಯಾವತಿ ಹೇಳಿದ್ದಾರೆ.
ತಿದ್ದುಪಡಿ ಮಸೂದೆಯ ಪರ ಮತ ನೀಡುವಂತೆ ಅವರು ಎನ್ಡಿಎಯನ್ನು ವಿನಂತಿಸಿದ್ದಾರೆ. ಮಾಯಾವತಿ ಲೋಕಸಭೆಯ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ರನ್ನು ಭೇಟಿಯಾಗಿ ಈ ಮಸೂದೆಯು ಸದನದಲ್ಲಿ ಅಂಗೀಕಾರಗೊಳ್ಳಲು ಅನುಕೂಲವಾಗುವಂತೆ ಕಲ್ಲಿದ್ದಲು ಗಣಿ ಹಗರಣದ ಕುರಿತ ಬಿಜೆಪಿಯ ಪ್ರತಿಭಟನೆಯನ್ನು ಒಂದು ದಿನ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಬಿಜೆಪಿಯವರು ಕಲಾಪ ನಡೆಯಲು ಬಿಟ್ಟು ಇದೇ ಅಧಿವೇಶನದಲ್ಲಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡಬೇಕು. ಯುಪಿಎ ನಾಯಕರು ಹಾಗೂ ಸರಕಾರವೂ ಈ ಬಗ್ಗೆ ಅವರಲ್ಲಿ ಮಾತುಕತೆ ನಡೆಸಬೇಕೆಂದು ಮಾಯಾವತಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್, ಬಿಎಸ್ಪಿ ಹಾಗೂ ಎಡಪಕ್ಷಗಳು ಮಸೂದೆಯ ಪರವಿವೆ. ಸಮಾಜವಾದಿ ಪಕ್ಷ ಹಾಗೂ ಶಿವಸೇನೆ ಮಸೂದೆಯನ್ನು ವಿರೋಧಿಸುತ್ತಿವೆ. ಬಿಜೆಪಿಯ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ. ಕೆಲವರು ಮಸೂದೆಗೆ ಬೆಂಬಲ ಸೂಚಿಸಿದ್ದರೆ, ಇನ್ನು ಕೆಲವರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಎಸ್ಸಿ/ಎಸ್ಟಿಗಳಿಗೆ ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ಕಾನೂನು ಒಪ್ಪುವುದಿಲ್ಲ ಅಟಾರ್ನಿ ಜನರಲ್ ಗೂಲಾಂ ಇ. ವಹನ್ವತಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.