ಬೆಳ್ಳಿ ಗೆದ್ದ ಹೊಸನಗರ ಗಿರಿ ಬೆನ್ನು ತಟ್ಟಿದ ಮೋದಿ
24 ವರ್ಷದ ಕನ್ನಡ ಕುವರ ಗಿರೀಶ್, ಎಡಗಾಲು ಪೊಲಿಯೋ ಸಮಸ್ಯೆಯಿಂದ ಊನವಾಗಿದ್ದರೂ ಹೈಜಂಪ್ ನಲ್ಲಿ ಹಾರುವ ರೀತಿ ನೋಡಿ ಲಂಡನ್ನಿನ ಪ್ರೇಕ್ಷಕರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಗಿರೀಶ್ ಅವರು ಕತ್ತರಿ ತಂತ್ರಜ್ಞಾನ ಬಳಸಿ 1.74 ಮೀ ಹಾರಿ ಅಂತಿಮ ಹಣಾಹಣಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
"Many congratulations to Girisha Hosanagara Nagarajegowda to have given India its first medal at the Paralympic Games" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ #Girisha Hosanagara Nagarajegowda ಸರ್ಚ್ ಟ್ಯಾಗ್ ಕಳೆದ ಎರಡು ದಿನಗಳಿಂದ ಟಾಪ್ 10 ಪಟ್ಟಿಯಲ್ಲಿ ವಿಹರಿಸುತ್ತಿತ್ತು.
ಕೆಲವರಂತೂ ಕಂಚು ಗೆದ್ದ ಹೈದರಾಬಾದ್ ಕುವರಿ ಸೈನಾ ನೆಹ್ವಾಲ್ ಗೆ ದುಬಾರಿ BMW ಕೊಟ್ಟ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಎಲ್ಲಿ? ಗಿರೀಶ್ ಗೆ ಕಾರು ಕೊಡುವ ಮನಸ್ಸು ಮಾಡುತ್ತಾರಾ ಎಂದು ಪ್ರಶ್ನಿಸಿದ್ದೂ ಇದೆ.
ಅಪ್ಪಚ್ಚು ರಂಜನ್ ಹೇಳಿಕೆ : ಗಿರೀಶ್ ಸಾಧನೆಗೆ ಮೆಚ್ಚಿ ಕೇಂದ್ರ ಕ್ರೀಡಾ ಸಚಿವಾಲಯ 30 ಲಕ್ಷ ರು ನೀಡಲಿದೆ ಎಂದು ಕ್ರೀಡಾ ಸಚಿವ ಅಜಯ್ ಮಾಕೆನ್ ಹೇಳಿದ್ದಾರೆ. ಆದರೆ, ರಾಜ್ಯ ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಅವರು ಪ್ರಮುಖ ಕನ್ನಡ ದಿನಪತ್ರಿಕೆಗೆ ನೀಡಿರುವ ಪತ್ರಿಕ್ರಿಯೆಗೆ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಮ್ಮಲ್ಲಿ ಯಾವುದೇ ಉದ್ಯೋಗ ಖಾಲಿ ಇಲ್ಲ. ನಾವು ಈ ಬಾರಿ ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ ನೀಡಿದ್ದೇವೆ. ಮುಂದಿನ ಬಾರಿಯೂ ನೀಡುತ್ತೇವೆ. ಅವರ ಉದ್ಯೋಗದ ಬಗ್ಗೆ ನಿಮಗ್ಯಾಕೆ ಕಾಳಜಿ' ಎಂದು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಪ್ರಶ್ನಿಸಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಉದ್ಯೊಗಿಯಾಗಿದ್ದ ಗಿರೀಶ್, ಕ್ರೀಡಾ ಸಾಧನೆಗಾಗಿ ಉದ್ಯೋಗ ತೊರೆದಿದ್ದಾರೆ. ಹಾಸನದ ಅರಕಲಗೂಡಿನ ಹೊಸನಗರದಲ್ಲಿ ಮಾತ್ರ ಸಂಭ್ರಮ ಮುಗಿಲು ಮುಟ್ಟಿದೆ.
ಬಡ ಕೃಷಿಕ ನಾಗರಾಜೇಗೌಡ ಹಾಗೂ ಜಯಮ್ಮ ದಂಪತಿ ಮಗನ ಸಾಧನೆಯ ಸಂಭ್ರಮದಲ್ಲಿ ಮುಳುಗಿದ್ದಾರೆ. ಕರ್ನಾಟಕ ಸರ್ಕಾರ ಈ ಮುಂಚೆ 5 ಲಕ್ಷ ರು ಸಹಾಯ ಧನ ನೀಡಿತ್ತು. ಈಗ ಮತ್ತೊಮ್ಮೆ 5 ಲಕ್ಷ ರು ಘೋಷಿಸಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದನ್ನು ಹರ್ಯಾಣ ಹಾಗೂ ಗುಜರಾತ್ ಸರ್ಕಾರವನ್ನು ನೋಡಿ ಕಲಿಯಬೇಕಿದೆ.
ವಿಕಲಾಂಗರಿಕೆ ಕ್ರೀಡೆ ಏಕೆ?: ವೆಬ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ವಿಕಲಾಂಗರಿಗೆ ಕ್ರೀಡೆ ಬೇಕೆ ಎಂದು ಕೇಳಿದ ಪ್ರಶ್ನೆಗೆ ಸ್ವಲ್ಪ ಖಾರವಾಗೇ ಗಿರೀಶ್ ಉತ್ತರಿಸಿದ್ದರು.
ಹೋಗಿ ಇದೇ ಪ್ರಶ್ನೆಯನ್ನು ಸೈನಾ ನೆಹ್ವಾಲ್ ಹಾಗೂ ಸಚಿನ್ ಅವರಿಗೆ ಕೇಳಿ.. ನೀವು ಬಾಡ್ಮಿಂಟನ್ ಹಾಗೂ ಕ್ರಿಕೆಟ್ ಏಕೆ ಆಯ್ಕೆ ಮಾಡಿಕೊಂಡಿದ್ದೀರಾ? ಏಕೆ ಆಡುತ್ತಿದಾರಾ? ಎಂದು. ಎಲ್ಲರಂತೆ ನಾವು ಕೂಡಾ ಸ್ಪರ್ಧಿಸುವುದು ನಮ್ಮ ಹಕ್ಕು. ಜನ ಮೆಚ್ಚುಗೆ ಸಮರ್ಥನಂ ನಂಥ ಎನ್ ಜಿಒ ಬೆಂಬಲ ಇರುವ ತನಕ ನಮ್ಮಂತವರು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಗಿರೀಶ್ ಹೇಳಿದ್ದರು.