ಎಬಿವಿಪಿ ಕಾಲೇಜು ಬಂದ್ ಉತ್ತಮ ಆರಂಭ
ನಗರದ ಶೇಷಾದ್ರಿಪುರಂ ಕಾಲೇಜಿಗೆ ನುಗ್ಗಿದ 40ಕ್ಕೂ ಅಧಿಕ ಎಬಿವಿಪಿ ಕಾರ್ಯಕರ್ತರು, ಕಾಲೇಜು ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ.
ಹೊಸೂರು ರಸ್ತೆ ತಡೆ: ಮಡಿವಾಳ ಸಂತೆ, ಮಸೀದಿ ವೃತ್ತಗಳಲ್ಲಿ ಎತ್ತ ನೋಡಿದರೂ ವಿದ್ಯಾರ್ಥಿಗಳೇ ತುಂಬಿದ್ದಾರೆ. ಕೃಪಾನಿಧಿ, ರೆಡ್ಡಿ ಜನ ಸಂಘ, ಜ್ಯೋತಿ ನಿವಾಸ್ ಸೇರಿದಂತೆ ಹಲವು ಕಾಲೇಜಿನ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸೆಪ್ಟೆಂಬರ್ 4 ರಂದುದೇಶಾದ್ಯಂತ ಕಾಲೇಜ್ ಬಂದ್, ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಯೂತ್ ಎಗೆನೆಸ್ಟ್ ಕರಪ್ಷನ್ನ ರಾಷ್ಟ್ರೀಯ ಸಹ ಸಂಚಾಲಕ ಎನ್.ರವಿಕುಮಾರ್ ತಿಳಿಸಿದ್ದಾರೆ.
ದೇಶದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರ ಭ್ರಷ್ಟಾಚಾರವೇ ತನ್ನ ಸಂಸ್ಕೃತಿ ಎಂದು ಭಾವಿಸಿದಂತಿದೆ. ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಆಡಳಿತದಲ್ಲಿ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಹಗರಣ, ವಿಮಾನ ನಿಲ್ದಾಣ ನಿರ್ಮಾಣ ಹಗರಣ, ಟೆಟ್ರಾ ಟ್ರಕ್ ಹಗರಣ , 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣ, ಪಡಿತರ ವಿತರಣೆಯಲ್ಲಿ ಹಗರಣ... ಹೀಗೆ ಸಾವಿರಾರು ಕೋಟಿ ಹಗರಣಗಳಲ್ಲಿ ಮುಳಗಿರುವ ಕೇಂದ್ರ ಸರ್ಕಾರದ ವಿರುದ್ದ ಯುವ ಜನಾಂಗ ಜಾಗೃತಿಗೊಳಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರದಲ್ಲಿ ಲಕ್ಷಾಂತರ ಕೋಟಿ ಹಗರಣ ನಡೆದಿದ್ದರೂ ಪ್ರಧಾನಿ ಮನಮೋಹನ್ ಸಿಂಗ್ ಭ್ರಷ್ಟಾಚಾರ ನಡೆದಿಲ್ಲ ಎಂದು ಸಮರ್ಥಿಸಿ ಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ದೇಶದಲ್ಲಿನ ಸಂಪತ್ತನ್ನು ಲೂಟಿ ಮಾಡಿ ವಿದೇಶಿ ಬ್ಯಾಂಕ್ಗಳಲ್ಲಿ ಬಚ್ಚಿಟ್ಟಿರುವಪ್ರಭಾವಿ ವ್ಯಕ್ತಿಗಳ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.