ಲೋಕಾಯುಕ್ತ ಕೋರ್ಟಿನಲ್ಲಿ ಯಡಿಯೂರಪ್ಪಗೆ ಆಘಾತ
ಇದೇ ವೇಳೆ, ಶಿವಮೊಗ್ಗದಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ರಾಘವೇಂದ್ರ ಅವರಿಗೆ ಖುದ್ದು ಹಾಜರಾಗುವಂತೆ ಲೋಕಾಯುಕ್ತ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಸೆ. 25ರಂದು ಇಬ್ಬರೂ ಕೋರ್ಟಿಗೆ ಹಾಜರಾಗಬೇಕೆಂದು ಸಮನ್ಸ್ ನೀಡಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ ಅಕ್ರಮದ ಸಂಬಂಧ ಲೋಕಾಯುಕ್ತ ಪೊಲೀಸರು ಎರಡನೆಯ ಬಾರಿಯೂ ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ಲೋಕಾಯುಕ್ತ ಜಡ್ಜ್ ನ್ಯಾ. ಸುಧೀಂದ್ರರಾವ್ ತಿರಸ್ಕರಿಸಿದ್ದಾರೆ. ಸೆ. 25ರಂದು ಕೋರ್ಟಿಗೆ ಹಾಜರಾಗುವಂತೆಯೂ ಯಡಿಯೂರಪ್ಪಗೆ ಸಮನ್ಸ್ ಜಾರಿ ಮಾಡಿದ್ದಾರೆ. ಇದರಿಂದ ಪ್ರಕರಣ ಮತ್ತೊಮ್ಮೆ ಕುತೂಹಲ ಕೆರಳಿಸಿದೆ.
ಈ ಹಿಂದೆಯೂ, ತನಿಖಾ ಪ್ರಗತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾ ಸುಧೀಂದ್ರರಾವ್ ಅವರು, 'ಲೋಕಾಯುಕ್ತ ಎಸ್ ಪಿ ಅವರು ಪೂರ್ವಾಗ್ರಹ ಪೀಡಿತರಾಗಿ ವರದಿ ನೀಡಿದ್ದಾರೆ. ಹಾಗಾಗಿ ಈ ವರದಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ವರದಿ ಆಧಾರಿಸಿ ಯಡಿಯೂರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲು ಕಷ್ಟ. ಪ್ರಕರಣದ ಬಗ್ಗೆ ಮರು ತನಿಖೆ ನಡೆಸಿ ಹೊಸದಾಗಿ ಬಿ ರಿಪೋರ್ಟ್ ಸಲ್ಲಿಸುವಂತೆ ಆದೇಶಿಸಿದ್ದರು.
ಭದ್ರಾ ಮೇಲ್ದಂಡೆ ಯೋಜನೆ ಅಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಪಾತ್ರವೇನೂ ಇಲ್ಲ ಎಂದು ಸಾಬೀತುಪಡಿಸುವ ಹೆಚ್ಚುವರಿ ಬಿ ರಿಪೋರ್ಟ್ ಅನ್ನು ಕಳೆದ ತಿಂಗಳು ಸಲ್ಲಿಸಿದ್ದರು. ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅವರು ಸಲ್ಲಿಸಿದ್ದ ದೂರಿನಂತೆ ಯಡಿಯೂರಪ್ಪ ಅವರ ವಿರುದ್ಧದ ಆರೋಪ ನಿರೂಪಿಸಲು ಯಾವುದೇ ಸಾಕ್ಷ್ಯವಿಲ್ಲವೆಂದು ಲೋಕಾಯುಕ್ತ ಪೊಲೀಸರು ಕಳೆದ ಡಿಸೆಂಬರಿನಲ್ಲಿಯೇ ಹೇಳಿದ್ದರು.
ಲೋಕಾಯುಕ್ತದ ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಗಿರೀಶ್ ಅವರು ಜನವರಿಯಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಸಮರ್ಥಿಸಿಕೊಂಡು 250 ಪುಟಗಳ ಮತ್ತೊಂದು ವರದಿಯನ್ನು ಸಲ್ಲಿಸಿದ್ದರು. ಈ ಮಧ್ಯೆ, ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಗಿರೀಶ್ ಅವರು ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಬಡ್ತಿ ಪಡೆದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಧಿಕ ಮೊತ್ತದ ಬಿಡ್ ಸಲ್ಲಿಸಿದ್ದ ಕಂಪನಿಗೆ (RNS Infrastructure) ಟೆಂಡರ್ ಅನುಮೋದಿಸುವ ಮುನ್ನ ಆ ಕಂಪನಿಯಿಂದ ಯಡಿಯೂರಪ್ಪ ಕುಟುಂಬದವರ ಕಂಪನಿಗೆ (Dhavalgiri Properties and Sahyadri Healthcare) ಲಂಚ ಸಂದಾಯವಾಗಿದೆ ಎಂಬುದು ಪ್ರಕರಣದ ಪ್ರಮುಖ ದೂರಾಗಿದೆ.