ಡಿನ್ನರ್ ಕೊಡಲಿಲ್ಲ ಅವಳು, ಕೊಂದು ಓಡಿದ ಅವನು
ಸುಮಾರು ಒಂದು ತಿಂಗಳ ಕಾಲ ಪೊಲೀಸರಿಗೆ ಬೆವರು ಹರಿಸುವಂತೆ ಮಾಡಿದ ಭೂಪ ರಾಜಸ್ಥಾನ ಮೂಲದ ಆರೋಪಿ ಭೂಪೇಂದ್ರ ಜಾತ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನೊಟ್ಟಿಗೆ ಜೀವಿಸುತ್ತಿದ್ದ ಕವಿತಾ ಜಾತ್ ಳನ್ನು ಕೊಂದ ಕಾರಣವನ್ನು ವಿಸ್ತಾರವಾಗಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.
ಕವಿತಾಗೂ ಹಾಗೂ ಭೂಪೇಂದ್ರನಿಗೂ ಹಾಗೂ ಹೀಗೂ ಯಾವುದೋ ಮಾಲ್ ನಲ್ಲಿ ಪರಿಚಯವಾಗಿದೆ. ಗಂಡನಿಂದ ಪರಿತ್ಯಕ್ತಳಾಗಿದ್ದ ಕವಿತಾಳಿಗೂ ಮಹಾನ್ ನಗರಿ ಮುಂಬೈನಲ್ಲಿ ಜೀವನೋಪಾಯಕ್ಕೆ ಒಂದು ನೆಲೆ ಬೇಕೆನಿಸಿದೆ. ಇಬ್ಬರೂ ರಾಜಸ್ಥಾನ ಮೂಲದವರಾದ್ದರಿಂದ ಕವಿತಾಳಿಗೆ ಆಶ್ರಯ ನೀಡಲು ಭೂಪೇಂದ್ರ ಒಪ್ಪಿದ್ದಾನೆ.
22 ವರ್ಷದ ಕವಿತಾ ಹಾಗೂ ಭೂಪೇಂದ್ರ ಮಾಲ್ ವೊಂದರ ಮಳಿಗೆಯಲ್ಲಿ ಉದ್ಯೋಗದಲ್ಲಿದ್ದರು. ತಿಂಗಳಿಗೆ ಕನಿಷ್ಠ 11 ರಿಂದ 15 ಸಾವಿರ ರು ತನಕ ದುಡಿಯುತ್ತಿದ್ದರು. ಮನೆಯ ಖರ್ಚು ವೆಚ್ಚವನ್ನು ಕವಿತಾ ಸಮರ್ಥವಾಗಿ ನಿಭಾಯಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಈ ನಡುವೆ ಭೂಪೇಂದ್ರನಿಗೆ ಕಳೆದ ತಿಂಗಳ ಸರಿಯಾಗಿ ಸಂಬಳ ಸಿಕ್ಕಿರಲಿಲ್ಲ. ಹೀಗಾಗಿ ತುಂಬಾ ವ್ಯಥೆಗೊಳಗಾಗಿದ್ದ. ಸಿಗರೇಟ್, ಎಣ್ಣೆಗೆಲ್ಲ ಕವಿತಾಳ ಮುಂದೆ ಕೈ ಚಾಚಿ ಚಾಚಿ ಬೇಸರವಾಗಿತ್ತು. ಹೀಗೆ ಕೊಲೆ ನಡೆದ ದಿನ ರಾತ್ರಿ ಮನೆಗೆ ಬಂದವನೇ ಊಟ ಕೊಡು ಎಂದು ಕಿರುಚಿದ್ದಾನೆ.
ಆದರೆ, ಕೆಲಸದಿಂದ ಬಂದಿದ್ದ ಕವಿತಾ ಅನಾರೋಗ್ಯದ ಕಾರಣದಿಂದ ಬೇಗನೇ ನಿದ್ದೆಗೆ ಜಾರಿದ್ದಾಳೆ. ಇತ್ತ ಕವಿತಾಳಿಂದ ಯಾವುದೇ ಉತ್ತರ ಬಾರದಿದ್ದಾಗ, ಕವಿತಾ ಮಲಗಿದ್ದ ರೂಮಿಗೆ ತೆರಳಿದ ಭೂಪೇಂದ್ರ ಹಿಂದು ಮುಂದು ನೋಡದೆ ಆಕೆಯ ದುಪ್ಪಟ್ಟಾ ವೇಲ್ ನಿಂದ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಕುಡಿದ ಅಮಲಿನಲ್ಲಿದ್ದ ಭೂಪೇಂದ್ರನಿಗೆ ಕವಿತಾ ಸತ್ತಿರುವುದು ಕೂಡಾ ಗೊತ್ತಾಗಿಲ್ಲ.
ಮರುದಿನ ಬೆಳಗ್ಗೆ ಎದ್ದವನೇ ರಾಜಸ್ಥಾನದ ಕೋಟಾ ಜಿಲ್ಲೆಯ ಬರೋಲಿ ಗ್ರಾಮಕ್ಕೆ ಟ್ರೈನ್ ಟಿಕೆಟ್ ಪಡೆದು ಆರಾಮವಾಗಿ ಊರಿಗೆ ಹೋಗಿ ನಿಶ್ಚಿಂತೆಯಿದ್ದ ಇದ್ದು ಬಿಟ್ಟಿದ್ದಾನೆ. ಭೂಪೇಂದ್ರನ ಮೂಲ ಹುಡುಕಿ ಹೊರಟ ಪೊಲೀಸರು ಸೋಮವಾರ(ಸೆ.3) ಕೊನೆಗೂ ಬಂಧಿಸಿ ಮುಂಬೈಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.