ಜನಾರ್ದನ ರೆಡ್ಡಿ ಬಂಧನವಾಗಿ ಆಗ್ಲೇ ವರ್ಷವಾಯಿತು
ತಕ್ಷಣ ಅರ್ಧ ಗಂಟೆಗೆಲ್ಲ ಆಫೀಸ್ ಗೆ ಸೇರಿಕೊಂಡು ನನ್ನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ತಾಜಾ ಮಾಹಿತಿಯೇನು? ಎಂಬಂತೆ ಮತ್ತೆ ನಮ್ಮ ವರದಿಗಾರನಿಗೆ ಫೋನ್ ಮಾಡಿ ಕೇಳಿದೆ. 'ಆಗ್ಲೇ ಹೈದರಾಬಾದಿನತ್ತ ಹೊರಟಿದ್ದಾರೆ. ರೆಡ್ಡಿ ಜತೆಗೆ ಅವರ ಭಾವ ಶ್ರೀನಿವಾಸ ರೆಡ್ಡಿಯನ್ನೂ ಕರೆದೊಯ್ದಿದ್ದಾರೆ.
ಇವತ್ತು ಮಧ್ಯಾಹ್ನ ಹೈದರಾಬಾದಿನಲ್ಲಿ ಸಿಬಿಐ ಕೋರ್ಟಿಗೆ produce ಮಾಡ್ತಾರಂತೆ' ಅಂತೆಲ್ಲಾ ಒಂದೊಂದೇ ಮಾಹಿತಿ ನೀಡುತ್ತಾ ಹೋದ. ಒಂದು ಕ್ಷಣವೂ ತಡಮಾಡದೇ ಅಷ್ಟೂ ಮಾಹಿತಿಯನ್ನು ನಿಮ್ಮ ಮೆಚ್ಚಿನ 'ದಟ್ಸ್ ಕನ್ನಡ'ದಲ್ಲಿ news flash ಮಾಡುತ್ತಾ ಹೋದೆ. ಹಾಗೆ ಘಟಸ್ಫೋಟವಾಗಿತ್ತು ರೆಡ್ಡಿ ಬಂಧನದ ಸುದ್ದಿ!
ಅಂದು ಶುರುಹಚ್ಚಿಕೊಂಡಿದ್ದು 'ರೆಡ್ಡಿ ಸಿಬಿಐ ಬಂಧನ' ಕುರಿತಾದ ಸುದ್ದಿ. ಇಂದಿಗೂ 'ದಟ್ಸ್ ಕನ್ನಡ'ದಲ್ಲಿ ನಿರಂತರವಾಗಿ ಹರಿಯುತ್ತಲೇ ಇದೆ. ಕನ್ನಡ ಮಾಧ್ಯಮದಲ್ಲಿ ಬೇರೆ ಯಾರೂ ರೆಡ್ಡಿಯ ಬಗ್ಗೆ, ರೆಡ್ಡಿ ಬಂಧನದ ಒಳಸುಳಿಗಳ ಬಗ್ಗೆ ನಿರಂತರವಾಗಿ, ಇಷ್ಟೊಂದು ಸಮಗ್ರವಾಗಿ, exclusive ಆಗಿ ಮಾಹಿತಿ ನೀಡಿದ್ದೇ ಇಲ್ಲ.
'ದಟ್ಸ್ ಕನ್ನಡ' ಓದುಗರು ರೆಡ್ಡಿ ಕುರಿತಾದ ಏನೇ ಸುದ್ದಿ ಕೊಟ್ಟರೂ ಆದ್ಯವಾಗಿ ಓದುತ್ತಾರೆ. ಇದನ್ನು ಮನಗಂಡು ನಾವೂ ರೆಡ್ಡಿಯ ಬೆನ್ನುಹತ್ತಿದೆವು. ರೆಡ್ಡಿಯ ಜತೆಜತೆಗೆ 'ದಟ್ಸ್ ಕನ್ನಡ'ಕ್ಕೆ ಮತ್ತೊಬ್ಬ ವ್ಯಕ್ತಿ ಪರಿಚಯ ಅನಾವರಣಗೊಳ್ಳುತ್ತಾ ಹೋಯಿತು. ಅದುವೇ CBI ಲಕ್ಷ್ಮಿನಾರಾಯಣ ಎಂಬ ಖಡಕ್ ಅಧಿಕಾರಿಯ ಹೆಸರು.
ಒಂದಲ್ಲ ನೂರು ರೆಡ್ಡಿಗಳನ್ನು ಬೇಕಾದರೂ ಶಿಕ್ಷಿಸುವಷ್ಟು ಸಮರ್ಥ ನಮ್ಮ ಕಾನೂನು: ಹಾಗೆ ನೋಡಿದರೆ ರೆಡ್ಡಿ ಸುದ್ದಿಗೆ ಹೆಚ್ಚು ಮಹತ್ವ ಬಂದಿದ್ದು ಇಬ್ಬರು ವ್ಯಕ್ತಿಗಳಿಂದ. ಒಂದು CBI ಲಕ್ಷ್ಮಿನಾರಾಯಣ, ಮತ್ತೊಬ್ಬರು ಲೋಕಾಯುಕ್ತ ಸಂತೋಷ್ ಹೆಗ್ಡೆ. ನ್ಯಾ. ಹೆಗ್ಡೆ ಅವರು ರೆಡ್ಡಿ ಬಂಧನಕ್ಕೆ ಎರಡು ತಿಂಗಳ ಮುಂಚೆ, ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದರು. ಅದೂ 'ಅಕ್ರಮ ಗಣಿಗಾರಿಕೆಯ' ಫಲವಾಗಿ.
ಜನ ಆಗಲೇ ರೋಸಿ ಹೋಗಿದ್ದರು. ಎರಡೇ ತಿಂಗಳಲ್ಲಿ ರೆಡ್ಡಿ ಬಂಧನವಾಗುತ್ತಿದ್ದಂತೆ ಸಮಾಧಾನದ ನಿಟ್ಟುಸಿರುಬಿಟ್ಟರು. ಇಲ್ಲಿ ಒಂದು ವಿಷಯ ಹೇಳಲೇಬೇಕು. ರಾಜಕಾರಣ ಕಾರಣಗಳು ಏನೇ ಇರಲಿ, ನಮ್ಮ ಕಾನೂನು, ಪೊಲೀಸ್, ತನಿಖಾ ವ್ಯವಸ್ಥೆ ಇದೆಯಲ್ಲ... ಇವು ನಿಜಕ್ಕೂ ಬಲಿಷ್ಠವಾಗಿವೆ.
'ನಮ್ಮ ಕಾನೂನಿನಲ್ಲಿ ನೂರೆಂಟು ತೂತುಗಳಿವೆ' ಎಂದು ಯಾರು ಎಷ್ಟೇ ಕುಹಕವಾಡಿದರೂ ಅದೇ ಕಾನೂನು, ಪೊಲೀಸ್, ತನಿಖಾ ವ್ಯವಸ್ಥೆ ಮನಸ್ಸು ಮಾಡಿದರೆ ಒಂದಲ್ಲ ನೂರು ರೆಡ್ಡಿಗಳನ್ನು ಬೇಕಾದರೂ ಶಿಕ್ಷೆಗೆ ಗುರಿಪಡಿಸಬಹುದಾದಂತಹ ಕಾನೂನು ನಮ್ಮಲ್ಲಿದೆ ಎಂಬುದು ಸ್ವತಃ ರೆಡ್ಡಿ ಪ್ರಕರಣದಿಂದ ಸಾಬೀತಾಗಿದೆ.
Yes, ನಮ್ಮ ಕಾನೂನಿನಲ್ಲಿ loop holeಗಳಿವೆ. ಕೊನೆಗೆ ಕೋರ್ಟ್ ಕಟ್ಟಳೆಗಳನ್ನೇ ಖರೀದಿಸುವ ತಾಕತ್ತು, ಧಾರ್ಷ್ಯ್ಟ ಲಜ್ಜೆಗೇಡಿಗಳಿಗಿವೆ. ಆದರೂ CBI ಲಕ್ಷ್ಮಿನಾರಾಯಣರಂತಹ ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ (again, ರಾಜಕೀಯ ಕಾರಣಗಳು ಏನೂ ಇದ್ದರೂ) ಆರೋಪಿಗೆ ಮಿಸುಕಾಡುವುದಕ್ಕೂ ಅವಕಾಶವಿರುವುದಿಲ್ಲ ಎಂಬುದೇ ಸಮಧಾನದ ಸಂಗತಿ.
ರೆಡ್ಡಿಯ ಬಂಧನವಾಗಿ ಆಗ್ಲೇ ವರ್ಷವಾಗಿ ಹೋಯಿತು. ಈ ಮಧ್ಯೆ ಅವರ ನಿಕಟವರ್ತಿಗಳೂ ಜೈಲು ಸೇರಿಕೊಂಡಿದ್ದಾರೆ. ವಿಧಾನಸೌಧ ಎಂತಹ ಪವಿತ್ರ ಸ್ಥಳ ಎಂಬುದನ್ನೂ ಅರಿಯದೇ ಅದು ಬಳ್ಳಾರಿಯ ಒಂದು ಬೀದಿಯೆಂಬಂತೆ ಅಕ್ಷರಶಃ ಬೀದಿ ರೌಡಿಯ ಹಾಗೆ ಹಿರಿಯ ನಾಯಕರ ಮೈಮೇಲೆ ಬೀಳಲು ಹೋಗಿದ್ದ ಮರಿ ಶಾಸಕ ಕಂಪ್ಲಿ ಬಾಬು.
ಎಲ್ಲದಕು ಕಾರಣನು ಜೈಲು ಜನಾರ್ದನ ಎಂಬಂತೆ ಚೆರ್ಲಪಲ್ಲಿ ಜೈಲಿನಲ್ಲಿ ಈಗ ಕಂಬಿ ಎಣಿಸುವ ದುಃಸ್ಥಿತಿಗೆ ಇಳಿದಿದ್ದಾನೆ. ಮೂಢ ಸೋಮ ರೆಡ್ಡಿಯೂ ಮಾಡಬಾರದ್ದನ್ನೆಲ್ಲ ಮಾಡಿ ಜೈಲು ಸೇರಿಕೊಂಡಿದ್ದಾರೆ. ಜೈಲು ಸೇರಿದ ಮೇಲೂ ತಂಟೆ ಬಿಟ್ಟಿಲ್ಲ.
ಪರಿಸ್ಥಿತಿ ಹೀಗಿರುವಾಗ ರೆಡ್ಡಿ ಪ್ರಕರಣದ ಅಂತ್ಯ ಏನೋ, ಎಂತೋ, ಯಾವಾಗಲೋ ಎಂಬ ಕುತೂಹಲ ಹೆಚ್ಚಾಗುತ್ತಲೇ ಇದೆ. ಯಾವುದಕ್ಕೇ ಆಗಲಿ 'ದಟ್ಸ್ ಕನ್ನಡ' ನೋಡುತ್ತಿರಿ...