ಸಿಸಿಬಿ ಉಗ್ರ ಬೇಟೆ: ಗವರ್ನರ್ ಷಹಬ್ಬಾಸ್, ಕೇಂದ್ರ ಗರಂ
ಆದರೆ ಕೇಂದ್ರ ಸರಕಾರ ಯಾಕೆ ಹೀಗೆ ಹೇಳಿದೆಯೋ ಗೊತ್ತಾಗ್ತಿಲ್ಲ. ಹಾಗೆ ನೋಡಿದರೆ ಅತ್ಯುತ್ಸಾಹದಿಂದ ತಮ್ಮ ಕರ್ತವ್ಯ ನಿಭಾಯಿಸುತ್ತಿರುವ ಬೆಂಗಳೂರು ಪೊಲೀಸರು ಅಪಾರ ಪಾರದರ್ಶಕತೆ ಕಾಪಾಡಿಕೊಂಡಿದ್ದಾರೆ. ಅದಕ್ಕೆಂದೇ ತಮ್ಮ ಕಾರ್ಯಾಚರಣೆಯ ಪ್ರಮುಖ ಘಟ್ಟಗಳನ್ನು ಬ್ಲಾಗ್ ಮೂಲಕ ಕಾಲ ಕಾಲಕ್ಕೆ ಬಹಿರಂಗಪಡಿಸುತ್ತಿದ್ದಾರೆ. ಅಂತಹುದರಲ್ಲಿ ಕೇಂದ್ರ ಸರಕಾರ ಬೆಲೂನನ್ನು ಠುಸ್ಸೆನ್ನಿಸುತ್ತಿರುವುದು ಯಾಕೋ ತಿಳಿಯದಾಗಿದೆ.
ಹಾಗೆ ನೋಡಿದರೆ ಹಂಸರಾಜ್ ಭಾರದ್ವಾಜ್ ಅವರು ಸಿಸಿಬಿ ಉತ್ಸಾಹಕ್ಕೆ ತಣ್ಣಿರೆರೆಚುತ್ತಾರೆ ಎಂದೆಣಿಸಲಾಗಿತ್ತು. ಏಕೆಂದರೆ ದೈನಂದಿನ ಚಟುವಟಿಕೆಗಳಲ್ಲಿ ಕೈಯಾಡಿಸಿ ಬಿಜೆಪಿ ಸರಕಾರವನ್ನು ಗೋಳುಹೊಯ್ದುಕೊಂಡಿರುವ ಖ್ಯಾತಿಯನ್ನು ಹಂಸರಾಜ್ ಭಾರದ್ವಾಜ್ ಸಂಪಾದಿಸಿದ್ದಾರೆ.
ಅಂತಹುದರಲ್ಲಿ ಬೇರೆ ಯಾವುದೇ ದಿಕ್ಕಿನಿಂದ ತಮಗೆ ಸಹಾಯ 'ಹಸ್ತ' ಸಿಗದಿದ್ದಾಗ ನೇರವಾಗಿ ರಾಜಭವನದ ಅಂಗಳದಲ್ಲಿ ಕಾಣಿಸಿಕೊಂಡ ಶಂಕಿತ ಉಗ್ರರ ಪೋಷಕರು 'ಮಹಾಸ್ವಾಮಿ ಭಾರಿ ಅನಾಹುತವಾಗಿಬಿಟ್ಟಿದೆ' ಎಂದು ಅಲವತ್ತುಕೊಂಡಾಗ...
ಹಂಸರಾಜ ಭಾರದ್ವಾಜರು ಕರಗುತ್ತಾರೆ ಎಂದು ಭಾವಿಸಲಾಗಿತ್ತು. ಪೋಷಕರ ದೂರಿನ ಹಿನ್ನೆಲೆಯಲ್ಲಿ ತಕ್ಷಣ ಅವರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರನ್ನು ಕರೆಸಿ ಚರ್ಚೆಯನ್ನೂ ನಡೆಸಿದರು.
ಆದರೆ DIG ಲಾಲ್ ರುಕೂಮ್ ಪಚಾವೋ ಹಾಗೂ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ರಾಜ್ಯಪಾಲರೊಂದಿಗೆ ಶನಿವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚುಕಾಲ ಪ್ರಕರಣದ ಕುರಿತು ಚರ್ಚೆ ನಡೆಸಿ, ಖಡಕ್ಕಾಗಿ case present ಮಾಡಿದ್ದಾರೆ.
ಖುದ್ದು ಕೇಂದ್ರ ಗುಪ್ತಚರ ದಳ ನೀಡಿದ ಮಾಹಿತಿಯ ಮೇರೆಗೇ ಬೆಂಗಳೂರು, ಹುಬ್ಬಳ್ಳಿ, ಆಂಧ್ರಪದೇಶದ ಹಾಗೂ ಮಹಾರಾಷ್ಟ್ರದಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಬಂಧಿಸಲ್ಪಟ್ಟ ಶಂಕಿತ ಉಗ್ರರ ಚಲನವಲನ ಬಗ್ಗೆ ಕಳೆದ 3-4 ತಿಂಗಳಿಂದ ನಿಗಾವಹಿಸಲಾಗಿದೆ.
ಶಂಕಿತರ ಬಗ್ಗೆ ಹಂತ ಹಂತವಾಗಿ ತನಿಖೆ ನಡೆಸಿ ಪರಿಶೀಲನೆ ಮಾಡಿ ಬಂಧಿಸಲಾಗಿದೆಯೇ ಹೊರತು ಆತುರದಿಂದ ಬಂಧಿಸಿಲ್ಲ. ವಿನಾಕಾರಣ ಬಂಧಿಸುವ ಅವಶ್ಯಕತೆಯೂ ಪೊಲೀಸರಿಗಿಲ್ಲ ಎಂದು ಪೊಲೀಸ್ ಅಧಿನಾಯಕರು ಹೇಳುತ್ತಿದ್ದಂತೆ ರಾಜ್ಯಪಾಲರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ರಾಜ್ಯಪಾಲರಿಗೆ ಶಂಕಿತ ಉಗ್ರರ ಬಗ್ಗೆ ಅಗತ್ಯ ವಿವರಣೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು 'ರಾಜ್ಯಪಾಲರಿಗೆ ಬಂಧಿತರ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.
ಪೊಲೀಸರ ಕಾರ್ಯಾಚರಣೆಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾನೂನುರೀತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು, ಪೊಲೀಸರಿಗೆ ಬೇಕಾದ ಸಹಕಾರವನ್ನು ಸರ್ಕಾರದಿಂದ ಪಡೆದುಕೊಳ್ಳುವಂತೆ ಸೂಚಿಸಿದರು' ಎಂದು ಹೇಳಿದ್ದಾರೆ.