ಕೊನೆಗೂ ಪುಟ್ಟಪರ್ತಿ ಸಾಯಿಬಾಬಾ ಉಯಿಲು ಬಹಿರಂಗ
Sathya Sai Central Trust ಅನ್ನು ಸಾಯಿಬಾಬಾ 1972ರಲ್ಲಿ ಸ್ಥಾಪಿಸಿದ್ದರು. ಈ ಟ್ರಸ್ಟ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಇದೆಯೆನ್ನಲಾಗಿದೆ. ಸಾಯಿಬಾಬಾ ನಿಧನಾನಂತರ ಟ್ರಸ್ಟ್ ಸದಸ್ಯರು ಮತ್ತು ಸಾಯಿಬಾಬಾ ಕುಟುಂಬಸ್ಥರ ಮಧ್ಯೆ ಟ್ರಸ್ಟ್ ಆಸ್ತಿಯ ನಿರ್ವಹಣೆ ಬಗ್ಗೆ ತಿಕ್ಕಾಟ ನಡೆದಿತ್ತು.
ಬಾಬಾ ಉಯಿಲು ಉಲ್ಲೇಖ: 1967ರ ಮಾರ್ಚ್ 23ರಂದೇ ಸಾಯಿಬಾಬಾ ಬರೆದಿಟ್ಟಿದ್ದ ಉಯಿಲು ವಿವರ ಹೀಗಿದೆ: ಪ್ರಶಾಂತಿ ನಿಲಯಂನ ಶ್ರೀ ಸತ್ಯ ಸಾಯಿಬಾಬಾ ಆದ ನಾನು ಈ ಕೆಳಗಿನಂತೆ ಘೋಷಿಸುತ್ತೇನೆ. ನಾನು ಪುಟ್ಟಪರ್ತಿ ಗ್ರಾಮದಲ್ಲಿ ಜನಿಸಿದೆ. ಈಗ ನನಗೆ 44 ವರ್ಷ ವಯಸ್ಸಾಗಿದೆ. ನಾನು ಶಾಲೆಗೆ ಸೇರಿಕೊಂಡಿದ್ದೆನಾದರೂ ಶಿಕ್ಷಣ ಮುಂದುವರಿಸಲಿಲ್ಲ. ಬದಲಿಗೆ ಸನಾತನ ಧರ್ಮ ಪಸರಿಸಲು ನನ್ನನ್ನು ಅರ್ಪಿಸಿಕೊಂಡೆ.
ನಾನು ಅವಿವಾಹಿತ. ನನ್ನ 12ನೆಯ ವಯಸ್ಸಿಗೆ ಮನೆಬಿಟ್ಟೆ. ಬಳಿಕ ಖಾವಿ ಬಟ್ಟೆ ಧರಿಸಿ, ಪವಿತ್ರ ಕಾರ್ಯಕ್ಕೆ ನನ್ನನ್ನು ಅರ್ಪಿಸಿಕೊಂಡೆ. ನನ್ನ ಕುಟುಂಬದ ಆಸ್ತಿಯನ್ನು ಸಂಪೂರ್ಣವಾಗಿ ತೊರೆದಿರುವೆ. ನನ್ನದು ಅಂತ ಯಾವುದೇ ಸ್ವರೂಪದ ಆಸ್ತಿ ನನ್ನ ಹೆಸರಿನಲ್ಲಿಲ್ಲ.
ನನ್ನ ಭಕ್ತರು ನೀಡಿದ ಕಾಣಿಕೆ/ದೇಣಿಗೆಗಳು ನನ್ನ ಅಧೀನದಲ್ಲಿರುವ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟಿನ ಸುಪರ್ದಿಯಲ್ಲಿದೆ. ಹಾಗಾಗಿ ನನ್ನ ಬಂಧುಗಳಾಗಲಿ ಇತರೆ ಯಾವುದೇ ವ್ಯಕ್ತಿಯಾಗಲಿ ಈ ಆಸ್ತಿಯ ಬಗ್ಗೆ ಹಕ್ಕು ಸ್ಥಾಪಿಸುವಂತಿಲ್ಲ. ಹಾಗಾಗಿ ಈ ಉಯಿಲನ್ನು ಸಿದ್ಧಪಡಿಸಿರುವೆ. ಇದಕ್ಕೆ ಟ್ರಸ್ಟೀ ಇಂದೂಲಾಲ್ ಷಾ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ ಎಂದು ಬಾಬಾ ತಮ್ಮ ಉಯಿಲಿನಲ್ಲಿ ಉಲ್ಲೇಖಿಸಿದ್ದಾರೆ.
ಬಾಬಾ 4 ದಶಕಗಳ ಹಿಂದೆಯೇ ಹೀಗೇಕೆ ಉಯಿಲು ಬರೆದಿಟ್ಟರು ಎಂಬುದಕ್ಕೆ ಹಾಲಿ ಟ್ರಸ್ಟೀಗಳು ವಿವರಣೆ ನೀಡಿದ್ದಾರೆ: ಅದು 1998ರ ಕಾಲಘಟ್ಟ- ಈ ಸಂದರ್ಭದಲ್ಲಿ ಟ್ರಸ್ಟಿನಲ್ಲಿ ವಿಪರೀತ ಚಟುವಟಿಕೆಗಳು ಕಂಡುಬರುತ್ತಿತ್ತು.
ಸಾಯಿಬಾಬಾ ಅನೇಕ ಟ್ರಸ್ಟೀಗಳನ್ನು ನೇಮಿಸಿದ್ದರು. ಟ್ರಸ್ಟಿನ ಆಚಾರ-ವಿಚಾರಗಳ ಬಗ್ಗೆ ಪ್ರತ್ಯಕ್ಷವಾಗಿ ಮಾರ್ಗದರ್ಶನ ನೀಡುತ್ತಿದ್ದರು. ಪುಟ್ಟಪರ್ತಿ ಆಶ್ರಮದಲ್ಲಿ ಪೂರ್ಣಚಂದ್ರ ಆಡಿಟೋರಿಯಂನಲ್ಲಿಡಲಾಗುತ್ತಿದ್ದ ಅಷ್ಟೂ ದಾಖಲೆ ಪತ್ರಗಳನ್ನು ಬಾಬಾ ಅವರೇ ಖುದ್ದಾಗಿ ಪರಿಶೀಲಿಸುತ್ತಿದ್ದರು. ಟ್ರಸ್ಟೀಗಳೂ ಇದಕ್ಕೆ ನೆರವಾಗುತ್ತಿದ್ದರು. ಆ ಸಂದರ್ಭದಲ್ಲಿ ಟ್ರಸ್ಟೀ ಒಬ್ಬರು ಈ ಉಯಿಲನ್ನು ಬಾಬಾರ ಗಮನಕ್ಕೆ ತಂದರು. ಅದಕ್ಕೆ ಬಾಬಾ 'ಇದನ್ನು ಸುರಕ್ಷಿತವಾಗಿ ಎತ್ತಿಡಿ. ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ' ಎಂದು ಸೂಚನೆ ನೀಡಿದ್ದರು.
ಹಾಗಾಗಿ, ಟ್ರಸ್ಟೀಗಳು ಅಂದಿನಿಂದ ಬಾಬಾ ಉಯಿಲನ್ನು ಪ್ರತ್ಯೇಕವಾಗಿ ಸುರಕ್ಷಿತವಾಗಿ ಎತ್ತಿಟ್ಟಿದ್ದರು. ಆದರೆ ಬಾಬಾ ನಿಧನಾನಂತರ 2012ರ ಜುಲೈ 1ರಂದು ಟ್ರಸ್ಟೀ ಇಂದೂಲಾಲ್ ಷಾ ಅವರ ಸಮ್ಮುಖದಲ್ಲಿ ಬಾಬಾ ಉಯಿಲನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಲಾಯಿತು ಎಂದು ಒಬ್ಬ ಟ್ರಸ್ಟೀ ತಿಳಿಸಿದ್ದಾರೆ. ಉಯಿಲಿನ ಅಷ್ಟೂ ವಿವರಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.