ಕಲ್ಲಿದ್ದಲು ಮಸಿ ವಿರೋಧಿಸಿ ಸೆ.4 ಕಾಲೇಜು ಬಂದ್?
ಕಲ್ಲಿದ್ದಲು ಮತ್ತು ವಿಮಾನಯಾನ ಹಗರಣಗಳನ್ನು ವಿರೋಧಿಸಿ ಬಿಜೆಪಿ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಭ್ರಷ್ಟಾಚಾರ ವಿರೋಧಿ ಯುವ ಸಂಘಟನೆ ಮಂಗಳವಾರ ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೂಡ ಈ ಸಂಘಟನೆಗಳು ಕಾಲೇಜು ಬಂದ್ ಮಾಡಲು ಕರೆ ನೀಡಿವೆ ಎಂದು ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.
ಆದರೆ, ಈ ಕಾಲೇಜು ಬಂದ್ ಕರೆಗೆ ಕರ್ನಾಟಕದಲ್ಲಿನ ಕಾಲೇಜುಗಳು ಯಾವ ರೀತಿ ಸ್ಪಂದಿಸುತ್ತವೆ ಎಂಬುದು ತಿಳಿದುಬಂದಿಲ್ಲ. ಈ ಬಂದ್ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿದ್ದರೂ ಶಾಲೆಗಳು ರಜಾ ಘೋಷಿಸುತ್ತವಾ ಎಂಬುದು ಕೂಡ ಖಾತ್ರಿಯಾಗಿಲ್ಲ. ಆದರೆ, ಶಾಲಾಕಾಲೇಜುಗಳು ಬಂದ್ ಆಗಿರುತ್ತವೆ ಎಂಬ ಗಾಳಿಸುದ್ದಿ ಮಾತ್ರ ಬೆಂಗಳೂರಿನ ಕಾಲೇಜು ಕಾಲೇಜುಗಳಲ್ಲಿ ರೌಂಡ್ ಹೊಡೆಯುತ್ತಿದೆ.
ಕೇಂದ್ರ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ವಿರುದ್ಧ ಕೂಡ ಜನರು ದಂಗೆ ಎದ್ದಿದ್ದಾರೆ. ಅವರು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಚತ್ತೀಸಗಢ ರಾಜ್ಯಗಳಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿರುವುದನ್ನು ವಿರೋಧಿಸಿ ಎಬಿವಿಪಿ ಮತ್ತು ವೈಎಸಿ ಸಂಘಟನೆಗಳು ಮಹಾರಾಷ್ಟ್ರದ ಗೊಂಡಿಯಾದಲ್ಲಿ ಪ್ರತಿಭಟನೆ ಆಯೋಜಿಸಿವೆ. ಪ್ರಫುಲ್ ಪಟೇಲ್ ಅವರು ಏರ್ಪೋಟ್ಗಾಗಿ ಮೀಸಲಾಗಿದ್ದ ಜಮೀನನ್ನು ಖಾಸಗಿ ಕಂಪನಿಗೆ ಕಡಿಮೆ ಬೆಲೆಗೆ ಮಾರುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಬಂದ್ ವಿರುದ್ಧ ನೌಕರರಿಗೆ ಎಚ್ಚರಿಕೆ : ಕಲ್ಲಿದ್ದಲು ಹಗರಣ ವಿರೋಧಿಸಿ ಕಾಲೇಜು ಬಂದ್ ನೀಡಲಾಗಿದ್ದರೂ, ಸರಕಾರಿ ನೌಕರರಾರೂ ಬಂದ್ ಬೆಂಬಲಿಸಿ ಪ್ರತಿಭಟನೆಗಿಳಿದರೆ ದುಷ್ಪರಿಣಾ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳು ಸರಕಾರಿ ನೌಕರರಿಗೆ ಎಚ್ಚರಿಕೆ ನೀಡಿವೆ.
ಬಂದ್ ಇದೆ ಎಂದು ನೌಕರಿಗೆ ಚಕ್ಕರ್ ಹಾಕಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಅಸ್ಸಾಂ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ. ಬಂದ್ ಬೆಂಬಲಿಸಿ ಕೆಲಸಕ್ಕೆ ಬರದಿದ್ದರೆ ಸಂಬಳ ಕಟ್ ಮಾಡಲಾಗುವುದು ಅಥವಾ ಸೇವೆಯಿಂದಲೇ ವಜಾಗೊಳಿಸಲಾಗುವುದು ಅಥವಾ ಇನ್ನಿತರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅಸ್ಸಾಂ ಸರಕಾರ ಮುನ್ನೆಚ್ಚರಿಕೆ ನೀಡಿದೆ.