ಸಿಎಂ ಶೆಟ್ಟರ್ ಒಬ್ಬ ರೋಲಿಂಗ್ ಶೆಟ್ಟರ್,ಎಚ್ಡಿಕೆ
ಜಿಲ್ಲೆಯ ಬಂಗಾರಪೇಟೆಯಲ್ಲಿ ಭಾನುವಾರ (ಸೆ 2) ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ರೋಲಿಂಗ್ ಶೆಟರ್ ಅನ್ನು ಹೇಗೆ ಮೇಲೆ ಕೆಳಗೆ ಮಾಡುತ್ತೇವೆಯೋ ಅದೇ ರೀತಿ ಅದರ ಕಂಟ್ರೋಲ್ ಯಡಿಯೂರಪ್ಪ ಅವರ ಬಳಿಯಿದೆ.
ಕಾಟಾಚಾರಕ್ಕೆ ರಾಜ್ಯಕ್ಕೆ ಒಂದು ಮುಖ್ಯಮಂತ್ರಿ ಎನ್ನುವಂತೆ ಜಗದೀಶ್ ಶೆಟ್ಟರ್ ಯೆಡಿಯೂರಪ್ಪನವರು ಹೇಳಿದಂತೆ ನಡೆಯುವ ರೋಲಿಂಗ್ ಶೆಟ್ಟರ್ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಘೋಷಣೆ ಸರಕಾರದ ಒಂದು ಕಣ್ಣು ಒರೆಸುವ ತಂತ್ರ. ಈ ಸಾಲ ಮನ್ನಾ ಘೋಷಣೆಗೆ 3200 ಕೋಟಿ ರೂಪಾಯಿಯ ಅವಶ್ಯಕತೆಯಿದೆ. ನನ್ನ ಅಧಿಕಾರಿಗಳು ನನಗೆ ನೀಡಿದ ಮಾಹಿತಿ ಪ್ರಕಾರ ಸರಕಾರ ಇದರಲ್ಲಿ ಐದು ಪೈಸೆ ಬಿಡುಗಡೆ ಮಾಡುವುದಿಲ್ಲ.
ನಾಲ್ಕು ವರ್ಷದಿಂದ ಈ ಸರಕಾರ ಏನು ನಿದ್ದೆ ಮಾಡಿತ್ತಾ? ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಈಗ ಇದ್ದಿದ್ದ ಹಾಗೆ ರೈತರ ಮೇಲೆ ಉಕ್ಕಿ ಹರಿಯುತ್ತಿರುವ ಪ್ರೀತಿಯ ಹಿಂದೆ ಹೊಲಸು ರಾಜಕೀಯವಿದೆ ಎನ್ನುವುದು ಸಾರ್ವಜನಿಕರಿಗೆ ತಿಳಿದಿರಲಿ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ ಗಳ ಮೇಲೆ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಲಿ, ಅದಕ್ಕಾಗಿ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಯಡಿಯೂರಪ್ಪನವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಎಚ್ಡಿಕೆ, ಮೊದಲು ಯಡಿಯೂರಪ್ಪನವರು ತಮ್ಮದೇ ಇಲ್ಲಿನ ಸರಕಾರಕ್ಕೆ ಸಹಕಾರಿ ಬ್ಯಾಂಕ್ ಗಳ ಸಾಲ ಮನ್ನಾ ಮಾಡಲು ಒತ್ತಡ ಹೇರಲಿ ಆಮೇಲೆ ದೆಹಲಿಗೆ ಹೋಗಲಿ ಎಂದು ವ್ಯಂಗ್ಯವಾಡಿದ್ದಾರೆ.
ಈ ರಾಜ್ಯಕ್ಕೆ ಇಂದಲ್ಲಾ ನಾಳೆ ಪ್ರಾದೇಶಿಕ ಪಕ್ಷಗಳೇ ಗಟ್ಟಿ. ನಮ್ಮ ಪಕ್ಷಕ್ಕೆ ಪೂರ್ಣಾವಧಿ ಅಧಿಕಾರ ನೀಡಿ ನೋಡಿ, ರಾಜ್ಯದ ಜನರ ಹಿತದೃಷ್ಟಿ ಕಾಪಾಡಿಕೊಂಡು ಉತ್ತಮ ಆಡಳಿತ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ನಾನು ನಿಮಗೆ ಮಾತು ನೀಡುತ್ತಿದ್ದೇನೆ.
ಇಂದಿನಿಂದಲೇ ಪಕ್ಷ ಅಧಿಕಾಕ್ಕೆ ಬರುವ ನಿಟ್ಟಿನಲ್ಲಿ ನೀವು ಕಾರ್ಯಪ್ರವೃತ್ತರಾಗ ಬೇಕೆಂದು ಕುಮಾರಸ್ವಾಮಿ ಪಕ್ಷದ ಸದಸ್ಯರಿಗೆ ಕರೆ ನೀಡಿದ್ದಾರೆ.