ನರಮೇಧ: ಬಿಜೆಪಿ ಮಾಜಿ ಸಚಿವೆಗೆ 28 ವರ್ಷ ಶಿಕ್ಷೆ
ನರೋಡಾ ಪಾಟಿಯಾ ಹತ್ಯಾಕಾಂಡ ಘಟನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಮಾಯಾ ಕೊಡ್ನಾನಿ ಹಾಗೂ ಮಾಜಿ ಬಜರಂಗ ದಳ ಮುಖಂಡ ಬಾಬು ಬಜರಂಗಿ ಹಾಗೂ ಇತರರು ಸೇರಿದಂತೆ 32 ಆರೋಪಿಗಳಿಗೆ ವಿಶೇಷ ನ್ಯಾ ಜ್ಯೋತ್ಸ್ನಾ ಯಾಗ್ನಿಕ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಮಾಯಾಬೆನ್ ಕೊಡ್ನಾನಿ ಅವರಿಗೆ ಒಟ್ಟಾರೆ 28 ವರ್ಷ ಶಿಕ್ಷೆ ಪ್ರಮಾಣ ಘೋಷಿಸಲಾಗಿದೆ. ಬಾಬು ಬಜರಂಗಿ ಅವರಿಗೆ ಸಾಯುವ ತನಕ ಜೈಲಿನಲ್ಲಿರುವ ಶಿಕ್ಷೆ ನೀಡಲಾಗಿದೆ. ಉಳಿದ ಆರೋಪಿಗಳಿಗೆ (10 +21) 31 ವರ್ಷ ಶಿಕ್ಷೆ ಪ್ರಮಾಣ ನೀಡಲಾಗಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಪ್ತೆ ಎನ್ನಲಾದ ಕೊಡ್ನಾನಿ ಅವರಿಗೆ ಐಪಿಸಿಯ ಪ್ರತ್ಯೇಕ ವಿಭಾಗಗಳ ಅಡಿಯಲ್ಲಿ ಶಿಕ್ಷೆ ಪ್ರಮಾಣ ವಿಂಗಡಿಸಲಾಗಿದೆ. ಸೆಕ್ಷನ್ 326 ಅಡಿಯಲ್ಲಿ 10 ವರ್ಷ ಹಾಗೂ 120(B), 302 ಹಾಗೂ 307 ಅಡಿಯಲ್ಲಿ 18 ವರ್ಷ ಶಿಕ್ಷೆ ನೀಡಲಾಗಿದೆ.
ನರೋಡಾ ಪ್ರಾಂತ್ಯದಿಂದ ಮೂರು ಬಾರಿ ಆಯ್ಕೆಯಾಗಿದ್ದ ಮಾಯಾ ಅವರು ಗೋಧ್ರಾ ಹತ್ಯಾಕಾಂಡದ ನಂತರದ ಗಲಭೆಗೆ ಸಂಬಂಧಿಸಿದಂತೆ ಶಿಕ್ಷೆ ಪಡೆಯುತ್ತಿರುವ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ.
ನರೋಡಾ ಪಾಟಿಯಾ ಹತ್ಯಾಕಾಂಡ: ಈ ದುರ್ಘಟನೆಯಲ್ಲಿ 97 ಮುಸ್ಲಿಮರ ಹತ್ಯೆಯಾಗಿತ್ತು. ಘಟನೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಗುಂಪೇ ಹೊಣೆಯೆಂದು ಆರೋಪಿಸಲಾಗಿತ್ತು.
ಹೆಚ್ಚುವರಿ ಮುಖ್ಯ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ಞಿಕ್ ಅವರು ಕಳೆದ ತಿಂಗಳು ವಿಚಾರಣೆಯನ್ನು ಪೂರ್ತಿಗೊಳಿಸಿದ್ದು, ತೀರ್ಪನ್ನು ಬುಧವಾರ (ಆ.29) ಪ್ರಕಟಿಸಿ, 32 ಜನ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದರು. ಈ ಪ್ರಕರಣದಲ್ಲಿ 29 ಜನ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು.
ಮೋದಿ ಸರ್ಕಾರದ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಹಾಗೂ ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದರು.
ಗೋಧ್ರಾ ಹತ್ಯಾಕಾಂಡದ ಬಳಿಕ ನಡೆದ ಹಿಂಸಾಚಾರದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ವಿಚಾರಣೆ 2009ರ ಆಗಸ್ಟ್ ನಲ್ಲಿ ಪ್ರಾರಂಭವಾಗಿತ್ತು. ಗೋಧ್ರಾ ರೈಲು ದುರಂತದ ಮರು ದಿನ ನಗರದ ನರೋಡಾ ಪಾಟಿಯಾ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ 97 ಜನರನ್ನು ಉದ್ರಿಕ ಗುಂಪೊಂದು ಹತ್ಯೆ ಮಾಡಿತ್ತು. ಸಬರಮತಿ ರೈಲು ದುರಂತ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಬಂದ್ಗೆ ಕರೆ ನೀಡಿದ್ದ ವೇಳೆಯಲ್ಲಿ ಈ ಹತ್ಯಾಕಾಂಡ ನಡೆದಿತ್ತು.
94 ಮೃತ ದೇಹಗಳಲ್ಲಿ 84 ಶವಗಳ ಗುರುತು ಪತ್ತೆಯಾಗಿತ್ತು. ಉಳಿದ ಶವಗಳ ಪತ್ತೆಯಾಗಿರಲಿಲ್ಲ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(SIT)ಗೆ ವಹಿಸಲಾಗಿತ್ತು. ಒಟ್ಟು 8 ಛಾರ್ಜ್ ಶೀಟ್ ಗಳನ್ನು ಈ ಪ್ರಕರಣದಲ್ಲಿ ಸಲ್ಲಿಸಲಾಗಿತ್ತು.
ಈ ಪ್ರಕರಣದ ಆರೋಪಿಗಳಾಗಿದ್ದ ತೇಜಸ್ ಪಾಠಕ್ ಹಾಗೂ ಮೋಹನ್ ನೇಪಾಳಿ ಅವರು ಜಾಮೀನಿನ ಮೇಲೆ ಹೊರಬಿದ್ದಿದ್ದಾರೆ. ವಿಚಾರಣಾ ಅವಧಿಯಲ್ಲಿ 8 ಆರೋಪಿಗಳು ಮೃತಪಟ್ಟಿದ್ದಾರೆ. ಒಬ್ಬನ ಖುಲಾಸೆಯಾಗಿದ್ದು ಹಾಗೂ ವಿನೋದ್ ಮರಾಠೆ ಎಂಬ ಆರೋಪಿ ನಾಪತ್ತೆಯಾಗಿದ್ದಾನೆ.