ನೀರಾ ರಾಡಿಯಾ ಟೇಪ್ ಲೀಕ್ ಆಗಿಲ್ಲ
ಮಾಜಿ ಕಾರ್ಪೊರೇಟ್ ಸಂಪರ್ಕಾಧಿಕಾರಿ ನೀರಾ ರಾಡಿಯಾರ ಧ್ವನಿಮುದ್ರಿತ ಸಂಭಾಷಣೆಯು ಸೋರಿಕೆಯಾಗಿದ್ದಕ್ಕಾಗಿ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಹಾಗೂ ಈ ಬಗ್ಗೆ ಸರ್ಕಾರ ತನಿಖಾ ವರದಿ ತೃಪ್ತಿಕರವಾಗಿಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಭವಿಷ್ಯದಲ್ಲಿ ಇಂತಹ ಸೋರಿಕೆಗಳನ್ನು ತಡೆಗಟ್ಟಲು ಸೂಕ್ತ ಕಾರ್ಯತಂತ್ರವೊಂದನ್ನು ಅಳವಡಿಸುವಲ್ಲಿಯೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ನ್ಯಾ. ಜಿ.ಎಸ್.ಸಿಂಘ್ವಿ ಹಾಗೂ ಎಸ್.ಜೆ. ಮುಖ್ಯೋಪಾಧ್ಯಾಯ ಅವರಿದ್ದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಟೇಪ್ಸ್ ಎಲ್ಲವೂ ತಿರುಚಲಾಗಿದೆ ಎಂದು ಸುಪ್ರೀಂಕೋರ್ಟ್ ಗೆ ಯುಪಿಎ ಸರ್ಕಾರ ಹೇಳಿಕೆ ನೀಡಿತ್ತು. ಆದರೆ, ಸರ್ಕಾರದ ಹೇಳಿಕೆ ಈಗ ಸರ್ಕಾರಕ್ಕೆ ಮುಳುವಾಗಿ ಪರಿಣಮಿಸಿದೆ.
ಟೇಪ್ಸ್ ಬಹಿರಂಗ ಮಾಡಿದವರು ಯಾರು? : ಮೊದಲ ಹಾಗೂ ಕೊನೆಯ ಸಂಭಾಷಣೆ ಏಕೆ ಹೊಂದಿಕೆಯಾಗುತ್ತಿಲ್ಲ ಎಂಬುದರ ಬಗ್ಗೆ ತನಿಖಾಧಿಕಾರಿಗಳಿಗೆ ಸ್ಪಷ್ಟ ಮಾಹಿತಿಯಿಲ್ಲ ಎಂದು ನ್ಯಾಯಪೀಠ ಹೇಳಿದೆ.2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐ ಪ್ರಕಾರ ಇದುವರೆಗೂ 5000 ಕರೆಗಳನ್ನು ದಾಖಲಿಸಿದ್ದು, ಅದರಲ್ಲಿ ಈಗಾಗಲೇ 104 ಧ್ವನಿ ಮುದ್ರಣಗಳು ಸೋರಿಕೆಯಾಗಿತ್ತು.
'ಇಂಥ ತನಿಖಾ ವರದಿಗಳು ತೃಪ್ತಿಕರವಾಗಿರುವುದು ತುಂಬಾ ಕಷ್ಟ. ಇವುಗಳ ಬಗ್ಗೆ ಕಡಿಮೆ ಹೇಳಿದಷ್ಟು ಒಳ್ಳೆಯದು. ಇಂಥ ಸೋರಿಕೆಗಳಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ'' ಎಂದು ನ್ಯಾಯಪೀಠ ಹೇಳಿದೆ. ತಾನಾಗಲಿ ಅಥವಾ ತನ್ನ ಅಧಿಕಾರಿಗಳಾಗಲಿ ನೀರಾ ರಾಡಿಯಾರ ಧ್ವನಿಮುದ್ರಿತ ಸಂಭಾಷಣೆಯನ್ನು ಸೋರಿಕೆ ಮಾಡಿಲ್ಲವೆಂದು ಕೇಂದ್ರ ಸರಕಾರ ಅಹವಾಲು ಸಲ್ಲಿಸಿದ ಬಳಿಕ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
'ಭವಿಷ್ಯದಲ್ಲಿ ಇಂತಹ ಸೋರಿಕೆಗಳನ್ನು ಹೇಗೆ ತಡೆಗಟ್ಟುವುದು ಎಂಬ ಬಗ್ಗೆ ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ. ಭವಿಷ್ಯದಲ್ಲೂ ಇದು ಮತ್ತೆ ಸಂಭವಿಸಲಿದೆ. ನಿಮಗೆ ಗೌಪ್ಯವನ್ನು ಸಂರಕ್ಷಿಸಲು ಸಾಧ್ಯವಿಲ್ಲದಿದ್ದಲ್ಲಿ, ಯಾಕೆ ನೀವು ಕದ್ದಾಲಿಸುವಿರಿ' ಎಂದು ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.
ನೀರಾ ರಾಡಿಯಾ ಸಂಭಾಷಣೆಯ ಸಿಡಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರವು ಯಾವುದೇ ಇಲಾಖೆಗೂ ಕ್ಲೀನ್ಚಿಟ್ ನೀಡಿಲ್ಲವೆಂದು ಸರಕಾರದ ತನಿಖಾ ವರದಿಯು ತಿಳಿಸಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿತು.
ತನ್ನ ಹಾಗೂ ನೀರಾ ರಾಡಿಯಾ ಸಂಭಾಷಣೆಯ ಧ್ವನಿಮುದ್ರಿತ ಟೇಪ್ಗಳ ಸೋರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಟಾಟಾ ಸಮೂಹ ಸಂಸ್ಥೆಯ ವರಿಷ್ಠ ರತನ್ ಟಾಟಾ 2010ರ ನವೆಂಬರ್ 29ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಂಭಾಷಣೆಗಳ ಸೋರಿಕೆಯು, ಸಂವಿಧಾನದ 21ನೆ ವಿಧಿಯ ಪ್ರಕಾರ ಪೌರನ ಬದುಕುವ ಹಾಗೂ ಖಾಸಗಿತನದ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಅವರು ಆಪಾದಿಸಿದ್ದರು.
ಟಾಟಾ ಸಮೂಹಸಂಸ್ಥೆಯ ಲಾಬಿಗಾರ್ತಿಯಾಗಿದ್ದ ನೀರಾ ರಾಡಿಯಾ 9 ವರ್ಷಗಳಲ್ಲಿ 300 ಕೋಟಿ ರೂ.ಗಳ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರೆಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು 2007ರ ನವೆಂಬರ್ 16ರಂದು ದೂರೊಂದನ್ನು ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಆಕೆಯ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಸಿ, ದಾಖಲು ಮಾಡಿತ್ತು.